ಮಾಗಡಿಯಲ್ಲಿ ಕಾಂಗ್ರೆಸ್ ನಾಯಕರ ನಡುವೆ ಭಿನ್ನಾಭಿಪ್ರಾಯ... ಲಾಭ ಯಾರಿಗೆ?
ರಾಮನಗರ ಮೇ 27: ಮಾಗಡಿ ಕಾಂಗ್ರೆಸ್ ನ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತು ಮಾಜಿ ಶಾಸಕ ಬಾಲಕೃಷ್ಣ ನಡುವಿನ ಭಿನ್ನಾಭಿಪ್ರಾಯಗಳ ಲಾಭ ಪಡೆಯಲು ಜೆಡಿಎಸ್ ಮತ್ತು ಬಿಜೆಪಿ ಮುಂದಾಗಿರುವುದು ಕಂಡು ಬಂದಿದೆ.
ರಾಮನಗರ ಜಿಲ್ಲೆ ರಾಜಕೀಯವಾಗಿ ಸುದ್ದಿಯಾಗುತ್ತಿದ್ದು, ಈಗ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮತ್ತು ಮಾಜಿ ಶಾಸಕ ಬಾಲಕೃಷ್ಣ ನಡುವಿನ ಭಿನ್ನಾಭಿಪ್ರಾಯಗಳು ಜಗಜ್ಜಾಹೀರರಾಗಿದ್ದು, ಕಾಂಗ್ರೆಸ್ ಗೆ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಲೆನೋವು ತಂದಿದ್ದರೆ, ಜೆಡಿಎಸ್ ಮತ್ತು ಬಿಜೆಪಿ ತಮಗೇನು ಲಾಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿರುವುದು ಎದ್ದು ಕಾಣಿಸುತ್ತಿದೆ.
ಮತ್ತೊಮ್ಮೆ ಸಿಎಂ ಆಗಲು ದೇವಮೂಲೆಯ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಚ್ಡಿ ಕುಮಾರಸ್ವಾಮಿ?
ಈಗಾಗಲೇ ಬಾಲಕೃಷ್ಣ ತಮಗೆ ಮಾಗಡಿಯಿಂದ ಟಿಕೆಟ್ ಬೇಡ ರೇವಣ್ಣರಿಗೆ ನೀಡಿ ಎಂದು ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಮೈಸೂರು ಭಾಗವನ್ನು ಬಲಿಷ್ಠಗೊಳಿಸಲು ಪಣತೊಟ್ಟಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಬಹಿರಂಗವಾಗಿಯೇ ಬಾಲಕೃಷ್ಣಗೆ ಬಿಜೆಪಿ ಸೇರಲು ಆಫರ್ ನೀಡಿದ್ದಾರೆ.
ಎಚ್ಎಂ ರೇವಣ್ಣರಿಂದ ರಾಜಕೀಯ ದೀಕ್ಷೆ
ಜೆಡಿಎಸ್ ನಿಂದ ಆಯ್ಕೆಯಾಗಿರುವ ಎ.ಮಂಜುನಾಥ್ ಕಾಂಗ್ರೆಸ್ ನಲ್ಲಿದ್ದವರು. ಆ ವೇಳೆ ಇವತ್ತು ಕಾಂಗ್ರೆಸ್ನಲ್ಲಿರುವ ಬಾಲಕೃಷ್ಣ ಅವರು ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಾಲಕೃಷ್ಣ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಭಿನ್ನಾಭಿಪ್ರಾಯವುಂಟಾಗಿ ಒಂದಷ್ಟು ನಾಯಕರು ಜೆಡಿಎಸ್ ಬಿಟ್ಟು ಹೋಗಿದ್ದು ಅವರ ಪೈಕಿ ಬಾಲಕೃಷ್ಣ ಒಬ್ಬರಾಗಿದ್ದರು.
