ನಮ್ಮ ಹೈಕಮಾಂಡ್ ಸ್ಟ್ರಾಂಗ್, ಎಲ್ಲಾ ಅವರಿಗೇ ಗೊತ್ತಿದೆ ಎಂದ ಸಚಿವ ಅಶೋಕ್
ರಾಮನಗರ, ಜೂನ್ 03: "ನಮ್ಮಲ್ಲಿ ಅತಂತ್ರ ಹೈಕಮಾಂಡ್ ಇಲ್ಲ. ಬಲವಾದ ಹೈಕಮಾಂಡ್ ಇದ್ದಾರೆ. ಅವರೇ ಎಲ್ಲವನ್ನೂ ನಿಭಾಯಿಸುತ್ತಾರೆ" ಎಂದು ಕಂದಾಯ ಸಚಿವ ಆರ್.ಅಶೋಕ್ ಪಕ್ಷದಲ್ಲಿ ಗೊಂದಲಗಳಿಗೆ ತೆರೆ ಎಳೆದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆರ್.ಅಶೋಕ್, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆಸುವಾಗ ಊಹಾಪೋಹ ಗಾಳಿ ಸುದ್ದಿ ಸಹಜ. ಯಡಿಯೂರಪ್ಪ ನಮ್ಮ ನಾಯಕರು. ಅವರೇ ನಮ್ಮ ಮುಖ್ಯಮಂತ್ರಿ. ಮೂರು ವರ್ಷಕ್ಕೆ ಒಂದು ದಿನ ಕೂಡ ಕಡಿಮೆಯಾಗದಂತೆ ಮುಂದುವರಿಯುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾರೇ ಸರ್ಕಾರ ನಡೆಸಿದರೂ ಊಹಾಪೂಹಗಳು ಸಹಜ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದರು.
ಸಿಎಂ ಭೇಟಿಯಾದ ರಮೇಶ ಜಾರಕಿಹೊಳಿ, ಆರ್ ಅಶೋಕ್: ಕುತೂಹಲಕ್ಕೆ ಎಡೆ
"ಯುವಕರಂತೆ ಓಡಾಡಿದ್ದಾರೆ ಯಡಿಯೂರಪ್ಪ"
ಕೊರೊನಾ ವೈರಸ್ ನಂಥ ಈ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರು ಹಿರಿಯರಾಗಿದ್ದರೂ ಚಿರ ಯುವಕರಂತೆ ಕಾರ್ಯನಿರ್ವಹಿಸಿದ್ದಾರೆ. ಅವರ ಕಾರ್ಯ ಎಂಥವರೂ ಮೆಚ್ಚುವಂಥದ್ದು. ಅವರೇ ನಮ್ಮ ನಾಯಕರು. ಎಲ್ಲಾ ಊಹಾಪೋಹಗಳಲ್ಲಿ ಉರುಳಿಲ್ಲ ಎಂದರು. ಅಧಿಕಾರ ಕೇಳುವುದು ಎಲ್ಲರ ಹಕ್ಕು. ನಮ್ಮ ಕಾರ್ಯಕರ್ತರೂ ಹುದ್ದೆಗಳನ್ನು ಕೇಳುತ್ತಾರೆ. ಆದರೆ ತೀರ್ಮಾನ ನಾಯಕರದ್ದು. ಅದನ್ನು ಅವರು ನಿಭಾಯಿಸುತ್ತಾರೆ ಎಂದರು.
