ರಾಮನಗರದಲ್ಲಿ ಹಣದಾಸೆಗೆ ಬಾರ್ ಮಾಲೀಕರಿಂದಲೇ ಮದ್ಯ ಕಳವು
ರಾಮನಗರ, ಏಪ್ರಿಲ್ 20: ಕೊರೊನಾ ವೈರಸ್ ಭೀತಿಗೆ ದೇಶವೇ ಲಾಕ್ ಡೌನ್ ಘೋಷಿಸಿ 27 ದಿನಗಳು ಕಳೆಯುತ್ತಿವೆ. ದಿನಬಳಕೆ ವಸ್ತುಗಳಿಂದ ಹಿಡಿದು ಎರಡು ಹೊತ್ತಿನ ಊಟಕ್ಕೂ ತೊಂದರೆ ಉಂಟಾಗಿರುವ ಸಂದರ್ಭದಲ್ಲಿ ಮದ್ಯಪ್ರಿಯರಿಗೆ ಮಾತ್ರ ನಿರಾತಂಕವಾಗಿ ಎಣ್ಣೆ ಸಿಗುತ್ತಿದೆ.
ರಾಮನಗರ ಜಿಲ್ಲೆಯಲ್ಲಿ ಬಾರ್ ಮಾಲೀಕರೇ ತಮ್ಮ ಅಂಗಡಿಗಳ ಬಾಗಿಲು ಓಪನ್ ಮಾಡಿ ಮದ್ಯವನ್ನು ಕದ್ದು, ಕಾಳ ಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಾಳಸಂತೆಯಲ್ಲಿ ಒಂದಕ್ಕೆ ಐದು ಪಟ್ಟು ದುಬಾರಿ ಬೆಲೆಗೆ ಮದ್ಯದ ಬಾಟಲ್ ಗಳು ಸೇಲ್ ಆಗಿವೆ. ಹಣದ ಆಸೆಗೆ ಬಿದ್ದ ಬಾರ್ ಮಾಲೀಕರೇ ಕಾನೂನನ್ನು ಗಾಳಿಗೆ ತೂರಿ, ತಮ್ಮಲ್ಲಿದ್ದ ಮದ್ಯ ಬಾಟಲಿಗಳನ್ನು ಮಾರಿದ್ದಾರೆ.
ಕಾಳಸಂತೆಯಲ್ಲಿ ಮದ್ಯ ಮಾರಾಟದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಚನ್ನಪಟ್ಟಣ ತಹಶೀಲ್ದಾರ್ ಸುದರ್ಶನ್, ಡಿವೈಸ್ಪಿ ಓಂ ಪ್ರಕಾಶ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ಕೆಲ ಕ್ಲಬ್ ಹಾಗೂ ಬಾರ್ ಗಳಲ್ಲಿ ಉಳಿದಿದ್ದ ಸ್ಟಾಕ್ ಪರಿಶೀಲನೆ ನಡೆಸಿದಾಗ ಬಾರ್ ಮಾಲೀಕರ ಕಳ್ಳಾಟ ಬಯಲಾಗಿದೆ.
ಲಾಕ್ಡೌನ್ ಆದ ದಿನದಂದು ಬಾರ್ ನಲ್ಲಿ ಉಳಿದಿದ್ದ ಸ್ಟಾಕ್ ಇದೀಗ ನಾಪತ್ತೆಯಾಗಿದೆ. ಚನ್ನಪಟ್ಟಣದ ಪ್ರತಿಷ್ಠಿತ ಸ್ಪೋರ್ಟ್ಸ್ ಕಲ್ಚರಲ್ ಕ್ಲಬ್, ಗರುಡಾದ್ರಿ ವೈನ್ಸ್ ಸ್ಟೋರ್ ಹಾಗೂ ಇತರ ಬಾರ್ ಗಳನ್ನ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ.
ಲಾಕ್ ಡೌನ್ ದಿನದಂದು ಅಬಕಾರಿ ಅಧಿಕಾರಿಗಳು ಬಾರ್ ಗಳಿಗೆ ಹಾಕಿದ್ದ ಸೀಲ್ ಮಾತ್ರ ಹಾಗೆ ಇದ್ದು, ಅದರಲ್ಲಿದ್ದ ಮದ್ಯ ಮಾತ್ರ ಮಾಯವಾಗಿವೆ. ಇನ್ನು ಅಧಿಕಾರಿಗಳು ರೇಡ್ ಮಾಡಿದ ಬಾರ್ ಹಾಗೂ ಕ್ಲಬ್ ಗಳಲ್ಲಿ ಸಿಸಿ ಕ್ಯಾಮರಾ ಇದ್ದರೂ ಅವು ಕಾರ್ಯನಿರ್ವಹಿಸದೇ ಇರುವುದು, ಅಬಕಾರಿ ಅಧಿಕಾರಿಗಳು ಬಾರ್ ಮಾಲೀಕರ ಮೇಲೆ ಸಂಶಯ ಬಂದಿದೆ.
ಇನ್ನು ರೇಡ್ ಮಾಡಿದ ಬಾರ್ಗಳ ಮೇಲೆ ಅಬಕಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇತ್ತ ತಹಶೀಲ್ದಾರ್ ಕೂಡ ಇಂತಹ ಬಾರ್ಗಳ ಮೇಲೆ ಕಠಿಣ ಕ್ರಮಕೈಗೊಳ್ಳಿ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಬಾರ್ಗಳನ್ನ ಓಪನ್ ಮಾಡಿಸಿ ಪರಿಶೀಲನೆ ನಡೆಸಿದರೆ ಮತ್ತಷ್ಟು ಬಾರ್ ಮಾಲೀಕರ ಬಂಡವಾಳ ಬಯಲಾಗುವುದಂತು ಸತ್ಯ.