ದೇವಾಲಯದ ಆಸ್ತಿ ಉಳಿಸಲು ಉಪವಾಸ ಕುಳಿತ 98ರ ವಯೋವೃದ್ಧ
ರಾಮನಗರ, ಆಗಸ್ಟ್.26: ಆ ವಯೋವೃದ್ಧನಿಗೆ 98 ವರ್ಷ. ಹಲವಾರು ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಪೂಜೆ ಪುನಸ್ಕಾರ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ವ್ಯಕ್ತಿಯೊಬ್ಬರು ಕಬಳಿಸಿದ್ದಾರೆ.
ಇದರಿಂದ ಮನನೊಂದ ವಯೋವೃದ್ಧ ಅಕ್ರಮವಾಗಿ ಒತ್ತುವರಿಯಾಗಿರುವ ಜಾಗವನ್ನು ದೇವಾಲಯಕ್ಕೆ ಬಿಡುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ.
ರಾಷ್ಟ್ರಪತಿಗೆ ಕೊಲೆ ಬೆದರಿಕೆ, ಕೇರಳದ ಅರ್ಚಕನ ಬಂಧನ
ಹಾಸಿಗೆ ಹಿಡಿದು ಮಲಗಿದ್ದಲ್ಲೇ ಹೋರಾಟ ನಡೆಸುತ್ತಿರುವ ವೃದ್ಧನ ಹೋರಾಟಕ್ಕೆ ಗ್ರಾಮಸ್ಥರೂ ಸಾಥ್ ನೀಡಿದ್ದಾರೆ.
ಅಂದಹಾಗೆ ಈ ಜಾಗ ಒತ್ತುವರಿ ಮಾಡಿಕೊಂಡಿರುವುದು ಹುಲಿಕಲ್ ಗ್ರಾಮದ ಅರುಣಚಲೇಶ್ವರ ದೇವಾಲಯದ ಜಾಗದಲ್ಲಿ. ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಇದೀಗ ವಯೋವೃದ್ಧ ಮಾಗಡಿ ರಾಯಪ್ಪ ಎಂಬುವವರು ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ.
ಆಗಸ್ಟ್ 23ರ ಗುರುವಾರದಿಂದ ದೇವಾಲಯದ ಆವರಣದಲ್ಲೇ ಮಾಗಡಿ ರಾಯಪ್ಪ ಅಕ್ರಮಿಸಿಕೊಂಡಿರುವ ಜಾಗವನ್ನು ದೇವಾಲಯಕ್ಕೆ ನೀಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.
"ಈ ಹಿಂದೆ ದೇವಾಲಯಕ್ಕೆ ತಮ್ಮದೇ ಕುಟುಂಬದವರು ದಾನವಾಗಿ ನೀಡಿರುವ ಜಮೀನೆಲ್ಲವನ್ನು ಈಗಾಗಲೇ ತಿಂದು ತೇಗಿದ್ದಾರೆ. ಇದೀಗ ದೇವಾಲಯದ ಆಸ್ತಿಗೂ ಸಹ ಕಣ್ಣು ಬಿದ್ದಿದ್ದು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡು ಮನೆ ಕಟ್ಟುತ್ತಿದ್ದಾರೆ.
ದೇವಾಲಯದ ಜಾಗ ದೇವಾಲಯಕ್ಕೆ ಹಿಂತಿರುಗಿ ನೀಡುವವರೆಗೂ ತಾವು ಅಮರಣಾಂತ ಉಪವಾಸ ಕೈ ಬಿಡುವುದಿಲ್ಲವೆಂದು" ಮಾಗಡಿ ರಾಯಪ್ಪ ಪಟ್ಟು ಹಿಡಿದಿದ್ದಾರೆ.