ಕೊಡಗು ಮತ್ತು ದಕ್ಷಿಣ ಕನ್ನಡಕ್ಕೆ ಎನ್ಡಿಆರ್ ಎಫ್ ತಂಡ
ಕಂದಾಯ ಇಲಾಖೆಗೆ ಸಂಬಂಧಿಸಿದ ರಿವಿವ್ ಮೀಟಿಂಗ್, ಪ್ರಕೃತಿ ವಿಕೋಪ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೂಡ ಆಗಿದ್ದು, ಸಭೆ ಮಾಡಿದ್ದೇನೆ. ವಲಸೆ ಕಾರ್ಮಿಕರಿಗೆ 30 ಲಕ್ಷ, ಕ್ವಾರಂಟೈನ್ ತಪಾಸಣೆಗೆ 50 ಲಕ್ಷ, ಲ್ಯಾಬ್ ಮತ್ತು ಆಸ್ಪತ್ರೆಗೆ 2 ಕೋಟಿ 62 ಲಕ್ಷ, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಡಿಯಲ್ಲಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. ನಿಸರ್ಗ ಚಂಡಮಾರುತ ಹಿನ್ನೆಲೆ ಮುಂಜಾಗ್ರತಾ ಕ್ರಮಕೈಗೊಂಡಿದ್ದು ಜೂನ್ 3 ಅಥವಾ 4 ರಂದು ಕರ್ನಾಟಕಕ್ಕೆ ನಿಸರ್ಗ ಚಂಡಮಾರುತ ಅಪ್ಪಳಿಸುವ ಆತಂಕ ಇದೆ. ಹೀಗಾಗಿ ರಾಜ್ಯಕ್ಕೆ ಎನ್ಡಿಆರ್ ಎಫ್ ನ ನಾಲ್ಕು ತಂಡ ಬರುತ್ತಿದೆ. ಕೊಡಗು ಮತ್ತೆ ದಕ್ಷಿಣ ಕನ್ನಡದಲ್ಲಿ ಎರಡು ತಂಡ ಈಗಾಗಲೇ ಬಂದಿದ್ದಾರೆ ಕಾರವಾರ ದಾರವಾಡಕ್ಕೆ ನಾಳೆ ಒಳಗೆ ಬರ್ತಾರೆ ಹಾಗೂ ಕರ್ನಾಟಕದಲ್ಲಿ ನಿಸರ್ಗ ಚಂಡಮಾರುತ ಜಾಸ್ತಿ ಪ್ರಭಾವ ಇರೋದಿಲ್ಲ ಆದರೂ ಎಲ್ಲಾ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಸಚಿವ ಆರ್.ಅಶೋಕ್ ತಿಳಿಸಿದರು.
"ಒಡೆದು ಆಳುವ ನೀತಿ ಕಾಂಗ್ರೆಸ್ ನದ್ದು"
ಕಾಂಗ್ರೆಸ್ ಪಕ್ಷ ಬ್ರಿಟಿಷರು ಬಿಟ್ಟು ಹೋಗಿರುವ ಸಂಸ್ಥೆ. ಅದರ ಮೊದಲ ಅಧ್ಯಕ್ಷರು ಲಂಡನ್ ನವರೇ. ಅವರದ್ದು ಒಡೆದು ಆಳುವ ನೀತಿ ಎಂದು ಹರಿಹಾಯ್ದರು. ನಿನ್ನೆ ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ -ಜೆಡಿಎಸ್ ಮೈತ್ರಿಯಿಲ್ಲ ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಮೋಸದ ಸಂಸ್ಕೃತಿ ಇರುವ ಪಕ್ಷ. ಜೆಡಿಎಸ್ ಗೆ ಮೋಸ ಮಾಡುವ ಪ್ರಯತ್ನ ಮಾಡಿದ್ದು ಈಗ ಅವರಿಗೆ ಗೊತ್ತಾಗಿದ ಎಂದರು.
"ದೇವೇಗೌಡರನ್ನು ಪ್ರಧಾನಿ ಪಟ್ಟದಿಂದ ಇಳಿಸಿದ್ದು ಕಾಂಗ್ರೆಸ್"
ಮಾಜಿ ಪ್ರಧಾನಿ ದೇವೇಗೌಡರಲ್ಲಿ ಪ್ರಧಾನಿ ಪಟ್ಟದಿಂದ ಇಳಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಮೋಸದ ಚಾಳಿ ಜೆಡಿಎಸ್ ನವರಿಗೆ ಗೊತ್ತಾಗಿದೆ. ಇದು ಒಳ್ಳೆಯ ಬೆಳವಣಿಗೆ. ಇದರಿಂದ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಲಿದೆ ಎಂದು ಭವಿಷ್ಯ ನುಡಿದರು. ನಾವು ಕೂಡ ಜೆಡಿಎಸ್ ಜೊತೆಗೆ ಒಂದು ಬಾರಿ ಸರ್ಕಾರ ಮಾಡಿದ್ದೇವೆ. ನಾವು ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಜೆಡಿಎಸ್ ನವರು ಅಭಿವೃದ್ಧಿಗಾಗಿ ನಮಗೆ ಸಹಕಾರ ಕೊಟ್ಟರೆ ಸ್ವಾಗತ ಎನ್ನುವ ಮೂಲಕ ರಾಜ್ಯದಲ್ಲಿ ಮತ್ತೆ ಜೆಡಿಎಸ್- ಬಿಜೆಪಿ ದೋಸ್ತಿ ಸುಳಿವು ನೀಡಿದರು.