ಸಾರಾ ಮಹೇಶ್ ರಾಜೀನಾಮೆ ಹಿಂದಿನ ರಹಸ್ಯ ಬಿಚ್ಚಿಟ್ಟ ಅನಿತಾ ಕುಮಾರಸ್ವಾಮಿ
ರಾಮನಗರ, ಅಕ್ಟೋಬರ್ 18: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಮಂಜೂರಾಗಿದ್ದ ಅನುದಾನವನ್ನು ಬಿಜೆಪಿ ಸರ್ಕಾರ ಹಿಂಪಡೆದ ಕ್ರಮ ಖಂಡಿಸಿ ಸಾರಾ ಮಹೇಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಹಾಗೂ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
ಶಾಸಕಿ ಅನಿತಾ ಕುಮಾರಸ್ವಾಮಿಯವರು ರಾಮನಗರದ ಕೈಲಂಚ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕ್ ಹಮ್ಮಿಕೊಂಡಿದ್ದ ಸಾಲ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಏಕಾಂಗಿಯಾಗಿ ಬಂದು ದೇವಿಯ ಕ್ಷಮೆ ಕೇಳಿದ ಸಾರಾ ಮಹೇಶ್
ಈ ಸಂದರ್ಭ ಸಾರಾ ಮಹೇಶ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಾರಾ ಮಹೇಶ್ ಹಾಗೂ ವಿಶ್ವನಾಥ್ ನಡುವಿನ ಆಣೆ ಪ್ರಮಾಣದ ಘಟನೆಯಿಂದ ಅವರು ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳ ಅನುದಾನ ವಾಪಸ್ ಪಡೆದ ಸರ್ಕಾರದ ನಡೆಯಿಂದ ರಾಜೀನಾಮೆ ನೀಡಿದ್ದರು ಅದನ್ನು ವಾಪಸ್ ಪಡೆದಿದ್ದಾರೆ" ಎಂದರು.
"ಈ ಇಬ್ಬರೂ ಹಿರಿಯ ನಾಯಕರೇ. ಇಂಥವರು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದು ಸರಿಯಲ್ಲ. ಸಾರಾ ಮಹೇಶ್ ಯಾವುದೇ ಪ್ರತಿಕ್ರಿಯೆ ನೀಡದಂತೆ ಹೇಳಿದ್ದೇನೆ. ವಿಶ್ವನಾಥ್ ಹಿರಿಯರು, ಅವರು ಏನಾದ್ರು ಮಾತನಾಡಿಕೊಳ್ಳಲಿ, ಅದಕ್ಕೆಲ್ಲ ಪ್ರತಿಕ್ರಿಯೆ ನೀಡುವುದು ಬೇಡ ಎಂದು ತಿಳಿಸಿದ್ದೇನೆ" ಎಂದರು.
ವಿಶ್ವನಾಥ್ -ಮಹೇಶ್ ಆಣೆ ಹೈಡ್ರಾಮ; ಚಾಮುಂಡಿ ಕ್ಷೇತ್ರ ಬಳಸಿಕೊಂಡಿದ್ದಕ್ಕೆ ವಿರೋಧ
ಇನ್ನು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಾರೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಜೆಡಿಎಸ್ ಪಕ್ಷದ ಯಾವ ಶಾಸಕರೂ ರಾಜೀನಾಮೆ ನೀಡುವುದಿಲ್ಲ. ಇದೆಲ್ಲ ಕೇವಲ ವದಂತಿ. ಅಂಥ ಮನಸ್ಥಿತಿಯಲ್ಲಿ ಯಾವ ಶಾಸಕರೂ ಇಲ್ಲ" ಎಂದು ವಿಷಯವನ್ನು ತಳ್ಳಿಹಾಕಿದರು.