ಬಿಜೆಪಿ ಸಣ್ಣತನ ತೋರಲ್ಲವೆಂಬ ವಿಶ್ವಾಸವಿದೆ- ಅನಿತಾ ಕುಮಾರಸ್ವಾಮಿ
ರಾಮನಗರ, ಆಗಸ್ಟ್ 3: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾದ ನಂತರ ಮೊದಲ ಬಾರಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ತಮ್ಮ ಕ್ಷೇತ್ರ ರಾಮನಗರಕ್ಕೆ ನಿನ್ನೆ ಭೇಟಿ ನೀಡಿದ್ದರು. ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಅಮಾವಾಸ್ಯೆ ಪೂಜೆ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಸಣ್ಣತನದ ರಾಜಕೀಯ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಈಗಾಗಲೇ ಸಿಎಂ ಯಡಿಯೂರಪ್ಪ ನಾನು ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿದ್ದಾರೆ. ಸ್ವಲ್ಪ ದಿನ ಕಾದು ನೋಡೋಣ" ಎಂದು ಹೇಳಿದರು. "ಹದಿನಾಲ್ಕು ತಿಂಗಳು ಅಧಿಕಾರ ನಡೆಸಿದ ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಯಾರಿಗೂ ಯಾವುದೇ ತೊಂದರೆ ಮಾಡಿಲ್ಲ. ಕ್ಷೇತ್ರದ ಅಭಿವೃದ್ಧಿಯನ್ನ ಮುಂದಿನ ದಿನಗಳಲ್ಲಿ ನೀವೇ ನೋಡಿ" ಎಂದರು.
ದೇವೇಗೌಡರು ಸೋಲಲು ಅವರ ಸೊಸೆಯಂದಿರು ಕಾರಣ: ಕಾಂಗ್ರೆಸ್ ಮುಖಂಡ
ನಿಖಿಲ್ ಕುಮಾರ್ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುವ ವಿಚಾರದಲ್ಲಿ ಯಾವ ಮಾತುಕತೆಯೂ ನಡೆದಿಲ್ಲ. ಅವನು ಸದ್ಯ ಹೊಸ ಪ್ರೊಡಕ್ಷನ್ ನಲ್ಲಿ ಸಿನಿಮಾಗೆ ಸಹಿ ಮಾಡಿದ್ದಾನೆ" ಎಂದು ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನು ತಳ್ಳಿ ಹಾಕಿದರು.
"ಕಳೆದ ಹಲವಾರು ವರ್ಷಗಳಿಂದ ಕುಂಟುತ್ತಾ ಸಾಗಿರುವ ರಾಜೀವ್ ಗಾಂಧಿ ಯೂನಿವರ್ಸಿಟಿ ಕಾಮಗಾರಿ ಆದಷ್ಟು ಬೇಗ ಪ್ರಾರಂಭವಾಗಲಿದೆ. ಈ ಸಂಬಂಧ ಅಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುವುದು. ಭೂಮಿ ನೀಡಲು ಎಲ್ಲಾ ರೈತರು ಒಪ್ಪಿಕೊಂಡಿದ್ದಾರೆ ಯಾವುದೇ ಸಮಸ್ಯೆ ಇಲ್ಲ" ಎಂದು ಮಾಹಿತಿ ನೀಡಿದರು.