ಅಬ್ಬಾ, ಏನಿದು ಸಂಸದ ಡಿ.ಕೆ. ಸುರೇಶ್ ನಡೆ!
ಬೆಂಗಳೂರು, ಜು. 19: ಕೊರೊನಾವೈರಸ್ ಅಂದರೇನೆ ಜನರು ಭಯ ಬೀಳುತ್ತಿದ್ದಾರೆ. ಸೋಂಕಿನ ಕುರಿತು ಸೃಷ್ಟಿಸಿರುವ ಆತಂಕವೇ ಹಾಗಿದೆ. ಹೀಗಾಗಿ ಸೋಂಕಿತರನ್ನು ಸ್ವಂತ ಮನೆಯವರು ದೂರ ಮಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಸೋಂಕಿತರಿಗೆ ಸಹಾಯ ಮಾಡಲೂ ಜನರು ಮುಂದೆ ಬರುತ್ತಿಲ್ಲ. ಕೊರೊನಾ ವೈರಸ್ ಕುರಿತು ಸೋಂಕಿನ ಕುರಿತು ಜನರಲ್ಲಿ ಆ ಮಟ್ಟದ ಅಪನಂಬಿಕೆ ಮತ್ತು ಅಪಪ್ರಚಾರವಿದೆ.
Recommended Video
ಕೊರೊನಾವೈರಸ್ ಸೋಂಕಿತರನ್ನು ನೇರವಾಗಿ ಭೇಟಿ ಮಾಡಿ ಮಾದರಿಯಾಗಿದ್ದ ಸಂಸದ ಡಿ.ಕೆ. ಸುರೇಶ್ ಅವರು ಮತ್ತೊಂದು ಮಾದರಿ ನಡೆಯನ್ನು ತೋರಿಸಿದ್ದಾರೆ. ಹೋರಾಟ ರೋಗದ ವಿರುದ್ಧ ಇರಬೇಕೆ ಹೊರತು, ರೋಗಿಯ ವಿರುದ್ಧ ಅಲ್ಲ ಎಂಬುದನ್ನು ತಮ್ಮ ನಡುವಳಿಕೆಯಿಂದ ತೋರಿಸಿ ಕೊಟ್ಟಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಹತಾಶರಾಗುವ ಬದಲು, ಧೈರ್ಯದಿಂದ ಇರಬೇಕು ಹೇಳುವುದರೊಂದಿಗೆ, ಅದರಂತೆ ನಡೆದುಕೊಂಡು ಜನರಲ್ಲಿ ಧೈರ್ಯ ತುಂಬಿದ್ದಾರೆ.
ಸೋಂಕಿತರ ನೇರ ಭೇಟಿ
ಕೋವಿಡ್ ಭಯದಿಂದ ಬೆಂಗಳೂರಿನ 25 ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯ ಸಿಬ್ಬಂದಿ ಇಲ್ಲದೆ ಬಂದ್ ಮಾಡಲಾಗಿದೆ ಎಂಬ ಆತಂಕಕಾರಿ ಮಾಹಿತಿ ಬಂದಿದೆ. ಪರಿಸ್ಥಿತಿ ಹೀಗಿರುವಾಗ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು, ರಾಮನಗರ ಜಿಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಸೋಂಕಿತರು ನೇರವಾಗಿ ಭೇಟಿ ಸೋಂಕಿತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದರು.
ಕೋವಿಡ್-19 ನಿಂದ ಮೃತಪಟ್ಟವರ ಅಂತಿಮ ದರ್ಶನ ಪಡೆಯಬಹುದಾ? ತಜ್ಞರ ಅಭಿಪ್ರಾಯ ಇಲ್ಲಿದೆ!
ಸಂಸದ ಸುರೇಶ್ ಅವರು, ಸೋಂಕಿತರನ್ನು ನೇರವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಸೋಂಕು ತಗುಲಿದೆ ಎಂದು ಹೆದರಬೇಡಿ. ನಿಮಗೆ ಅಗತ್ಯ ಚಿಕಿತ್ಸೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗುವುದು. ನಿಮ್ಮ ಜತೆ ನಾನಿದ್ದೇನೆ. ನಿಮಗೆ ಬೇಕಾದ ವ್ಯವಸ್ಥೆ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದಿದ್ದರು. ಸೋಂಕಿತರಲ್ಲಿನ ಅನಗತ್ಯ ಭಯ ತೊಡೆದುಹಾಕುವ ಪ್ರಯತ್ನ ಮಾಡಿದ್ದರು.
