ಡಿಕೆಶಿ, ಡಿಕೆ ಸುರೇಶ್ ದರ್ಪದ ವಿರುದ್ಧ ತೊಡೆತಟ್ಟಿದ 'ರೆಬೆಲ್ ಸ್ಟಾರ್'!
ರಾಮನಗರ, ಮಾರ್ಚ್ 30 : ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು ಸಜ್ಜಾಗಿವೆ. ಆದರೆ ಬಹುತೇಕ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಹೊಂದಾಣಿಕೆಯಿಲ್ಲದೆ ಮನಸ್ತಾಪವುಂಟಾಗಿದ್ದು ಒಂದೆಡೆ ಸ್ವಪಕ್ಷಗಳಲ್ಲಿಯೇ ಬಂಡಾಯದ ಹೊಗೆ ಕಾಣಿಸಿಕೊಂಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೇವೇಗೌಡರು ಸೇರಿದಂತೆ ಅವರ ಮೊಮ್ಮಕ್ಕಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರೂ ಕೂಡ ಒಳಗೊಳಗೆ ಅತೃಪ್ತಿ ಕಾಣಿಸಿಕೊಂಡಿದೆ. ತಮ್ಮ ಕ್ಷೇತ್ರದಲ್ಲಿ ಜೆಡಿಎಸ್ಗೆ ಬೆಂಬಲ ನೀಡಿ ಬೆಳೆಸುವುದರಿಂದ ಮುಂದೆ ತಮಗೆ ಅದರಿಂದ ತೊಂದರೆಯಾಗುತ್ತದೆ ಎಂಬ ಭಯ ಕಾಂಗ್ರೆಸ್ಸಿಗರದ್ದಾದರೆ, ಅದೇ ಪರಿಸ್ಥಿತಿ ಜೆಡಿಎಸ್ ಮುಖಂಡರನ್ನೂ ಕಾಡುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಡಿಕೆಶಿ ಬ್ರದರ್ಸ್ ಕೋಟೆಯೊಳಗೆ ಸೈನಿಕ ಯೋಗೇಶ್ವರ್ 'ಸರ್ಜಿಕಲ್ ಸ್ಟ್ರೈಕ್'?
ಮಂಡ್ಯದಲ್ಲಿ ಮತ್ತು ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಬಗ್ಗೆ ಮೆದು ಧೋರಣೆ ತೋರುತ್ತಿದ್ದು, ಈ ನಡುವೆ ಭಾರೀ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆಶಿ ಬ್ರದರ್ಸ್ ವಿರುದ್ಧ ಬಿಜೆಪಿ ಸಮರ ಸಾರಿರುವ ಬೆನ್ನಲ್ಲೇ, ಬೆಂಬಲ ನೀಡಬೇಕಾದ ಜೆಡಿಎಸ್ನ ಮುಖಂಡರು ಬಂಡಾಯವಾಗಿ ಸ್ಪರ್ಧಿಸುವ ಮೂಲಕ ಟಾಂಗ್ ನೀಡಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಜೋಡೆತ್ತುಗಳ ವಿರುದ್ಧ ತೊಡೆತಟ್ಟಿದ ಗೋಪಾಲ್
ಒಂದೆಡೆ ನಾನು ಮತ್ತು ಡಿ.ಕೆ. ಶಿವಕುಮಾರ್ ಜೋಡೆತ್ತುಗಳು ಎಂದು ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಕೆ. ಸುರೇಶ್ ಅವರಿಗೆ ಬೆಂಬಲ ನೀಡಬೇಕಾದ ಜೆಡಿಎಸ್ನ ನಾಯಕ ಇಟ್ಟಮಡು ಗೋಪಾಲ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಟಾಂಗ್ ನೀಡಿದ್ದಾರೆ. ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮಲ್ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದರೂ ಕೆಳಹಂತದಲ್ಲಿ ಅಸಮಾಧಾನ ಶಮನವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಸಿಎಂ ಕುಮಾರಸ್ವಾಮಿ ರಾಜಕಾರಣದ ರಹಸ್ಯ ಬಿಚ್ಚಿಟ್ಟ ಯೋಗೇಶ್ವರ್!
