ಹೈಕೋರ್ಟ್ ಕದ ತಟ್ಟಿ ಕುರ್ಚಿ ಪಡೆದ ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್
ರಾಮನಗರ, ಜೂನ್ 29: ಚನ್ನಪಟ್ಟಣ ತಾಲ್ಲೂಕಿನ ಇಬ್ಬರು ಪ್ರಭಾವಿ ನಾಯಕರ ತಿಕ್ಕಾಟಕ್ಕೆ ಕಾರಣವಾದ ಚನ್ನಪಟ್ಟಣ ತಹಶೀಲ್ದಾರ್ ಕುರ್ಚಿಯನ್ನು ಹೈಕೋರ್ಟ್ ಕದ ತಟ್ಟುವ ಮೂಲಕ ದಕ್ಕಿಸಿಕೊಂಡ ಬಿ. ಕೆ. ಸುದರ್ಶನ್ ಬುಧವಾರ ತಾಲ್ಲೂಕು ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಕಳೆದ ಏ.8 ರಂದು ಪ್ರಾರಂಭವಾದ ತಹಶೀಲ್ದಾರ್ಗಳ ಸರಣಿ ಮ್ಯಾರಥಾನ್ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯಾಲಯ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಬ್ರೇಕ್ ಬಿದ್ದಿದೆ. ಬಿ. ಕೆ. ಸುದರ್ಶನ್ ಆಗಮನದಿಂದ ಮಾಜಿ ಸಚಿವ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಕೈ ಮೇಲಾಗಿದ್ದು, ಸಿಪಿವೈ ಬಳಗ ಸಂತಸದಲ್ಲಿದ್ದಾರೆ. ಏ.8 ರಂದು ಸರಕಾರ ಚನ್ನಪಟ್ಟಣ ತಹಶೀಲ್ದಾರ್ ಸ್ಥಾನಕ್ಕೆ ಬಿ. ಕೆ. ಸುದರ್ಶನ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಸರಕಾರದ ಆದೇಶ ಹೊರ ಬಿದ್ದ ಕೆಲವೇ ಗಂಟೆಗಳಲ್ಲೇ ಸರಕಾರ ತನ್ನ ಆದೇಶವನ್ನು ಹಿಂಪಡೆದು ಹಾಲಿ ತಹಶೀಲ್ದಾರ್ ನಾಗೇಶ್ ಅವರನ್ನೇ ಮುಂದುವರೆಯುವಂತೆ ಆದೇಶ ಮಾಡಿತ್ತು.
ಮುಖ್ಯಮಂತ್ರಿಗಳ ಕಚೇರಿ ತಲುಪಿದ ಚನ್ನಪಟ್ಟಣ ಬಹು ಕೋಟಿ ಭೂ ಹಗರಣ
ಮತ್ತೆ ಏ.29 ರಂದು ಚನ್ನಪಟ್ಟಣ ತಹಶೀಲ್ದಾರ್ ನಾಗೇಶ್ ಅವರನ್ನು ವರ್ಗಾವಣೆ ಮಾಡಿ ಅದೇ ಸ್ಥಾನಕ್ಕೆ ಬಿ. ಕೆ. ಸುದರ್ಶನ್ ಅವರನ್ನು ನಿಯುಕ್ತಿಗೊಳಿಸಿತ್ತು. ಸರ್ಕಾರದ ಆದೇಶದ ಮೇರೆಗೆ ಸುದರ್ಶನ್ ತಹಶೀಲ್ದಾರ್ ಕುರ್ಚಿ ಅಲಂಕರಿಸಿದ್ದರು. ಆದರೆ ಮತ್ತೆ ಏ.30 ರಂದು ತಹಶೀಲ್ದಾರ್ ಸುದರ್ಶನ್ ಅವರನ್ನೂ ವರ್ಗಾವಣೆ ಮಾಡಿ ,ಆ ಸ್ಥಾನಕ್ಕೆ ಗ್ರೇಡ್ 2 ಜೆ. ಪಿ. ಹರ್ಷವರ್ಧನ್ ಅವರನ್ನು ಸರ್ಕಾರ ನಿಯುಕ್ತಿಗೊಳಿಸಿತ್ತು.