ಕ್ಷೇತ್ರದಲ್ಲಿ ಅವತ್ತು ಎ.ಮಂಜುನಾಥ್ ಕಾಂಗ್ರೆಸ್ ನಲ್ಲಿದ್ದರು. ಅಷ್ಟೇ ಅಲ್ಲದೆ, ಹೆಚ್.ಎಂ.ರೇವಣ್ಣರ ಶಿಷ್ಯರಾಗಿದ್ದರು. ಮಂಜುನಾಥ್ ಅವರೇ ಹೇಳುವಂತೆ 2008ರಲ್ಲಿ ರಾಜಕೀಯ ದೀಕ್ಷೆ ನೀಡಿದವರು ಮಾಜಿ ಸಚಿವ ಎಚ್.ಎಂ.ರೇವಣ್ಣರಂತೆ. ಎ.ಮಂಜುನಾಥ್ ರಾಜಕೀಯ ಬೆಳವಣಿಗೆಯಲ್ಲಿ ರೇವಣ್ಣರವರ ಪಾತ್ರವಿದ್ದು ಅವರ ಮತ್ತು ನನ್ನ ನಡುವೆ ತಂದೆ-ಮಗನ ಸಂಬಂಧವಿದೆ. ಅವರೇ ಮಾಗಡಿ ಕ್ಷೇತ್ರವನ್ನು ಬೆಳ್ಳಿ ತಟ್ಟೆಯಲ್ಲಿ ಧಾರೆ ಎರೆದುಕೊಟ್ಟಿದ್ದಾರೆ ಎಂದಿದ್ದಾರೆ.
ಮೃತ ಪತ್ರಕರ್ತನ ಕುಟುಂಬಕ್ಕೆ ನೆರವಾದ ವಿಮೆ; ಸಾಮ್ರಾಟ್ ಗೌಡ ಕಾಳಜಿಗೆ ವ್ಯಾಪಕ ಮೆಚ್ಚುಗೆ
ರಾಜಕೀಯ ಸಮರ
ಇಂತಹ ಸಂದರ್ಭದಲ್ಲಿ ಜೆಡಿಎಸ್ ತೊರೆದು ಬಾಲಕೃಷ್ಣ ಕಾಂಗ್ರೆಸ್ ಸೇರಿ ವಿಧಾನಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಂಡಾಗ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿದ್ದ ಮಂಜುನಾಥ್ ಜೆಡಿಎಸ್ ಕಡೆಗೆ ಮುಖ ಮಾಡಿ ಟಿಕೆಟ್ ಪಡೆದು ಬಾಲಕೃಷ್ಣ ಅವರ ವಿರುದ್ಧವೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅಲ್ಲಿಂದ ಇಲ್ಲಿ ತನಕ ರಾಜಕೀಯ ದ್ವೇಷ ಮುಂದುವರೆದಿದೆ.
ಇದೀಗ ರೇವಣ್ಣ ಮತ್ತು ಬಾಲಕೃಷ್ಣರ ನಡುವೆ ಸಮರ ಶುರುವಾಗಿದ್ದು, ಎ.ಮಂಜುನಾಥ್ ತನ್ನ ಗುರು ರೇವಣ್ಣ ಪರ ನಿಂತಿದ್ದಾರೆ. ಬಹಿರಂಗವಾಗಿಯೇ ರೇವಣ್ಣ ಅವರನ್ನು ಬೆಂಬಲಿಸಿ ಬಾಲಕೃಷ್ಣ ಅವರಿಗೆ ಟಾಂಗ್ ನೀಡಿದ್ದಾರೆ. ಬಾಲಕೃಷ್ಣ ಮತ್ತು ರೇವಣ್ಣರ ನಡುವೆ ಶುರುವಾದ ಸಮರ ಇದೀಗ ಬದಲಾದ ಸಮಯದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಕಾದಾಟದ ಅಖಾಡದಂತೆ ಗೋಚರಿಸುತ್ತಿದೆ.
