"ಮಂತ್ರಿಗಿರಿಗಷ್ಟೇ ಈ ಉಪಚುನಾವಣೆ" ಎಂದು ಬಿಜೆಪಿ ಜರಿದ ಡಿ ಕೆ ಸುರೇಶ್
ರಾಮನಗರ, ನವೆಂಬರ್ 30: "ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮಂತ್ರಿಗಿರಿಗಾಗಿ ಅಷ್ಟೇ" ಎಂದು ಚುನಾವಣೆ ವಿರುದ್ಧ ರಾಮನಗರದಲ್ಲಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
"ಬಿಜೆಪಿ ನಾಲ್ಕು ತಿಂಗಳಿಂದ ನಡೆಸುತ್ತಿರುವ ಆಡಳಿತ ಜನರಿಗೆ ಸಮಾಧಾನ ತಂದಿಲ್ಲ. ನೆರೆ, ಬರ ಹಾಗೂ ಆರ್ಥಿಕ ವ್ಯವಸ್ಥೆ ಕುಸಿದು ಈಗಿನ ಯುವಕರು ಬಹಳ ಸಂಕಷ್ಟದಲ್ಲಿದ್ದಾರೆ. ರೈತರ ಕಷ್ಟ ಸುಖಗಳಿಗೂ ಬಿಜೆಪಿಯವರು ಸ್ಪಂದಿಸುತ್ತಿಲ್ಲ" ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಮಂತ್ರಿ ಮಾಡ್ತೀನಿ ಅನ್ನೋದೂ ಭ್ರಷ್ಟಾಚಾರನೇ ಅಲ್ವ?; ಬಿಜೆಪಿಗೆ ಡಿಕೆಶಿ ಪ್ರಶ್ನೆ
"ಉಪ ಚುನಾವಾಣೆ ರಾಜ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಚುನಾವಣೆಯಲ್ಲ. ಮಂತ್ರಿಗಿರಿಗೆ ಆಸೆಪಟ್ಟು ಮಾತೃ ಪಕ್ಷಕ್ಕೆ ದ್ರೋಹ ಮಾಡಿ ಮಂತ್ರಿಯಾಗ್ತೀವಿ ಎಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರೆಲ್ಲರನ್ನು ತಿರಸ್ಕಾರ ಮಾಡಬೇಕು ಅಂತ ಎಲ್ಲಾ ಕ್ಷೇತ್ರದ ಮತದಾರರಲ್ಲಿ ಮೂಲಕ ಮನವಿ ಮಾಡುತ್ತೇನೆ" ಎಂದರು.
ಇನ್ನು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಸರ್ಕಾರ ಚಿಕ್ಕಬಳ್ಳಾಪುರ ಜನರಿಗೆ ಮೋಸ ಮಾಡುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಮಯದಲ್ಲೇ ಮೆಡಿಕಲ್ ಕಾಲೇಜು ಕನಕಪುರಕ್ಕೆ ಮಂಜೂರಾಗಿತ್ತು. ಕೇಂದ್ರ ಸರ್ಕಾರಕ್ಕೆ ಹಣಕಾಸಿನ ನೆರವಿಗೆ ಕಳುಹಿಸಿದರು.
ಈಗ ಚಿಕ್ಕಬಳ್ಳಾಪುರಕ್ಕೆ 900 ಕೋಟಿ ರೂ ಮಂಜೂರಾತಿಯಾಗಿದೆ. ರಾಜಕೀಯ ಕಾರಣದಿಂದ ಕನಕಪುರ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋಗಿದ್ದಾರೆ. ಚುನಾವಣೆ ಬಳಿಕ ಹೋರಾಟ, ರೂಪುರೇಷೆಗಳನ್ನು ರಚನೆ ಮಾಡುತ್ತೇವೆ" ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹತ್ತು ತಿಂಗಳ ನಂತರ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳ ಬಗ್ಗೆ ಡಿ.ಕೆ.ಸುರೇಶ್ ಗರಂ ಆಗಿದ್ದರು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ಸಭೆಗೆ ಗೈರಾಗಿದ್ದು ಕಂಡ ಸಂಸದ ಡಿ.ಕೆ.ಸುರೇಶ್, ಟೌನ್ ಪಿಎಸ್ ಐ ಹೇಮಂತ್ ಕುಮಾರ್ ಮೂಲಕ ವಾರ್ನಿಂಗ್ ಕೊಟ್ಟರು.