ರಾಷ್ಟ್ರಪತಿ ಚುನಾವಣೆ: ಜೆಡಿಎಸ್ ಬೆಂಬಲ ಯಾರಿಗೆ?
ಕೆಇಟಿ ಮೊರೆ ಹೋಗಿದ್ದ ಸುದರ್ಶನ್
ಬಿ. ಕೆ. ಸುದರ್ಶನ್, ಸರ್ಕಾರ ಒಂದೇ ದಿನದಲ್ಲಿ ತಮ್ಮನ್ನು ವರ್ಗಾವಣೆ ಮಾಡಿದ ಆದೇಶದ ವಿರುದ್ದ ಕರ್ನಾಟಕ ಆಡಳಿತ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೆಇಟಿ ಇದೇ ತಿಂಗಳ 14 ರಂದು ಚನ್ನಪಟ್ಟಣ ತಹಶೀಲ್ದಾರ್ ಹುದ್ದೆಯಲ್ಲಿ ಸುದರ್ಶನ್ ಅವರನ್ನು ಮುಂದುವರಯುವಂತೆ ಆದೇಶ ಮಾಡಿತ್ತು, ಕೆಇಟಿ ಆದೇಶವನ್ನು ತಹಶೀಲ್ದಾರ್ ಜೆ. ಪಿ. ಹರ್ಷವರ್ಧನ್ ಹೈಕೋರ್ಟ್ ನಲ್ಲಿ ಪ್ರಶ್ನೆಮಾಡಿದ್ದರು. ಅಂತಿಮವಾಗಿ ಹೈಕೋರ್ಟ್ ಬಿ. ಕೆ. ಸುದರ್ಶನ್ ಪರ ತೀರ್ಪು ನೀಡಿದ ಹಿನ್ನಲೆಯಲ್ಲಿಅವರು ತಹಶೀಲ್ದಾರ್ ಹುದ್ದೆ ಅಲಂಕರಿಸಿದ್ದಾರೆ.
ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಎಚ್ಡಿಕೆ-ಸಿಪಿವೈ
ತಹಶೀಲ್ದಾರ್ ನಾಗೇಶ್ ಅವರನ್ನು ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ತಮ್ಮ ಆಪ್ತ ಬಿ. ಕೆ. ಸುದರ್ಶನ್ ಅವರನ್ನು ತರುವಲ್ಲಿ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ ಯಶಸ್ವಿಯಾದರು. ಸರ್ಕಾರದ ಆದೇಶ ಹೊರ ಬಿದ್ದ ಕೆಲ ಗಂಟೆಗಳಲ್ಲಿ ಹಿಂದಿನ ಅಧಿಕಾರಿ ನಾಗೇಶ್ ಅವರನ್ನು ತಮ್ಮ ಪ್ರಭಾವ ಬಳಸಿ ಉಳಿಸಿಕೊಂಡ ಕ್ಷೇತ್ರದ ಶಾಸಕ ಹೆಚ್. ಡಿ. ಕುಮಾರಸ್ವಾಮಿ, ಸಿಪಿವೈಗೆ ತಿರುಗೇಟು ನೀಡಿದ್ದರು.ಆದರೆ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ ಕೆಲವೇ ದಿನಗಳಲ್ಲೇ ಸರಕಾರದ ಮೇಲೆ ಒತ್ತಡ ತಂದು ತಮಗೆ ಆಪ್ತರಾದ ತಹಶೀಲ್ದಾರ್ ಸುದರ್ಶನ್ ರನ್ನು ತಹಶೀಲ್ದಾರ್ ಹುದ್ದೆಗೆ ತಂದು ಕೂರಿಸುವಲ್ಲಿ ಯಶಸ್ವಿಯಾದರು.
