ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ಖಂಡಿಸಿ ಪ್ರತಿಭಟನೆ
Recommended Video
ರಾಮನಗರ, ಮೇ. 29 : ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ರೈತರ ಸಾಲಮನ್ನಾ ಮಾಡಲ್ಲ. ಪೂರ್ಣವಾಗಿ ಸರ್ಕಾರ ನಡೆಸಲ್ಲ ಎಂದು ಹೇಳಿಕೆ ನೀಡಿದ್ದ ಚಿತ್ರದುರ್ಗದ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ವಿರುದ್ಧ ಇಂದು ಮಂಗಳವಾರ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು.
ರಾಮನಗರ ಜಿಲ್ಲೆ ಸಿಎಂ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ನಗರದ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ನಿಂತು ಪ್ರತಿಭಟನೆ ನಡೆಸಿದರು. ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರೂ ಭಾಗವಹಿಸುವ ಮೂಲಕ ಸ್ವಾಮೀಜಿಯ ಹೇಳಿಕೆಯನ್ನು ಖಂಡಿಸಿದರು.
ಮಠದ ಗುರುಗಳು ಸಮಾಜದಲ್ಲಿ ನೊಂದ ಜನರಿಗೆ ವಿದ್ಯೆ, ಊಟ, ವಸತಿ ಕಲ್ಪಿಸಿ ಮಾರ್ಗದರ್ಶನ ನೀಡುವ ಮೂಲಕ ದಾರಿದೀಪವಾಗಬೇಕು. ಆದರೆ ರಾಜಕೀಯದ ಬಗ್ಗೆ ಮಾತನಾಡುತ್ತ, ಒಂದು ಜಾತಿಗೆ, ಒಂದು ಪಕ್ಷಕ್ಕೆ ಸೀಮಿತವಾಗಬಾರದೆಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸ್ವಾಮೀಜಿಗಳು ಈ ರೀತಿಯ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಬಾರದೆಂದು ಎಚ್ಚರಿಸಿದರು.
ಇನ್ನು ಸ್ವಾಮೀಜಿಯ ಹೇಳಿಕೆಯನ್ನ ವಿರೋಧಿಸಿ ಸರ್ವಸಂಗ ಪರಿತ್ಯಾಗಿಗೇಕೆ ರಾಜಕೀಯ ವಿಚಾರ ಮತ್ತು ಗುರುಗಳಿಗಿದು ತರವೇ ಎಂಬ ಬರಹಗಳಿದ್ದ ಭಿತ್ತಿಪತ್ರ ಹಿಡಿದು ಚನ್ನಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.