ನೀವು ಸಮರ್ಥ ಕಾರ್ಮಿಕ ಸಚಿವರೇ?; ಪ್ರಶ್ನೆ ಮಾಡಿದ ಟೊಯೊಟಾ ಕಾರ್ಮಿಕರು
ರಾಮನಗರ, ಫೆಬ್ರವರಿ 3: ಕಳೆದ 85 ದಿನಗಳಿಂದ ನಿರಂತರವಾಗಿ ಟೊಯೊಟಾ ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಹೋರಾಟ ಮಾಡುತ್ತಿರುವ ಕಾರ್ಮಿಕರ ಸಿಟ್ಟು ಕಾರ್ಮಿಕ ಸಚಿವರ ಕಡೆಗೆ ತಿರುಗಿದ್ದು, ನೀವು ಸಮರ್ಥ ಕಾರ್ಮಿಕ ಸಚಿವರೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುವ ಮೂಲಕ ತಮ್ಮ ಸಿಟ್ಟು ಹೊರಹಾಕಿದ್ದಾರೆ.
ಕಳೆದ 84 ದಿನಗಳಿಂದ ಟೊಯೊಟಾ ಕಾರ್ಖಾನೆಯ ಕಾರ್ಮಿಕರು ಹೋರಾಟ ಮಾಡುತ್ತಿರುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಸದನದ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ನೀಡಿದ ಉತ್ತರದಿಂದ ಟೊಯೊಟಾ ಕಾರ್ಮಿಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೊಯೋಟಾ ಕಾರ್ಮಿಕರಿಗೆ ಶುಭ ಸುದ್ದಿ ನೀಡಿದ ಸಚಿವರು
""ವಿಧಾನಸಭೆ ಅಧಿವೇಶನದಲ್ಲಿ ಸಚಿವರು ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಆಡಳಿತ ಮಂಡಳಿ ವಕ್ತಾರರಾಗಿ ಮಾತನಾಡಿದ್ದೀರಿ, ಆಡಳಿತ ಮಂಡಳಿ ಬರೆದುಕೊಟ್ಟ ಮಾಹಿತಿಯನ್ನು ಸದನದಲ್ಲಿ ನೀಡಿದ್ದೀರಿ. ಕಾರ್ಮಿಕ ಸಂಘದ ಜತೆಗೆ ಕೇವಲ ಒಂದು ಸಭೆ ನಡೆಸಿ ಸದನದಲ್ಲಿ 5 ಸಭೆಗಳನ್ನು ಮಾಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡಿದ್ದೀರಿ. ಕಾರ್ಮಿಕ ಸಚಿವರಾಗಲು ನೀವು ಸಮರ್ಥರೇ?'' ಎಂದು ಸಾಮಾಜಿಕ ಜಾಲತಾಣದಲ್ಲಿ ಕಾರ್ಮಿಕರು ಪ್ರಶ್ನೆ ಮಾಡಿರುವ ಪೋಸ್ಟ್ ಹರಿದಾಡುತ್ತಿವೆ.