ಹರ್ಷವರ್ಧನ್ಗೆ ಸನ್ಮಾನಿಸಿದ್ದ ಜೆಡಿಎಸ್ ಕಾರ್ಯಕರ್ತರು
ಬಿಜೆಪಿ ಮುಖಂಡರು ಹಾಗೂ ತಹಶೀಲ್ದಾರ್ ಸುದರ್ಶನ್ ವರ್ತನೆಯಿಂದ ಸಿಟ್ಟಿಗೆದ್ದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಮ್ಮ ಪ್ರಭಾವ ಬೀರಿ ಸುದರ್ಶನ್ ಅಧಿಕಾರ ವಹಿಸಿಕೊಂಡ 24 ಗಂಟೆಯಲ್ಲೇ ಎತ್ತಂಗಡಿ ಮಾಡಿಸಿ ಸಿ. ಪಿ. ಯೋಗೇಶ್ವರ್ ಅವರಿಗೆ ಟಾಂಗ್ ನೀಡಿದ್ದರು. ಸರ್ಕಾರ ಗ್ರೇಟ್ 2 ತಹಶೀಲ್ದಾರ್ ಹರ್ಷವರ್ಧನ್ ಅವರನ್ನು ಚನ್ನಪಟ್ಟಣ ತಹಶೀಲ್ದಾರ್ ರನ್ನಾಗಿ ನಿಯುಕ್ತಿಗೊಳಿಸಿ ಆದೇಶ ಮಾಡಿತ್ತು. ಸರ್ಕಾರದ ಆದೇಶದಂತೆ ಅಧಿಕಾರ ವಹಿಸಿಕೊಂಡ ಹರ್ಷವರ್ಧನ್ ಅವರನ್ನು ಜೆಡಿಎಸ್ ಮುಖಂಡರು ಸ್ವಾಗತಿಸಿ, ಸನ್ಮಾನಿಸಿ, ತಹಶೀಲ್ದಾರ್ ಹರ್ಷವರ್ಧನ್ ಜೊತೆಗಿನ ಪೋಟೋ ಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ಬಿಜೆಪಿ ಮುಂಖಡರಿಗೆ ತಿರುಗೇಟು ನೀಡಿದ್ದರು.
ಕೋರ್ಟ್ ಬಾಗಿಲು ಬಡಿದು ಹುದ್ದೆ ದಕ್ಕಿಸಿಕೊಂಡ ಸಿಪಿವೈ ಆಪ್ತ
ಇದೀಗ ನ್ಯಾಯಾಲಯದ ಬಾಗಿಲು ಬಡಿದು ಮತ್ತೆ ಚನ್ನಪಟ್ಟಣ ತಹಶೀಲ್ದಾರ್ ಹುದ್ದೆ ದಕ್ಕಿಸಿಕೊಳ್ಳುವಲ್ಲಿ ಬಿ. ಕೆ. ಸುದರ್ಶನ್ ಯಶಸ್ವಿಯಾಗಿದ್ದಾರೆ. ಸುದರ್ಶನ್ ಅಧಿಕಾರ ವಹಿಸಿಕೊಂಡ ಹಿನ್ನಲೆಯಲ್ಲಿ ಸಿ. ಪಿ. ಯೋಗೀಶ್ವರ್ ಬೆಂಬಲಿಗರು ಖುಷಿಯಲ್ಲಿದ್ದಾರೆ. ಆದರೆ ಕಳೆದ ಬಾರಿಯಂತೆ ತಹಶೀಲ್ದಾರ್ ಕಛೇರಿ ರಾಜಕಾರಣಿಗಳ ಹಿಂಬಾಲಕರ ಅಡ್ಡೆಯಾಗದಿರಲಿ ಎನ್ನುತ್ತಿದ್ದಾರೆ ಜನ ಸಾಮಾನ್ಯರು.
ಇನ್ನೂ ತಮ್ಮ ಹುದ್ದೆಯ ಘನತೆ ಅರಿತು ತಾಲ್ಲೂಕಿನ ಜನರ ಕುಂದೂ ಕೊರತೆಗಳನ್ನು ತಿಳಿದು ಜನರಿಗೆ ಉತ್ತಮ ಆಡಳಿತ ನೀಡಬೇಕಾದ ತಹಶೀಲ್ದಾರ್ ಗಳು ತಮ್ಮ ಜವಾಬ್ದಾರಿ ಮರೆತು ಜನಪ್ರತಿನಿಧಿಗಳ ಹಿಂಬಾಲಕರಂತೆ ವರ್ತಿಸಿದ ಫಲವಾಗಿ ಕೇವಲ 24 ಗಂಟೆಯಲ್ಲಿ ಮೂವರು ದಂಡ ಅಧಿಕಾರಿಗಳ ಬದಲಾವಣೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.