ಗೆಲ್ಲುತ್ತೇನೆಂಬ ಭ್ರಮೆಯಲ್ಲಿ ಡಿಕೆ ಸುರೇಶ್
ಇಷ್ಟಕ್ಕೂ ಜೆಡಿಎಸ್ನ ಇಟ್ಟಮಡು ಗೋಪಾಲ್ ಸ್ಪರ್ಧಿಸಲು ಕಾರಣವೇನು ಎಂಬುದಕ್ಕೆ ಅವರೇ ಸುದ್ದಿಗೋಷ್ಠಿ ಕರೆದು ಹೇಳಿದ್ದಾರೆ. ಅದು ಏನು ಎಂಬುದು ಇಲ್ಲಿದೆ. ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಗೆಲ್ಲುತ್ತೇನೆಂಬ ಭ್ರಮೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಕ್ಯಾರೆ ಎನ್ನುತ್ತಿಲ್ಲ. ಹಲವಾರು ವರ್ಷಗಳಿಂದ ಜೆಡಿಎಸ್ನ ಪ್ರಾಮಾಣಿಕ ಕಾರ್ಯಕರ್ತನಾಗಿ ದುಡಿಯುತ್ತಿರುವ ತಮ್ಮನ್ನು ಹಾಗೂ ಸ್ನೇಹಿತರನ್ನು ಸೌಜನ್ಯಕ್ಕೂ ತಿರುಗಿ ನೋಡುವುದಿಲ್ಲ. ಹೀಗಾಗಿ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ.
ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು?
ಡಿಕೆಶಿ ಸಹೋದರರ ದರ್ಪ ಮತ್ತು ದೌರ್ಜನ್ಯ
ಡಿಕೆಶಿ ಸಹೋದರರ ದರ್ಪ ಮತ್ತು ದೌರ್ಜನ್ಯವನ್ನು ವಿರೋಧಿಸುವ ಅಸಂಖ್ಯಾತ ಜೆಡಿಎಸ್ ಕಾರ್ಯಕರ್ತರು ತಮ್ಮ ಜೊತೆಗಿದ್ದಾರೆ. ಅಲ್ಲದೆ ಕೋಮುವಾದಿ ಪಕ್ಷವಾದ ಬಿಜೆಪಿಗೆ ಮತ ಹಾಕಲು ಇಷ್ಟಪಡದವರು ಹಾಗೂ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಬಗ್ಗೆ ಇರುವ ಅಸಮಾಧಾನದ ಮತಗಳನ್ನು ಸೆಳೆಯಲು ತಾವು ಬಂಡಾಯವಾಗಿ ಸ್ಪರ್ಧಾಕಣಕ್ಕೆ ಇಳಿದಿರುವುದಾಗಿ, ಜೆಡಿಎಸ್ ಮತಗಳನ್ನು ಸೆಳೆಯವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದು ತಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಇದೇ ವೇಳೆ ಇಟ್ಟಮಡು ಗೋಪಾಲ್ ಹೇಳಿದ್ದಾರೆ.
ಜೋಡೆತ್ತುಗಳಲ್ಲಿ ಒಬ್ಬರಾಗಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್
ಗೋಪಾಲ್ ಗೆ ತಾಕತ್ ಇದೆಯಾ?
ಇನ್ನು ಈ ಇಟ್ಟಮಡು ಗೋಪಾಲ್ ಯಾರು ಅವರಿಗೆ ಲೋಕಸಭಾ ಚುನಾವಣೆಯನ್ನು ಎದುರಿಸುವ ತಾಕತ್ ಇದೆಯಾ ಎಂಬುದನ್ನು ನೋಡುವುದಾದರೆ, ಈ ಹಿಂದೆ ಗೋಪಾಲ್ ಇಟ್ಟಮಡು ಗ್ರಾಮ ಪಂಚಾಯತ್ ಸದಸ್ಯನಾಗಿ ಚುನಾಯಿತರಾದವರು. ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಪ್ರತಿನಿಧಿಸಿ ಗಮನಾರ್ಹ ಮತಗಳನ್ನು ಪಡೆದಿದ್ದರೂ ಗೆಲುವು ಸಾಧಿಸಿರಲಿಲ್ಲ. ಜೆಡಿಎಸ್ ಕಾರ್ಯಕರ್ತನಾಗಿ ಕಳೆದ 30 ವರ್ಷದಿಂದ ಎಲ್ಲಾ ಹಂತದ ಚುನಾವಣೆಯಲ್ಲಿಯೂ ಕೆಲಸ ಮಾಡಿರುವ ಅನುಭವವಿದೆ. ಅಲ್ಲದೆ ಎಸ್ಡಿಎಂಸಿ ಸಮಿತಿ ಜಿಲ್ಲಾಧ್ಯಕ್ಷನಾಗಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರ ಹೋರಾಟಗಳಲ್ಲಿ ಭಾಗವಹಿಸಿ ಸ್ಪಂದಿಸಿದ್ದಾರಂತೆ. ಇದನ್ನೇ ಇಟ್ಟುಕೊಂಡು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವುದಾಗಿ ಹೇಳುತ್ತಿದ್ದಾರೆ.
ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರದ ಸಮಗ್ರ ಪರಿಚಯ
ಸ್ವಾರ್ಥಕ್ಕಾಗಿ ಆಗಿರುವ ಹೊಂದಾಣಿಕೆ
ಇನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ವಿರುದ್ಧ ಸೆಡ್ಡು ಹೊಡೆದರೆ ಅವರು ಜೆಡಿಎಸ್ ನಿಂದ ಶಿಸ್ತುಕ್ರಮ ಎದುರಿಸುವುದಂತು ನಿಜ. ಆದರೆ ಇದಕ್ಕೆ ಬಗ್ಗಲ್ಲ ಎನ್ನುತ್ತಿದ್ದಾರೆ ಇಟ್ಟಮಡು ಗೋಪಾಲ್. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವಾಗ ಕಾರ್ಯಕರ್ತರ ಅಭಿಪ್ರಾಯ ಕೇಳಿಲ್ಲ. ಹೊಂದಾಣಿಕೆ ಎನ್ನುವುದು ನಾಯಕರ ಹಂತದಲ್ಲಿ ಆಗಿದೆ. ಸ್ವಾರ್ಥಕ್ಕಾಗಿ ಆಗಿರುವ ಹೊಂದಾಣಿಕೆಯಿಂದ ಅವರಿಗೆ ಲಾಭವೇ ಹೊರತು ಕಾರ್ಯಕರ್ತರಿಗೆ ಒಳಿತಾಗುವುದಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಡಿಕೆ ಸುರೇಶ್ ಅವರು ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಬಿಜೆಪಿಯ ಮುನಿರಾಜು ಗೌಡ ವಿರುದ್ಧ 2 ಲಕ್ಷ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು.
ಶಿಸ್ತುಕ್ರಮ ಜರುಗಿಸಿದರೂ ಜಗ್ಗುವುದಿಲ್ಲ
ರಾಜಕಾರಣದಲ್ಲಿ ಹಿಂದಿನಿಂದಲೂ ನಾವು ಕಾಂಗ್ರೆಸ್ ವಿರೋಧಿಸಿಕೊಂಡು ಬಂದವರು. ಯಾವುದೇ ಕಾರಣಕ್ಕೂ ಆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ. ಪಕ್ಷದ ವರಿಷ್ಠರು ತಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸಿದರೂ ಜಗ್ಗುವುದಿಲ್ಲ ಎಂದು ಸವಾಲು ಹಾಕಿದ್ದಾರೆ ಇಟ್ಟಮಡು ಗೋಪಾಲ್. ಇದು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅವರಿಗೆ ಭಾರೀ ತಲೆನೋವು ತಂದಿದೆ. ಕುಮಾರಸ್ವಾಮಿ ಏನು ಮಾಡುತ್ತಾರೆ? ತಮ್ಮ ಪಕ್ಷದ ಕಾರ್ಯಕರ್ತನ ಮುನಿಸನ್ನು ಶಮನ ಮಾಡುತ್ತಾರಾ? ಅಥವಾ ಏನಾದರೂ ಮಾಡಿಕೋ ಎಂದು ಬಿಟ್ಟುಬಿಡುತ್ತಾರಾ? ಮುಂದೇನಾಗುತ್ತೆ ಎನ್ನುವುದು ಕಾಲವೇ ಹೇಳಬೇಕು.