ರಾಮನಗರ: ಬುನಾದಿ ಅಗೆಯುವಾಗ ಭೂಮಿಯೊಳಗೆ ಪುರಾತನ ಕಟ್ಟಡ ಪತ್ತೆ
ರಾಮನಗರ, ಜು.4: ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ಯುಕೋ ಬ್ಯಾಂಕ್ ಸಮೀಪ ಹಳೆಯ ನಿವೇಶನವೊಂದರಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಬುನಾದಿ ಅಗೆಯುವಾಗ ಭೂಮಿಯೊಳಗೆ ಪುರಾತನ ಕಟ್ಟಡವೊಂದು ಪತ್ತೆಯಾಗಿದೆ.
ನವಾಜ್ ಅಹಮದ್ ಎಂಬುವವರ ಮಾಲೀಕತ್ವದ ಖಾಲಿ ನಿವೇಶನದಲ್ಲಿ ಅಂಗಡಿ ನಿರ್ಮಾಣಕ್ಕಾಗಿ ಪಾಯ ತೆಗೆಯುವಾಗ ನಿಗೂಢವಾಗಿದ್ದ ಕಟ್ಟಡ ಕಂಡುಬಂದಿದೆ. ಬಹಳ ಪುರಾತನ ಕಟ್ಟಡವಾಗಿದ್ದು ಬಹಳ ಗಟ್ಟಿಮುಟ್ಟಾಗಿದ್ದು ಒಳ ಭಾಗದಲ್ಲಿ ಗಾರೆ ಮಾಡಲಾಗಿದ್ದು, ಹಲವಾರು ವರ್ಷ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದರು ಗೋಡೆಗಳಿಗೆ ಯಾವುದೇ ಧಕ್ಕೆಯಾಗಿಲ್ಲ.
ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಅಂಬರೀಶ್
ಸ್ಥಳದ ಮಾಲೀಕ ನವಾಜ್ ಅಹಮದ್ ಮಾತನಾಡಿ, "ಇದು ತುಂಬಾ ಹಳೇ ಕಟ್ಟಡ. ಈ ಹಿಂದೆ ನಾವು ಬೇರೊಬ್ಬರ ಬಳಿ ಖರೀದಿ ಮಾಡಿದ್ದೆವು. ಆದರೆ ಈಗ ಅಂಗಡಿ ನಿರ್ಮಾಣ ಮಾಡಲು ಪಾಯ ತೆಗೆಸುವಾಗ ಸಣ್ಣ ಕಿಂಡಿ ಕಂಡು ಬಂತು ನಂತರ ಇದು ಬೆಳಕಿಗೆ ಬಂದಿದೆ. ನಮಗೆ ಇದರಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ ಎಂದಿದ್ದಾರೆ. ಸುಮಾರು 1930 ರಲ್ಲಿ ನಗರಸಭೆಯ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದರು ಎಂದು ಕೆಲವರು ನಮಗೆ ತಿಳಿಸಿದ್ದರು, ನಂತರ 1960 ರಲ್ಲಿ ಈ ಜಾಗ ಅಬ್ದುಲ್ ಅಜೀಂ ಎನ್ನುವರು ನಗರಸಭೆಯ ಹರಾಜಿನಲ್ಲಿ ತೆಗೆದುಕೊಂಡಿದ್ದರು ತದ ನಂತರ ತಮ್ಮ ಸಂಬಂಧಿಗೆ ಗಿಫ್ಟ್ ಡೀಡ್ ಮಾಡಿದ್ದರು ಈ ಜಾಗವನ್ನು ನಾವು 2009 ರಲ್ಲಿ ಖರೀದಿ ಮಾಡಿದ್ದೇವೆ ಎಂದರು.
