ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ: ಅನಿತಾ ಕುಮಾರಸ್ವಾಮಿ ಕರೆ
Recommended Video
ರಾಮನಗರ, ಏಪ್ರಿಲ್ 27 : ನಾಡಿನ ಅಭಿವೃದ್ಧಿಗೆ ಮಾರಕವಾಗಿರುವ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ತಿರಸ್ಕರಿಸಿ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಮತದಾರರಿಗೆ ಕರೆ ನೀಡಿದರು.
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಮರಳವಾಡಿ ಹೋಬಳಿಯಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು 20 ತಿಂಗಳ ಅಧಿಕಾರಾವಧಿಯಲ್ಲಿ ಕುಮಾರಣ್ಣ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳೇ ಅವರಿಗೆ ಶ್ರೀರಕ್ಷೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ವೃದ್ಧರ ವೃದ್ದಾಪ್ಯ ವೇತನ, ಬಾಣಂತಿಯರಿಗೆ ಸಹಾಯಧನ ಕೂಡ ಹೆಚ್ಚಳ ಮಾಡಲಿದ್ದಾರೆ. ರೈತರ ಪರವಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು ಸನ್ನದ್ದರಾಗಿದ್ದಾರೆ. ನಿಮ್ಮ ಮನೆ ಮಗನನ್ನ ಹರಸಿ ಈ ಬಾರಿಯೂ ಗೆಲ್ಲಿಸಿ ಎಂದು ಮತಯಾಚನೆ ಮಾಡಿದರು.
ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತಟ್ಟೆಕೆರೆಯಲ್ಲಿನ ಮಹದೇಶ್ವರ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.ನಂತರ ಬನವಾಸಿ ಪಂಚಾಯಿತಿ, ತಟ್ಟೆಕೆರೆ ಪಂಚಾಯಿತಿ, ಯಲಚವಾಡಿ ಪಂಚಾಯಿತಿ ವ್ಯಾಪ್ತಿಯ ಹಲವಾರು ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿ, ಕುಮಾರಸ್ವಾಮಿ ಪರ ಮತಯಾಚನೆ ಮಾಡಿದರು.
ರಾಮನಗರದ ವೀರಶೈವರು ಜೆಡಿಎಸ್ ಬೆಂಬಲಿಸಲು ಕಾರಣಗಳೇನು?
ಪ್ರತಿ ಗ್ರಾಮ ಪಂಚಾಯಿತಿಗೆ ತೆರಳಿದ ವೇಳೆ ಮಹಿಳೆಯರು ಹೂವಿನ ಹಾರ ಹಾಕಿ, ಆರತಿ ಎತ್ತಿ ಅನಿತಾ ಕುಮಾರಸ್ವಾಮಿಯವರನ್ನು ಸ್ವಾಗತಿಸಿದರು.
ಮೇ 12ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬೀಳಲಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿಯಿಂದ ಸಿಪಿ ಯೋಗೇಶ್ವರ, ಕಾಂಗ್ರೆಸ್ ನಿಂದ ಎಚ್.ಎಂ.ರೇವಣ್ಣ ಸ್ಪರ್ಧೆಗಿಳಿಯಲಿದ್ದಾರೆ. ಈ ಮೂವರ ಕಾದಾಟದಿಂದ ಕ್ಷೇತ್ರದತ್ತ ಎಲ್ಲರೂ ನೋಡುವಂತಾಗಿದೆ.