ರಾಮನಗರ; ಜನಸ್ಪಂದನ ಕಾರ್ಯಕ್ರಮಕ್ಕೆ ಸಚಿವ ಅಶ್ವಥ್ ನಾರಾಯಣ ಗೈರು
ರಾಮನಗರ, ಮೇ 17: ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಗೈರಾದರು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ನೇತೃತ್ವದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ರಾಮನಗರ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಅಶ್ವಥ್ ನಾರಾಯಣ ರಾಜ್ಯದಲ್ಲಿ ಬಿರುಸಾದ ರಾಜಕೀಯ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಗೈರಾದರು.
ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಪರ ಅಶ್ವತ್ಥನಾರಾಯಣ ಮಂಡ್ಯ, ಮೈಸೂರಿನಲ್ಲಿ ಪ್ರಚಾರ
ಜನಸ್ಪಂದನಾ ಕಾರ್ಯಕ್ರಮ 11 ಗಂಟೆಗೆ ಪ್ರಾರಂಭಬೇಕಿತ್ತು. ಆದರೆ ಅಶ್ವಥ್ ನಾರಾಯಣ ಗೈರುಹಾಜರಿಯಾದ ಕಾರಣ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ವೇದಿಕೆ ಮುಂದೆ ಅಧಿಕಾರಿಗಳ ದಂಡೆ ನೆರದಿತ್ತು.
ಜನಸ್ಪಂದನ ಕಾರ್ಯಕ್ರಮಕ್ಕೆ ಪ್ರಚಾರದ ಕೊರತೆ ಎದ್ದು ಕಾಣುತಿತ್ತು. ಸಭೆಯಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಾಂ, ಅಪರ ಜಿಲ್ಲಾಧಿಕಾರಿ ಜವರೇಗೌಡ, ಎಸಿ ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಜನಸ್ಪಂದನ ಕಾರ್ಯಕ್ರಮ ಅಂದಮೇಲೆ ನೂರಾರು ಸಂಖ್ಯೆಯಲ್ಲಿ ಜನರು ತಮ್ಮ ಅಹವಾಲು ಹಿಡಿದು ಬರಬೇಕಾಗಿತ್ತು. ಆದರೆ ಜಿಲ್ಲಾಡಳಿತದ ಪ್ರಚಾರದ ಕೊರತೆಯಿಂದ 10-20 ಮಂದಿ ಮಾತ್ರ ಬಂದಿದ್ದರು. ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಬೇಕಿದ್ದ ಜನಸ್ಪಂದನ ಕಾರ್ಯಕ್ರಮ ಕೆಲ ಗಂಟೆಯಲ್ಲೇ ಮುಕ್ತಾಯವಾಯಿತು.
ಸಮಸ್ಯೆಗಳ ಪರಿಹಾರಕ್ಕಾಗಿ ರೈತರ ಅಳಲು; ಅಧಿಕಾರಿಗಳು ಹಣವಿಲ್ಲದೇ ಯಾವ ಕೆಲಸಗಳನ್ನು ಮಾಡಿಕೊಡುತ್ತಿಲ್ಲ ನನ್ನ ಜಮೀನಿನ ಖಾತೆ ಮಾಡಿಕೊಡಲು ಅಧಿಕಾರಿಗಳು ಕಳೆದ ಒಂದು ವರ್ಷದಿಂದ ಅಲೆದಾಟ ಮಾಡಿಸುತ್ತಿದ್ದಾರೆ. ಸಭೆಗೆ ಸಚಿವರು ಬರುತ್ತಾರೆ ನಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ ಎಂದು ಕಾರ್ಯಕ್ರಮಕ್ಕೆ ಬಂದೆ ಆದರೆ ಇಲ್ಲಿ ಸಚಿವರೇ ಬಂದಿಲ್ಲ ಎಂದು ರೈತ ಸಿದ್ದರಾಜು ತಮ್ಮ ಅಳಲು ತೋಡಿಕೊಂಡರು.
ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, "ನಾವು ಈಗಾಗಲೇ ಕೈಲಾಂಚ ಹೋಬಳಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಿದ್ದೇವೆ. ಕಸಬಾ ಹೋಬಳಿಯ ಜನಸ್ಪಂದನ ಕಾರ್ಯಕ್ರಮ ಕೋವಿಡ್ ಭೀತಿಯಿಂದ ಹಮ್ಮಿಕೊಂಡಿಲ್ಲ ಅದನ್ನು ಸದ್ಯದಲ್ಲಿ ಹಮ್ಮಿಕೊಳ್ಳುತ್ತೇವೆ" ಎಂದರು.
"ಜನಸ್ಪಂದನ ಕಾರ್ಯಕ್ರಮವನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ಮಾಡಿದ್ದಾರೆ. ಜನರಿಂದ ಅರ್ಜಿ ಸ್ವೀಕರಿಸಲು ಹಾಗೂ ರೈತರಿಗೆ ಕೃಷಿ ಮಾಹಿತಿ ನೀಡಲು ಕೌಂಟರ್ ನಿರ್ಮಿಸಿದ್ದಾರೆ. ಜನರು ತಮ್ಮ ಸಮಸ್ಯೆಗಳ ಬಗೆಗಿನ ಅರ್ಜಿಗಳನ್ನು ಕೌಂಟರ್ ನಲ್ಲಿ ನೀಡಿ ಹಿಂಬರಹ ಪಡೆಯಿರಿ, ನಾನು ಅಧಿಕಾರಿಗಳ ಸಂಪರ್ಕದಲ್ಲಿದ್ದು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ. ಜನಸ್ಪಂದನ ಕಾರ್ಯಕ್ರಮಗಳನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು" ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಕರೆ ನೀಡಿದರು.
Recommended Video