ಭಿನ್ನಾಭಿಪ್ರಾಯ ಶುರುವಾಗಿದ್ದೆಲ್ಲಿ
ಇಷ್ಟಕ್ಕೂ ಸ್ವಪಕ್ಷದವರೇ ಆದ ಕಾಂಗ್ರೆಸ್ ನ ಮಾಜಿ ಶಾಸಕ ಬಾಲಕೃಷ್ಣ ಮತ್ತು ಮಾಜಿ ಸಚಿವ ಹೆಚ್.ಎಂ.ರೇವಣ್ಣ ನಡುವೆ ಭಿನ್ನಾಭಿಪ್ರಾಯ ಶುರುವಾಗಿದ್ದಾದರೂ ಎಲ್ಲಿಂದ ಎಂದು ಹುಡುಕುತ್ತಾ ಹೋದರೆ ಇತ್ತೀಚೆಗೆ ಜೆಡಿಎಸ್ ನ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಹಾಗೂ ಕಾಂಗ್ರೆಸ್ ನ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರುಗಳು ಕೆಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ಪರಸ್ಪರ ಹೊಗಳಿಕೊಂಡಿರುವ ಪ್ರಸಂಗಗಳು ನಡೆದಿದ್ದವು. ಇದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಾಗಿ ಅವರು ಮಾಜಿ ಸಚಿವ ಎಚ್.ಎಂ.ರೇವಣ್ಣ ಮತ್ತು ಶಾಸಕ ಎ.ಮಂಜುನಾಥ್ ಅವರ ಗುರುಶಿಷ್ಯ ಸಂಬಂಧದ ಬಗ್ಗೆ ಸ್ಪಷ್ಟತೆ ಸಿಗಬೇಕೆನ್ನುವ ಕಾರಣದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಇದು ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು. ಸದ್ಯ ಎ.ಮಂಜುನಾಥ್ ಅವರು ತನ್ನ ಗುರು ರೇವಣ್ಣ ಅವರ ಪರವಾಗಿ ನಿಲ್ಲುವ ಮೂಲಕ ಬಾಲಕೃಷ್ಣ ಅವರಿಗೆ ಉರಿಯುವಂತೆ ಮಾಡಿದ್ದಾರೆ.
ಟಿಕೆಟ್ ಕೈತಪ್ಪುವ ಭಯದಲ್ಲಿ ಬಾಲಕೃಷ್ಣ?
ಮುಂದಿನ ಚುನಾವಣೆಯಲ್ಲಿ ಹೆಚ್.ಎಂ.ರೇವಣ್ಣ ಅವರು ಚನ್ನಪಟ್ಟಣದಿಂದ ಸ್ಪರ್ಧಿಸುವ ಮನಸ್ಸು ಮಾಡಿದ್ದರೂ ಈಗಾಗಲೇ ಅಲ್ಲಿ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಅವರು ಮಾಗಡಿಯತ್ತ ಮುಖ ಮಾಡಬಹುದು ಎಂಬ ಭಯ ಬಾಲಕೃಷ್ಣರನ್ನು ಕಾಡಲು ಆರಂಭಿಸಿದೆ. ಕೆಲದಿನಗಳ ಹಿಂದೆಯಷ್ಟೆ ಬಾಲಕೃಷ್ಣ ಅವರು ನಾನು ಕಾಂಗ್ರೆಸ್ ಸೇರಿದಾಗಿನಿಂದ ಪಕ್ಷ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ. ಪಕ್ಷ ತೊರೆಯುವ ಬಗ್ಗೆ ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು. ಮಾಗಡಿ ರಂಗನಾಥಸ್ವಾಮಿ ಆಣೆಗೂ ನಾನು ಪಕ್ಷ ತೊರೆಯವುದಿಲ್ಲ ಎಂದು ತಿಳಿಸಿದ್ದರು.
ಇದರ ನಡುವೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಬರುವಂತೆ ಆಹ್ವಾನಿಸಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಮಾಗಡಿ ಕ್ಷೇತ್ರದ ರಾಜಕೀಯ ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆ ಕಾಣುತ್ತದೆಯೋ ಗೊತ್ತಿಲ್ಲ. ಆದರೆ ಹಾಲಿ ಮಾಜಿ ಶಾಸಕರು ಮತ್ತು ಸಚಿವರ ಭಿನ್ನಾಭಿಪ್ರಾಯದ ಲಾಭಪಡೆಯಲು ಬಿಜೆಪಿ ಹವಣಿಸುತ್ತಿರುವುದಂತು ಸತ್ಯ.
(ಒನ್ಇಂಡಿಯಾ ಸುದ್ದಿ)