ಚನ್ನಪಟ್ಟಣ ಮಾಜಿ ನಗರಸಭಾ ಉಪಾಧ್ಯಕ್ಷೆಯ ಮೇಲೆ ಕರಡಿ ದಾಳಿ
ರಾಮನಗರ, ಮೇ 27: ಕರಡಿಯು ಬೆಳಗಿನ ಜಾವ ಜನನಿಬಿಡ ಪ್ರದೇಶಕ್ಕೇ ನುಗ್ಗಿ ಮಾಜಿ ನಗರಸಭಾ ಉಪಾಧ್ಯಕ್ಷೆಯ ಮೇಲೆ ಮಾರಣಾಂತಿಕ ದಾಳಿ ಮಾಡಿರುವ ಘಟನೆ ಚನ್ನಪಟ್ಟಣದ ಹೃದಯ ಭಾಗದಲ್ಲಿ ನಡೆದಿದೆ.
ನಗರದ ಮಧ್ಯಭಾಗ ಎಂ.ಜಿ ರಸ್ತೆಯ ಸುಣ್ಣದಕೇರಿ ಬಡಾವಣೆಗೆ ನುಗ್ಗಿದ್ದ ಕರಡಿ ದಾಳಿಗೆ ಮಾಜಿ ನಗರಸಭಾ ಉಪಾಧ್ಯಕ್ಷೆ ಸಾಕಮ್ಮ (65) ತೀವ್ರವಾಗಿ ಗಾಯಗೊಂಡಿದ್ದು, ಅವರ ಮಗ ಸುಧೀರ್ ಗೆ (40) ಸಣ್ಣ ಪುಟ್ಟ ಗಾಯಗಳಾಗಿವೆ. ಕರಡಿ ದಾಳಿಗೆ ಸಿಕ್ಕು ಸಾಕಮ್ಮ ರವರ ಮುಖ ಚರ್ಮ ಮತ್ತು ಕಣ್ಣಿನ ಗುಡ್ಡೆಗೆ ಹಾನಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸಾಕಮ್ಮ ಅವರನ್ನು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಮನಗರದಲ್ಲಿ ಸಂಚರಿಸಲಿದೆ ಸಂಚಾರಿ ತಪಾಸಣಾ ವಾಹನ
ಅಬ್ಬೂರು ಅರಣ್ಯ ಪ್ರದೇಶದಿಂದ ಕರಡಿ ಬಂದಿದೆ ಎನ್ನಲಾಗಿದ್ದು, ಪ್ರಸ್ತುತ ಹಲಸಿನ ಹಣ್ಣಿನ ಕಾಲವಾಗಿದ್ದರಿಂದ ಅಹಾರ ಅರಸಿ ಕರಡಿಗಳು ಅರಣ್ಯ ಸಮೀಪದ ಪ್ರದೇಶಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ. ಆದರೆ ನಗರದ ಜನನಿಬಿಡ ಪ್ರದೇಶಕ್ಕೆ ಬಂದಿರುವುದು ಇದೇ ಮೊದಲ ಪ್ರಕರಣ ಎನ್ನುತ್ತಾರೆ ಅರಣ್ಯ ವಲಯ ಅಧಿಕಾರಿ ಮನ್ಸೂರ್.
ಮೊದಲಿಗೆ ರೈತ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶದಲ್ಲಿ ಕಾಣಿಸಿಕೊಂಡ ಕರಡಿ, ನಂತರ ಸುಣ್ಣದಕೇರಿ ಬಡಾವಣೆಗೆ ನುಗ್ಗಿದೆ. ಕರಡಿಯು ಸಾಕಮ್ಮನವರ ಮನೆಯ ಹಿಂಬದಿಯ ಪೊದೆಯಲ್ಲಿ ಅವಿತು ಕುಳಿತುಕೊಂಡಿತ್ತು. ಇದೇ ಸಮಯಕ್ಕೆ ಮನೆಯ ಹಿಂಬದಿಗೆ ಬಂದ ಸಾಕಮ್ಮನ ಮೇಲೆ ದಾಳಿ ಮಾಡಿದೆ.
ಚನ್ನಪಟ್ಟಣದ ಹೃದಯಭಾಗದಲ್ಲಿ ಕರಡಿ ಓಡಾಟ#Bear #Channapatna pic.twitter.com/ES77j5pWlh
— oneindiakannada (@OneindiaKannada) May 27, 2020
ಸಾಕಮ್ಮಳನ್ನು ರಕ್ಷಣೆ ಮಾಡಲು ಬಂದ ಮಗ ಸುಧೀರ್ ಅವರಿಗೂ ಸಣ್ಣ ಪುಟ್ಟ ತರಚಿದ ಗಾಯಗಳಾಗಿವೆ. ಕರಡಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚನ್ನಪಟ್ಟಣ ನಗರ ಮಧ್ಯದಲ್ಲಿನ ಕರಡಿ ದಾಳಿಯಿಂದ ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ. ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕರಡಿಗಾಗಿ ಹುಡುಕಾಟ ನಡೆಸಿದ್ದಾರೆ.