ವಿರೋಧ ಮಾಡಬೇಡಿ
ಅದರೊಂದಿಗೆ ಕೋವಿಡ್ ಸೋಂಕಿನಿಂದ ಮೃತರಾದವರ ವಿಚಾರವಾಗಿ ಇತ್ತೀಚೆಗಷ್ಟೇ ಡಿ.ಕೆ. ಸುರೇಶ್ ಅವರು ಬಹಿರಂಗ ಪತ್ರ ಬರೆದಿದ್ದರು. ಕೊರೊನಾ ವೈರಸ್ ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಗಳಿಂದ ಸಮಾಜಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಹೀಗಾಗಿ ಶವ ಸಂಸ್ಕಾರಕ್ಕೆ ಪ್ರತಿರೋಧ ಒಡ್ಡುವುದು, ಅಡ್ಡಿಪಡಿಸುವುದು ನಮ್ಮ ಸಂಸ್ಕೃತಿಯೂ ಅಲ್ಲ, ಸದಾಚಾರವೂ ಅಲ್ಲ. ಈ ವಿಷಯದಲ್ಲಿ ಬರೀ ಊಹಾಪೋಹಗಳನ್ನು ಹಬ್ಬಿಸಲಾಗಿದೆ.
ಆದ್ದರಿಂದ ಆಯಾ ಪ್ರದೇಶಗಳಲ್ಲಿ ಕೋವಿಡ್ ನಿಂದ ಮರಣ ಹೊಂದಿದ ವ್ಯಕ್ತಿಗಳ ಬಂಧುಗಳು ಹಾಗೂ ಗ್ರಾಮಸ್ಥರು ನಿರಾತಂಕವಾಗಿ, ಮೃತ ವ್ಯಕ್ತಿಗೆ ಗೌರವಯುತ ಅಂತಿಮ ಸಂಸ್ಕಾರ ನೆರವೇರಲು ಅವಕಾಶ ಮಾಡಿಕೊಡಬೇಕು. ಆ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಮನವಿ ಮಾಡಿದ್ದರು.
ಅಂತ್ಯಸಂಸ್ಕಾರದಲ್ಲಿ ಭಾಗಿ
ಇವತ್ತು ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ತಮ್ಮ ಕ್ಷೇತ್ರದ ವಯೋವೃದ್ಧರೊಬ್ಬರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಜನರಲ್ಲಿ ತಿಳಿವಳಿಕೆ ಮೂಡಿಸುವ ಪ್ರಯತ್ನವನ್ನು ಸಂಸದ ಡಿ.ಕೆ. ಸುರೇಶ್ ಮಾಡಿದರು.
ಬೆಂಗಳೂರಿನಲ್ಲಿ ಮೃತ ಕೊವಿಡ್ 19 ರೋಗಿಗಳ ಅಂತ್ಯಕ್ರಿಯೆ ಹೇಗೆ?
ಕನಕಪುರದ 73 ವರ್ಷ ವಯಸ್ಸಿನ ನರಸಿಂಹ ಶೆಟ್ಟಿ ಎಂಬುವದರು ಚಿಕಿತ್ಸೆ ಫಲಿಸದೇ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಕನಕಪುರ ದೇಗುಲಮಠದ ಬಳಿಯಿರುವ ಸ್ಮಶಾನದಲ್ಲಿ ಎಲ್ಲಾ ವಿಧಿ-ವಿಧಾನಗಳ ಪ್ರಕಾರ ಗೌರವಯುತವಾಗಿ ನೆರವೇರಿಸಲು ಸಹಕರಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು.
ಕೀಳಾಗಿ ನೋಡಬೇಡಿ
ಅಂತಿಮ ವಿಧಿವಿಧಾನಗಳ ನಂತರ ಮಾತನಾಡಿದ ಸಂಸದ ಸುರೇಶ್ ಅವರು, ನರಸಿಂಹ ಶೆಟ್ಟಿ ಅವರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬ ವರ್ಗದವರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಅಂತ್ಯ ಸಂಸ್ಕಾರದಲ್ಲಿ ಪ್ರತಿಯೊಬ್ಬರೂ ಅಗತ್ಯ ಸುರಕ್ಷಾ ಪರಿಕರಗಳಾದ ಪಿಪಿಇ ಕಿಟ್ ಬಳಸಿ ಪಾಲ್ಗೊಂಡಿದ್ದರು. ವಿಧಾನ ಪರಿಷತ್ ಸದಸ್ಯ ರವಿ ಹಾಗೂ ಕನಕಪುರ ನಗರಸಭೆ ಸದಸ್ಯರು ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ತಮ್ಮ ನಡೆಯ ಮೂಲಕ ಕೊರೊನಾ ವೈರಸ್ ಸೋಂಕಿತರನ್ನು ಸಮಾಜ ಕೀಳಾಗಿ ನೋಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.