ಬಿಹಾರ ಮಾದರಿ ಕಾನೂನು ಜಾರಿಯಾಗದಿದ್ದರೆ ಮುಂದಿನ ಪೀಳಿಗೆಗೆ ಕಷ್ಟ: ಸಚಿವ ವಿ.ಸೋಮಣ್ಣ
ರಾಮನಗರ, ಆಗಸ್ಟ್ 28: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನಡೆದ ಅಮಾನವೀಯ ಗ್ಯಾಂಗ್ ರೇಪ್ ಪ್ರಕರಣವನ್ನು ಖಂಡಿಸಿದ ವಸತಿ ಸಚಿವ ವಿ.ಸೋಮಣ್ಣ, ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಶನಿವಾರದಂದು ರಾಮನಗರ ಜಿಲ್ಲೆ ಕನಕಪುರದ ಶ್ರೀದೇಗುಲ ಮಠಕ್ಕೆ ಭೇಟಿ ನೀಡಿ ಪರಮಪೂಜ್ಯ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಹಾಗೂ ಕಿರಿಯ ಪರಮಪೂಜ್ಯ ಚನ್ನಬಸವ ಮಹಾಸ್ವಾಮಿಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡು ನಂತರ ಮಾಧ್ಯಮಗೊಂದಿಗೆ ಮಾತನಾಡಿದರು.
"ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ, ಇಂತಹ ಪ್ರಕರಣ ನಡೆಯಬಾರದಿತ್ತು. ಅತ್ಯಾಚಾರಿಗಳ ವಿರುದ್ಧ ಬಿಹಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇರುವಂತೆ ಕಠಿಣ ಕಾನೂನುಗಳನ್ನು ತರದಿದ್ದರೆ ಮುಂದಿನ ಪೀಳಿಗೆಗೆ ಕಷ್ಟವಾಗುತ್ತದೆ," ಎಂದು ವಸತಿ ಸಚಿವ ವಿ.ಸೋಮಣ್ಣ ಕಳವಳ ವ್ಯಕ್ತಪಡಿಸಿದರು.
"ಇಂತಹ ಗಂಭೀರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ವಿರೋಧ ಪಕ್ಷ ಹಾಗೂ ಇತರೆ ಪಕ್ಷಗಳು ಅಧಿಕಾರದಲ್ಲಿದ್ದ ಸಮಯದಲ್ಲಿ ಇಂತಹ ಘಟನೆಗಳು ನಡೆಯಲ್ಲವೇ ಎಂದು ಉಡಾಫೆ ಹೇಳಿಕೆ ಕೊಡುವುದಿಲ್ಲ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ," ಎಂದು ಸಚಿವ ಸೋಮಣ್ಣ ತಿಳಿಸಿದರು.
ಇನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರುಗಳು ಘಟನೆ ಮೈಸೂರು ಪೊಲೀಸರ ವೈಫಲ್ಯ ಕಾರಣ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ವಿ.ಸೋಮಣ್ಣ, "ನಾನು ಯಾವುದೇ ಇಲಾಖೆಯ ಮಾನಸಿಕ ದೃಢತೆಯನ್ನು ಪ್ರಶ್ನಿಸುವುದಿಲ್ಲ. ಸರ್ಕಾರ ಇದಕ್ಕೆ ಸೂಕ್ತ ನಿರ್ಧಾರ ತೆಗದುಕೊಳ್ಳಲಿದೆ," ಎಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ರಾಜ್ಯದಲ್ಲಿ ಇನ್ನು ಮುಂದೆ ಹೆಣ್ಣು ಮಕ್ಕಳು ಗನ್ ಹಿಡಿದುಕೊಂಡು ಓಡಾಡಬೇಕು ಎನ್ನುವ ಶಾಸಕ ಉಮೇಶ್ ಕತ್ತಿ ಹಾಗೂ ಆನಂದ್ ಸಿಂಗ್ ಹೇಳಿಕೆ ಪ್ರತಿಕ್ರಿಯಿಸಿ, "ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿ ಇರುತ್ತದೆ. ರಾಜ್ಯ ಸರ್ಕಾರ ತನ್ನ ಕರ್ತವ್ಯವನ್ನು ತಾನು ಮಾಡುತ್ತದೆ. ವೈಯುಕ್ತಿಕ ರಕ್ಷಣೆ ಮಾಡಿಕೊಳ್ಳಲು ಕಾನೂನು ಚೌಕಟ್ಟಿನಲ್ಲಿ ಅವಕಾಶ ಇದ್ದರೆ ಅದನ್ನು ಬಳಸಿಕೊಳ್ಳಲಿ," ಎಂದು ವಸತಿ ಸಚಿವ ವಿ. ಸೋಮಣ್ಣ ಸಲಹೆ ನೀಡಿದರು.
ಇನ್ನೂ ಕನಕಪುರದ ದೇಗುಲ ಮಠಕ್ಕೆ ಭೇಟಿ ನೀಡಿದ ವಸತಿ ಸಚಿವ ವಿ. ಸೋಮಣ್ಣ ತಮ್ಮ ಬಾಲ್ಯವನ್ನು ನೆನೆದರು. ಶ್ರೀಮಠದಲ್ಲಿ ತಾವು ವಿದ್ಯಾಭ್ಯಾಸ ಮಾಡಿದ್ದು, ಗಂಜಿಯನ್ನು ಕುಡಿದಿದ್ದು ಮತ್ತು ಗೆಳೆಯರೊಂದಿಗೆ ಆಟ ಆಡಿದ್ದು ಎಲ್ಲವನ್ನು ಸ್ಮರಿಸಿಕೊಂಡರು.
Recommended Video
ಸಚಿವರ ಭೇಟಿ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಶ್ರೀಪಾಲನೇತ್ರ, ತಾಲೂಕಿನ ವೀರಶೈವ ಮಹಾಸಭಾ ಅಧ್ಯಕ್ಷ ಸಾಂಬಶಿವ, ಕಾರ್ಯದರ್ಶಿ ಮುರುಡಿ ಗಣೇಶ್ ಆಡಳಿತಾಧಿಕಾರಿ ರಂಗನಾಥ್, ಶಾಲಾ- ಕಾಲೇಜಿನ ಮುಖ್ಯ ಶಿಕ್ಷಕ- ಶಿಕ್ಷಕಿಯರು, ಮಠದ ಭಕ್ತರು ಉಪಸ್ಥಿತರಿದ್ದರು.