ರಾಮನಗರಕ್ಕೆ ಅನಿತಾ ಕುಮಾರಸ್ವಾಮಿ? 'ಸೀತೆ' ಹೇಳಿಕೆ ನೀಡಿದೆ ಸುಳಿವು
ರಾಮನಗರ, ಸೆಪ್ಟೆಂಬರ್ 06: ರಾಮನಗರ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಅನುಮಾನಕ್ಕೆ ಜೆಡಿಎಸ್ನ ಸಚಿವ ಜಿ.ಟಿ.ದೇವೇಗೌಡ ಅವರು ಪರೋಕ್ಷ ಉತ್ತರ ನೀಡಿದ್ದಾರೆ.
ಇಂದು ರಾನಗರದಲ್ಲಿ ಕುಮಾರಸ್ವಾಮಿ ಅವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿಯೇ ಮಾತನಾಡಿದ ಜಿಟಿ ದೇವೇಗೌಡ 'ರಾಮನಗರಕ್ಕೆ ಕುಮಾರಸ್ವಾಮಿ ರಾಮನಂತೆ ಇದ್ದಾರೆ, ಈಗ ಇಲ್ಲಿಗೆ ಸೀತೆಯನ್ನು ಕರೆದುಕೊಂಡು ಬರಬೇಕಾಗಿದೆ' ಎಂದರು.
ಲೋಕಲ್ ವಾರ್: ಉ.ಕದಲ್ಲಿ ಜೆಡಿಎಸ್ ಝಗಮಗ, ಕಾಂಗ್ರೆಸ್ ಕಿಲಕಿಲ
ಅಲ್ಲಿಗೆ ಪರೋಕ್ಷವಾಗಿ ರಾಮನಗರ ಕಾರ್ಯಕರ್ತರಿಗೆ ರಾಮನಗರದ ಉಪಚುನಾವಣೆಗೆ ಕುಮಾರಸ್ವಾಮಿ ಅವರ ಮಡದಿ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿ ಆಗಬಹುದು ಎಂಬ ಸಂದೇಶ ನೀಡಿದರು.
ಇಲ್ಲಿ ಡಿಸಿಎಂ: ಅತ್ತ ಕೊರಟಗೆರೆಯಲ್ಲಿ ಪರಮೇಶ್ವರ್ ರಾಜಕೀಯ ಆಟವೇ ಬೇರೆ
ಜಿ.ಟಿ.ದೇವೇಗೌಡ ಅವರ ಮಾತಿಗೆ, ಜೆಡಿಎಸ್ ಕಾರ್ಯಕರ್ತರು ಸಹ ಜೋರು ಕರತಾಡನ ಶಿಳ್ಳೆಯ ಮೂಲಕ ಪ್ರತಿಕ್ರಿಯೆ ನೀಡಿದರು.
ರಾಮನಗರಕ್ಕೆ ರಾಜಿನಾಮೆ ಸಲ್ಲಿಸಿದ್ದ ಎಚ್ಡಿಕೆ
ರಾಮನಗರ ಹಾಗೂ ಚನ್ನಪಟ್ಟಣ ಎರಡೂ ಕ್ಷೇತ್ರದಿಂದ ಚುನಾವಣೆಗೆ ನಿಂತಿದ್ದ ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರದಿಂದ ಗೆದ್ದಿದ್ದರು ಹಾಗಾಗಿ ರಾಮನಗರ ಕ್ಷೇತ್ರಕ್ಕೆ ರಾಜಿನಾಮೆ ಸಲ್ಲಿಸಿದರು. ಈಗ ಅಲ್ಲಿ ಉಪಚುನಾವಣೆ ನಡೆಯಲಿದ್ದು ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಅಭ್ಯರ್ಥಿ ರೇಸಿನಲ್ಲಿ ಯಾರ್ಯಾರಿದ್ದಾರ ೆ?