ಹುಲಿಕಲ್ ಗ್ರಾಮದಲ್ಲಿನ ಸರ್ವೇ ನಂಬರ್ 424/2 ರಲ್ಲಿನ 16 ಗುಂಟೆ ಜಾಗ ಅರುಣಾಚಲೇಶ್ವರ ದೇವಾಲಯಕ್ಕೆ ಸೇರಿದ್ದಾಗಿದೆ. ಈ ಹಿಂದೆ ಅರ್ಚಕ ರಾಯಪ್ಪನವರ ಕುಟುಂಬದವರು ದೇವಾಲಯಕ್ಕೆ 18 ಎಕರೆ ಜಮೀನನ್ನು ದಾನವಾಗಿ ನೀಡಿದರು.
ಈಗಾಗಲೇ ಬಹುತೇಕ 18 ಎಕರೆ ಜಮೀನು ಎಲ್ಲವೂ ಭೂಗಳ್ಳರ ಪಾಲಾಗಿದ್ದು, ಉಳಿದಿದ್ದು ಮಾತ್ರ ದೇವಾಲಯದ ಜಾಗವಾಗಿತ್ತು. ದೇವಾಲಯದ 16 ಗುಂಟೆ ಜಾಗದಲ್ಲಿ 4 ಗುಂಟೆ ಪುರಾತನಕಲ್ಯಾಣಿ, 4 ಗುಂಟೆ ಜಾಗದಲ್ಲಿ ಹಳೆಯಮಂಟಪ, 3 ಗುಂಟೆ ಜಾಗದಲ್ಲಿ ಅರ್ಚಕರ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು.
ಆದರೆ ಕಳೆದ ಮೂರು ವರ್ಷಗಳ ಹಿಂದೆ ಹುಲಿಕಲ್ ಗ್ರಾಮಪಂಚಾಯತ್ ಕಾರ್ಯದರ್ಶಿಯಾಗಿದ್ದ ವೆಂಕಟೇಶ್ ಎಂಬುವವರು ದಾಖಲೆಗಳನ್ನು ತಿದ್ದಿ, ತಮ್ಮ ತಂದೆ-ತಾಯಿಯಾದ ಕಾಳಹೊನ್ನಯ್ಯ ಹಾಗೂ ಮಲ್ಲಮ್ಮ ದಂಪತಿಗಳ ಹೆಸರಿನಲ್ಲಿ 4 ಗುಂಟೆ ಜಾಗವನ್ನು ನೊಂದಣಿ ಮಾಡಿಸಿಕೊಂಡಿದ್ದಾರೆ.
ಇದೀಗ ಪುರಾತನ ಮಂಟಪಗಳಿದ್ದ ಜಾಗದಲ್ಲಿ ಮಂಟಪಗಳನ್ನು ಕೆಡವಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ವಯೋವೃದ್ಧ ಅರ್ಚಕ ರಾಯಪ್ಪ ಅಮರಣಾಂತ ಉಪವಾಸ ನಡೆಸುತ್ತಿದ್ದಾರೆ. ಕೂಡಲೇ ಸರ್ವೇ ಕಾರ್ಯ ನಡೆಸಿ ಒತ್ತುವರಿ ಜಾಗವನ್ನು ದೇವಾಲಯಕ್ಕೆ ಹಸ್ತಾಂತರ ಮಾಡುವಂತೆ ಗ್ರಾಮಸ್ಥರು ಕೂಡ ಆಗ್ರಹಿಸಿದ್ದಾರೆ.
ಒಟ್ಟಾರೆ ಇಳಿವಯಸ್ಸಿನಲ್ಲೂ ಸಹ ಅಕ್ರಮದ ವಿರುದ್ಧ ವಯೋವೃದ್ದ ರಾಯಪ್ಪ ಹೋರಾಟಕ್ಕಿಳಿದಿದ್ದಾರೆ. ದೇವಾಲಯಕ್ಕೆ ನೀಡಿದ ಜಾಗವನ್ನು ಮರಳಿ ದೇವಾಲಯಕ್ಕೆ ನೀಡುವಂತೆ ಉಪವಾಸ ಸತ್ಯಾಗ್ರಹಕ್ಕೆ ಕೂತಿದ್ದಾರೆ. ಇನ್ನಾದರೂ ವಯೋವೃದ್ದರ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದಿಸಿ ಸರ್ವೇ ಕಾರ್ಯ ನಡೆಸಿ ಅಕ್ರಮದ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.