ಕೊರೊನಾ: ರಾಮನಗರದಲ್ಲಿ ಆರ್ಯ ವೈಶ್ಯ ಸಮಾಜದಿಂದ ರಕ್ತದಾನ
ರಾಮನಗರ, ಮೇ 7: ಕೋವಿಡ್-19 ವಿರುದ್ಧ ಹೋರಾಟಕ್ಕೆ ಸುಮಾರು 150 ಯೂನಿಟ್ ರಕ್ತ ಸಂಗ್ರಹಿಸಿ ಜಿಲ್ಲಾ ಬ್ಲಡ್ ಬ್ಯಾಂಕ್ ಗೆ ನೀಡುವ ಮೂಲಕ ಆರ್ಯ ವೈಶ್ಯ ಸಮಾಜ ಅರ್ಥಪೂರ್ಣವಾಗಿ ವಾಸವಿ ಜಯಂತಿ ಆಚರಿಸಿದರು.
Recommended Video
ಕೊರೊನಾ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲಿ ರಕ್ತಕ್ಕೆ ಕೊರತೆ ಉಂಟಾಗಿದ್ದನ್ನು ಮನಗಂಡ ರಾಜ್ಯ ಆರ್ಯವೈಶ್ಯ ಸಮಾಜ, ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿತ್ತು.
ಆ ಮೂಲಕ ಈಗಾಗಲೇ 3350 ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹಿಸುವ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದು, ವಾಸವಿ ಜಯಂತಿಯ ಅಂಗವಾಗಿ ರಾಮನಗರದ ಶ್ರೀ ಕನ್ಯಕಾ ಮಹಲ್ನಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿತ್ತು.
ವಿದ್ಯಾನಿಕೇತನ ಟ್ರಸ್ಟ್, ರೋಟರಿ ಸಿಲ್ಕ್ ಸಿಟಿ ಸಂಸ್ಥೆಗಳು ಸಂಯುಕ್ತವಾಗಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್, ""ಕೆಲವು ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ತೀವ್ರವಾಗಿದೆ. ರಕ್ತದ ಕೊರತೆಯಿಂದಾಗಿ ಯಾರೊಬ್ಬರ ಜೀವಕ್ಕೂ ತೊಂದರೆ ಆಗಬಾರದು, ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಇದೆ. ಆರೋಗ್ಯವಂತ ನಾಗರೀಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕಾಗಿದೆ.'' ರಾಜ್ಯದಲ್ಲಿ 5 ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸವ ವಿಶ್ವಾಸ ವ್ಯಕ್ತಪಡಿಸಿದರು.
ಬೆಳ್ಳಿ ರಕ್ತ ನಿಧಿಯ ಮುಖ್ಯಸ್ಥ ರಾಮು ಮಾತನಾಡಿ, ""ವಿಶ್ವದೆಲ್ಲಡೆ ಕಾಡುತ್ತಿರುವ ಕೊರೊನಾ ವೈರಸ್ ರಕ್ತದ ಮೂಲಕ ಹರಡುವುದಿಲ್ಲ ಎಂಬ ವರದಿ ಇದೆ. ಶಿಬಿರದಲ್ಲಿ ರಕ್ತದಾನಕ್ಕೆ ಮುನ್ನ ಪ್ರತಿ ದಾನಿಯ ಆರೋಗ್ಯ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಡಿಜಿಟಲ್ ಥರ್ಮಾಮೀಟರ್ ಮೂಲಕ ದೇಹದ ತಾಪಮಾನವನ್ನು ಅಳೆಯಲಾಗುತ್ತಿದೆ'' ಎಂದರು.
ವೈದ್ಯರು ಮತ್ತು ತಜ್ಞರು ಪ್ರತಿಯೊಬ್ಬ ರಕ್ತದಾನಿಯಲ್ಲಿ ಆರೋಗ್ಯ ಸಮಸ್ಯೆಗಳು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ರಕ್ತವನ್ನು ಪಡೆಯಲಾಗುತ್ತಿದೆ. ಹೀಗೆ ಪಡೆದ ರಕ್ತವನ್ನು ಸರ್ಕಾರದ ಆದೇಶದಂತೆ ಎಲ್ಲಾ ಪರೀಕ್ಷೆಗಳನ್ನು ನಡೆಸಿದ ನಂತರವಷ್ಟೇ ಬಳಕೆಗೆ ನೀಡಲಾಗುತ್ತದೆ ಎಂದು ವಿವರಿಸಿದರು.
ರಕ್ತದಾನ ಶಿಬಿರವನ್ನು ಬೆಳ್ಳಿ ರಕ್ತ ನಿಧಿ ಮತ್ತು ಜೀವಾಮೃತ ರಕ್ತ ನಿಧಿ ನಡೆಸಿಕೊಟ್ಟರು. ಶಿಬಿರದಲ್ಲಿ 150 ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಯಿತು. ಹೀಗೆ ಸಂಗ್ರಹವಾದ ಎಲ್ಲ ರಕ್ತವನ್ನು ಜಿಲ್ಲಾ ಆರೋಗ್ಯ ಇಲಾಖೆಯ ರಕ್ತ ಸಂಗ್ರಹ ಘಟಕಗಳಿಗೆ ವಹಿಸಲಾಯಿತು.