ರಾಮನಗರ ಜೆಡಿಎಸ್ನ ಪ್ರಬಲ ಕೋಟೆ ಅಲ್ಲಿ ಚುನಾವಣೆಗೆ ನಿಂತರೆ ಗೆಲುವು ಖಾಯಂ ಹಾಗಾಗಿ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಚುನಾವಣೆಗೆ ಸ್ಪರ್ಧಿಸಲು ಭಾರಿ ಪೈಪೋಟಿ ಇದೆ. ವಿಧಾನಸಭೆ ಟಿಕೆಟ್ ವಂಚಿತ ಶರವಣ, ರಾಜಾಜಿನಗರ ಟಿಕೆಟ್ ಕೇಳಿ ನಿರಾಸೆ ಅನುಭವಿಸಿರುವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಸೊರಬದಲ್ಲಿ ಸೋಲನುಭವಿಸಿರುವ ಕುಮಾರಸ್ವಾಮಿ ಆಪ್ತ ಮಧು ಬಂಗಾರಪ್ಪ, ಮತ್ತು ಕೆಲವು ಸ್ಥಳೀಯ ಜೆಡಿಎಸ್ ಮುಖಂಡರೂ ಸಹ ರೇಸಿನಲ್ಲಿದ್ದಾರೆ.
ಹೀಗೊಂದು ಬೇಡಿಕೆಯೂ ಇದೆ
ರಾಮನಗರದಲ್ಲಿ ಜೆಡಿಎಸ್ ಬಲ ಹೆಚ್ಚಿರುವ ಕಾರಣ ಉತ್ತಮ ರಾಜಕೀಯ ಪಟು ಎನಿಸಿಕೊಂಡಿರುವ ವೈ.ಎಸ್.ವಿ.ದತ್ತ ಅವರಿಗೆ ರಾಮನಗರದಿಂದ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ. ಅಲ್ಲದೆ ಯುವ ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಅವರಿಗಾದರೂ ಅವಕಾಶ ಕೊಡಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದಿತ್ತು. ಆದರೆ ಅಂತಿಮ ನಿರ್ಧಾರ ದೊಡ್ಡಗೌಡರಿಗೆ ಬಿಟ್ಟದ್ದಷ್ಟೆ.
ದೇವೇಗೌಡರ ನಿಲವೇನು
ಜೆಡಿಎಸ್ ಕುಟುಂಬದ ಪಕ್ಷ ಎಂಬ ಹಣೆಪಟ್ಟಿಯನ್ನು ಕಳೆದುಕೊಳ್ಳಬೇಕು ಎಂಬ ಕಾರಣದಿಂದಲೇ ವಿಧಾನಸಭೆ ಚುನಾವಣೆಯಲ್ಲಿ ಕೇಲವ ಕುಮಾರಸ್ವಾಮಿ ಹಾಗೂ ರೇವಣ್ಣ ಅವರಿಗೆ ಮಾತ್ರವೇ ಟಿಕೆಟ್ ನಿಡಿದ್ದರು. ಆದರೆ ಈಗ ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂದರೆ ದೇವೇಗೌಡರು ಒಪ್ಪದಿರುವ ಸಾಧ್ಯತೆ ಇದೆ. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಈಗಾಗಲೇ ಅವರು ಭರವಸೆ ನೀಡಿದ್ದಾರೆ ಹಾಗಾಗಿ ಈ ಬಗ್ಗೆ ದೇವೇಗೌಡರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ಎದುರಾಳಿ ಯಾರಾಗಬಹುದು?
ರಾಮನಗರದಲ್ಲಿ ಜೆಡಿಎಸ್ನಿಂದ ಯಾರೇ ಚುನಾವಣೆಗೆ ನಿಲ್ಲಲಿ ಬಿಜೆಪಿಯಿಂದ ನಾನೇ ಸ್ಪರ್ಧಿಸುತ್ತೇವೆ ಎಂದು ಚನ್ನಪಟ್ಟಣದಲ್ಲಿ ಈಗಾಗಲೇ ಕುಮಾರಸ್ವಾಮಿ ವಿರುದ್ಧ ಸೋತಿರುವ ಸಿ.ಪಿ.ಯೋಗೇಶ್ವರ್ ಅವರು ಹೇಳಿದ್ದಾರೆ. ಆ ಭಾಗದ ಬಿಜೆಪಿಯ ಒಕ್ಕಲಿಗ ನಾಯಕರೂ ಆಗಿರುವ ಯೋಗೇಶ್ವರ್ ಅವರನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಬಿಜೆಪಿ ಮತ್ತೆ ಅವರಿಗೆ ಟಿಕೆಟ್ ನೀಡಿದರೂ ಅಚ್ಚರಿ ಇಲ್ಲ. ಇನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಕಾರಣ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುವುದು ಅನುಮಾನ.