ಎಸ್ಪಿ ವಿರುದ್ಧ ಸುರೇಶ್ ನಡೆ ಖಂಡಿಸಿದ ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ್
ರಾಮನಗರ, ಡಿಸೆಂಬರ್ 2: ದಿಶಾ ಸಭೆಯಲ್ಲಿ ಎಸ್ಪಿ ಹಾಗೂ ಕೆಲ ಅಧಿಕಾರಿಗಳ ಮೇಲೆ ಸಂಸದ ಡಿ.ಕೆ.ಸುರೇಶ್ ಹರಿಹಾಯ್ದ ಘಟನೆಯನ್ನು ಖಂಡಿಸಿದ ಬಿಜೆಪಿ ರಾಜ್ಯ ವಕ್ತಾರ ಅಶ್ವಥ್ ನಾರಾಯಣ್ "ಸಂಸದ ಡಿ.ಕೆ.ಸುರೇಶ್ ಅರೆ ಹುಚ್ಚರಂತೆ ವರ್ತಿಸುತ್ತಿದ್ದಾರೆ" ಎಂದು ಆಕ್ರೋಶಗೊಂಡಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, "ಕಳೆದ ಆರೇಳು ತಿಂಗಳಿನಿಂದ ದೆಹಲಿಯಲ್ಲಿ ಅಣ್ಣ ಡಿಕೆಶಿ ಕೋರ್ಟ್ ವಿಚಾರಣೆ, ಜೈಲು, ಬೇಲು ಎಂದು ಓಡಾಡುತ್ತಿದ್ದ ಡಿ.ಕೆ.ಸುರೇಶ್, ಇದೀಗ ತಮ್ಮ ಅಕ್ರಮಗಳಿಗೆ ಬೆಂಬಲ ನೀಡದ ಅಧಿಕಾರಿಗಳ ಮೇಲೆ ಕೆಂಡಕಾರುತ್ತಿದ್ದಾರೆ" ಎಂದು ಆರೋಪಿಸಿದರು.
ಡಿ.ಕೆ.ಸುರೇಶ್-ಎಸ್ಪಿ ಜಟಾಪಟಿ; ಸಭೆಯಲ್ಲಿ ಆಗಿದ್ದೇನು?, ಎಸ್ಪಿ ಉತ್ತರವೇನು?
"ಈ ಹಿಂದೆ ಅವರ ಅಣ್ಣ ಡಿ.ಕೆ.ಶಿವಕುಮಾರ್ ಕಬ್ಬಾಳಮ್ಮನ ದೇವಸ್ಥಾನದಲ್ಲಿ ಎಸ್ಪಿ ಅನೂಪ್ ವಿರುದ್ಧ ಮಾತನಾಡಿದ್ದರು. ಈಗ ಇವರು ಮಾತನಾಡಿದ್ದಾರೆ. ಡಿ.ಕೆ.ಸಹೋದರರು ಬ್ಲಾಕ್ ಮೇಲ್ ಮಾಡಿ ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ. ಡಿ.ಕೆ.ಸುರೇಶ್ ಗೂಂಡ ರೀತಿ ಮಾತನಾಡಿದ್ದಾರೆ, ಸಂಸದರಾಗಿ ಇದು ಸರಿಯಲ್ಲ. ಅಧಿಕಾರಿಗಳು ತಪ್ಪು ಮಾಡಿದರೆ ಅವರ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯಲಿ, ನಾವು ಈ ಬಗ್ಗೆ ಪಾರ್ಲಿಮೆಂಟಿನ ಸ್ಪೀಕರ್ ಗೆ ದೂರು ಕೊಡುತ್ತೇವೆ. ಅವರ ಬೆದರಿಕೆ ಹೆದರುವ ಕಾಲ ಹೋಯ್ತು" ಎಂದು ಎಚ್ಚರಿಸಿದರು.
ಕನಕಪುರ ಅರಣ್ಯ ವಾಪ್ತಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಅದರಲ್ಲಿ 64 ಅಧಿಕಾರಿಗಳ ವಿರುದ್ಧ ಆಪಾದನೆ ಇದೆ. ಅದರಲ್ಲೇ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಮತ್ತು ಉಷಾ ಶಿವಕುಮಾರ್ ಹೆಸರಿದೆ. 64 ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮ ಗಣಿಗಾರಿಕೆ ಮಾಡಿರುವುದನ್ನು ನೋಡಿದರೆ ಅಧಿಕಾರಿಗಳ ಮೇಲೆ ಇವರ ಹಿಡಿತ ಎಷ್ಟಿದೆ ಎನ್ನುವುದು ಸಾಬೀತಾಗುತ್ತೆ ಎಂದರು.