ಟಿಪ್ಪು ಕಾಲದ ಶಸ್ತ್ರಗಾರ
ನೆಲದಾಳದಲ್ಲಿ ಪತ್ತೆಯಾಗಿರುವ ಕಟ್ಟಡ ಯಾವುದು ಎಂಬುದು ಇನ್ನೂ ನಿಖರವಾಗಿಲ್ಲದಿದ್ದರು ಕಟ್ಟಡ ರೂಪುರೇಷೆ ಗಮನಿಸಿದರೆ ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಕಾಲದ ಮದ್ದಿನ ಮನೆಯ ರೀತಿ ಗೋಚರಿಸುತ್ತಿದೆ. ಅಲ್ಲದೇ ಈ ಭಾಗದಲ್ಲಿ ಟಿಪ್ಪು ಅಳ್ವಿಕೆಯ ಕುರುಹು ಇರುವುದರಿಂದ ಬಹುತೇಕ ಟಿಪ್ಪು ಕಾಲದ ಶಸ್ತ್ರಗಾರ ಇರಬೇಕು ಎನ್ನುತ್ತಿದ್ದಾರೆ ಜನ ಸಾಮಾನ್ಯರು. ಇದು ಟಿಪ್ಪು ಕಾಲದ ನೆಲಮಾಳಿಗೆ ಎಂಬುದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದೆ. ಕೂತೂಹಲದಿಂದ ನೆಲಮಾಳ ವೀಕ್ಷಣೆ ಮಾಡುತ್ತಿರುವ ಸಾರ್ವಜನಿಕರು ನೆಲಮಾಳಿಗೆಯಲ್ಲಿ ಹೂಳು ತುಂಬಿದ್ದ ಗೋಡೆ ಹಾಗೂ ಚಾವಣಿ ಗಟ್ಟಿಮುಟ್ಟಾಗಿರುವುದನ್ನು ಕಂಡು ಜನರು ಬೆರಗಾಗಿದ್ದಾರೆ.
ರಕ್ಷಣೆ ಮಾಡಬೇಕಾದ ಅಧಿಕಾರಿಗಳು ನಾಪತ್ತೆ
ರಾಮನಗರ ಪ್ರದೇಶವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ಯಾರಿ ಕ್ಲೂಸ್ ಆಳ್ವಿಕೆ ನಡೆಸಿದ ಹಿನ್ನಲೆಯಲ್ಲಿ ಕ್ಲೂಸ್ ಪೇಟೆ ಎಂಬ ಹೆಸರು ಇತ್ತು ಅದಕ್ಕೆ ಸಾಕ್ಷಿಯಾಗಿ ಪಟ್ಟಣದ ಹೃದಯ ಭಾಗದಲ್ಲಿರುವ ಶಾಸನವು ಪುರಾತತ್ವ ಇಲಾಖೆಯ ನಿರ್ಲಕ್ಷ್ಯ ದಿಂದ ಸಂಪೂರ್ಣ ಹಾಳಾಗಿದ್ದು ಅದನ್ನು ಸಂರಕ್ಷಣೆ ಮಾಡಬೇಕಾಗಿದೆ. ಇನ್ನೂ ಇಂದು ಪತ್ತೆಯಾಗಿರುವ ಕಟ್ಟಡ ರಾಮನಗರದ ಇತಿಹಾಸವನ್ನು ಮತ್ತೆ ಕೆದಕ ಬೇಕಾದ ಅನಿವಾರ್ಯತೆ ನಿರ್ಮಾಣ ಮಾಡಿದೆ. ಪುರಾತನ ಕಟ್ಟಡದ ಮೇಲೆ ಹಲವು ಕಟ್ಟಡಗಳು ನಿರ್ಮಾಣವಾಗಿದೆ. ಇನ್ನೂ ಭೂಮಿಯ ಕೇವಲ 6-7, ಅಡಿಗಳ ಕೆಳ ಭಾಗದಲ್ಲಿ ಕಟ್ಟಡ ಪತ್ತೆಯಾಗಿರುವುದು ಇತಿಹಾಸದ ಕುರುಹುಗಳನ್ನು ಸಂರಕ್ಷಣೆ ಮಾಡುವಲ್ಲಿ ವಿಫಲವಾಗಿರುವುದನ್ನು ಸಾರುತ್ತಿದೆ.
ಇನ್ನೂ ಕಟ್ಟಡ ಇತಿಹಾಸ ಪಳೆಯುಳಿಕೆಯಾಗಿ ಪತ್ತೆಯಾಗಿರುವ ಕಟ್ಟಡ ಬಗ್ಗೆ ಜನರು ತಮಗೆ ತೋಚಿದ ಕಥೆ ಹೇಳುತ್ತಿದ್ದಾರೆ ಆದರೆ ಕಟ್ಟಡ ಯಾವುದು ಅದರ ಇತಿಹಾಸ ಎನು ಎಂದು ಜನರಿಗೆ ತಿಳಿಸಿ ಅವರ ಸಂದೇಹ ನಿವಾರಣೆ ಮಾಡಬೇಕಾದ ಪುರಾತತ್ವ ಇಲಾಖೆಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ.
Recommended Video