ರಾಮನಗರ: ಉಕ್ಕಿ ಹರಿಯುತ್ತಿದೆ ಕಾವೇರಿ ಸಂಗಮ, ಜಿಲ್ಲಾಧಿಕಾರಿ ಎಚ್ಚರಿಕೆ
ರಾಮನಗರ, ಆಗಸ್ಟ್ 19: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿರುವ ಅತಿವೃಷ್ಠಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಸಂಗಮ ಮತ್ತು ಮೇಕೆದಾಟು ಕಾವೇರಿ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಆದೇಶ ಹೊರಡಿಸಿದ್ದಾರೆ.
Recommended Video
ಕನಕಪುರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಕಾವೇರಿ ನದಿಯು ಯಾವುದೇ ಸಮಯದಲ್ಲಿ ಪ್ರವಾಹದಿಂದ ನದಿ ಉಕ್ಕಿ ಹರಿಯುವ ಸಂಭವವಿದೆ. ಈಗಾಗಲೇ ಭಾರೀ ಮಳೆಯಿಂದ ತುಂಬಿರುವ ಕಬಿನಿ, ಹಾರಂಗಿ ಮತ್ತು ಕೆ.ಆರ್.ಎಸ್ ಜಲಾಶಯಗಳಿಂದ ನೀರನ್ನು ನದಿಗೆ ಹರಿಸುವ ಭೀತಿ ಮೂಡಿದೆ.
ಕುದೂರು ಗಣೇಶ ಮೂರ್ತಿ ತಯಾರಕರ ಸಂಭ್ರಮ ಕಸಿಯಿತೇ ಕೊರೊನಾ?
ಮೂರೂ ಜಲಾಶಯಗಳಿಂದ ನೀರನ್ನು ಹೊರಕ್ಕೆ ಬಿಡುವುದರಿಂದ ಕನಕಪುರ ತಾಲ್ಲೂಕಿನ ವ್ಯಾಪ್ತಿಯ ಕಾವೇರಿ ನದಿ ದಡದಲ್ಲಿ ಬರುವ ವಸತಿ ಗ್ರಾಮಗಳಾದ ಬೊಮ್ಮಸಂದ್ರ, ಕುಪ್ಪೆದೊಡ್ಡಿ ಮತ್ತು ಸಂಗಮ ಗ್ರಾಮಸ್ಥರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಹಾಗೂ ನದಿಯಲ್ಲಿ ಯಾರೂ ಇಳಿಯಬಾರದು ಎಂದು ಆದೇಶ ಹೊರಡಿಸಿದ್ದಾರೆ.
ರಾಮನಗರ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕನಕಪುರ ತಾಲ್ಲೂಕು ದಂಡಾಧಿಕಾರಿ ವರ್ಷಾ ಒಡೆಯರ್, ಸಂಗಮ ವ್ಯಾಪ್ತಿಯ ಗ್ರಾಮಗಳಲ್ಲಿ ಸೂಚನಾ ಫಲಕ ಅಳವಡಿಸಿ ಗ್ರಾಮಸ್ಥರನ್ನು ಎಚ್ಚರಿಸಲು ಮುಂದಾಗಿದ್ದಾರೆ.