ಸಿಎಂ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅನಿತಾ ಕುಮಾರಸ್ವಾಮಿ
ರಾಮನಗರ, ಮಾರ್ಚ್ 7: ರಾಜ್ಯ ಬಜೆಟ್ ನಲ್ಲಿ ಎಚ್.ಡಿ.ಕುಮಾರಸ್ವಾಮಿ ಯೋಜನೆಗಳಿಗೆ ಬ್ರೇಕ್ ಬಿದ್ದಿರುವ ವಿಚಾರಕ್ಕೆ ಸಿಎಂ ಯಡಿಯೂರಪ್ಪ ವಿರುದ್ಧ ರಾಮನಗರ ಶಾಸಕಿ ಅನಿತಾಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ರಾಮನಗರದಲ್ಲಿ ಮಾತನಾಡಿದ ಅನಿತಾ ಕುಮಾರಸ್ವಾಮಿ, "ಯಡಿಯೂರಪ್ಪನವರು ರೈತರ ಪರ ಎಂದು ಹೇಳಿಕೊಳ್ಳುತ್ತಾರೆ. ಆದರೆ ಬಜೆಟ್ ನಲ್ಲಿ ರೈತರಿಗಾಗಿ ಇದ್ದ ಯೋಜನೆಗಳಿಗೆ ತಡೆ ಹಾಕಿದ್ದಾರೆ. ಕುಮಾರಸ್ವಾಮಿಯವರಿಗಾಗಿ ಅಲ್ಲದಿದ್ದರೂ ರೈತರಿಗಾಗಿ ಮುಂದುವರೆಸಬಹುದಿತ್ತು. ಪ್ರಮುಖವಾಗಿ ರೈತರ ಸಾಲಮನ್ನಾ ಯೋಜನೆಯನ್ನ ಕೈಬಿಟ್ಟಿದ್ದಾರೆ. ಅದು ಸರಿಯಲ್ಲ" ಎಂದು ಹೇಳಿದರು.
ಕನಕಪುರದಲ್ಲಿ ಏಸು ಪ್ರತಿಮೆ ನಿರ್ಮಾಣ; ಅನಿತಾ ಕುಮಾರಸ್ವಾಮಿ ಹೇಳುವುದೇನು?
"ಬಜೆಟ್ ಮಂಡಿಸುವಾಗಲೂ ಹಸಿರು ಶಾಲು ಹಾಕಿಕೊಂಡಿದ್ದರು. ಆದರೆ ಬಜೆಟ್ ಮಾತ್ರ ರೈತರ ಪರವಾಗಿಲ್ಲ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ನಿಮಗಿದ್ದರೆ ಕೈಬಿಟ್ಟಿರುವ ಯೋಜನೆಗಳನ್ನು ಮುಂದುವರೆಸಿ" ಎಂದು ಆಗ್ರಹಿಸಿದರು.
ಮಗ ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರವಾಗಿ ಮಾತನಾಡಿದ ಅವರು, "ನಾವೇನು ಸಾವಿರಾರು ರೂಪಾಯಿ ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಿಲ್ಲ. ನಮ್ಮ ಜನಗಳ ಮಧ್ಯೆ ಮದುವೆ ಮಾಡಬೇಕೆಂಬ ಅಭಿಪ್ರಾಯ ಅಷ್ಟೇ. ಅದ್ಧೂರಿಯಾಗೇನು ಮದುವೆ ಮಾಡ್ತಿಲ್ಲ. ನಮ್ಮ ಕಡೆಯಿಂದ ಯಾರಿಗೂ ಗಿಫ್ಟ್ ಇಲ್ಲ, ಅದೆಲ್ಲ ಸುಳ್ಳು ಮಾಹಿತಿ. ಆ ರೀತಿ ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ. ಎಲ್ಲವೂ ಸರಳವಾಗಿಯೇ ನಡೆಯುತ್ತಿದೆ. ಬೆಂಗಳೂರಿನ ಬದಲಾಗಿ, ನಮ್ಮ ಜಿಲ್ಲೆಯಲ್ಲೇ ಮದುವೆ ಮಾಡುತ್ತಿದ್ದೇವೆ ಅಷ್ಟೆ" ಎಂದು ತಿಳಿಸಿದರು.