ಅತ್ತ ಕೊರೊನಾ ಚರ್ಚೆ; ಇತ್ತ ಮೊಬೈಲ್ ನಲ್ಲೇ ಬ್ಯುಸಿಯಾದರು ರಾಮನಗರ ಎ.ಸಿ
ರಾಮನಗರ, ಜೂನ್ 19: ಅತ್ತ ರಾಮನಗರ ಜಿಲ್ಲೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿನ ಪ್ರಕರಣಗಳ ಬಗ್ಗೆ ಸಭೆ ನಡೆಯುತ್ತಿದ್ದರೆ, ಇತ್ತ ಜಿಲ್ಲೆಯ ಎಸಿ ದಾಕ್ಷಾಯಿಣಿ ಅವರು ಮೊಬೈಲ್ ನಲ್ಲಿ ತಲ್ಲೀನರಾಗಿದ್ದ ದೃಶ್ಯ ಕಂಡುಬಂದಿದೆ.
ಇಂದು ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದ್ದು, ಸಂಸದ ಡಿ.ಕೆ.ಸುರೇಶ್ ಇನ್ನಿತರ ಅಭಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ರಾಮನಗರದಲ್ಲಿ ಶ್ರೀರಾಮುಲು ಸಭೆ; ಮಾಸ್ಕ್ ಧರಿಸದ ಆರೋಗ್ಯ ಸಚಿವರು
ಜಿಲ್ಲೆಯಲ್ಲಿ ದಾಖಲಾಗಿರುವ ಕೇಸ್ ಗಳ ಬಗ್ಗೆ ಸಂಸದ ಡಿ.ಕೆ.ಸುರೇಶ್, DCM ಅಶ್ವಥ್ ನಾರಾಯಣ್ ಮಾತುಕತೆ ನಡೆಸಿದ್ದರು. ಆದರೆ ಇದಾವುದಕ್ಕೂ ಗಮನ ನೀಡದ ಉಪವಿಭಾಗಾಧಿಕಾರಿ ದಾಕ್ಷಾಯಿಣಿ ಅವರು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು. ಮೊಬೈಲ್ ನಲ್ಲಿ ಫೋಟೊ ಎಡಿಟಿಂಗ್ ಮಾಡಿಕೊಂಡು ಹಂಚಿಕೊಳ್ಳುವುದರಲ್ಲಿ ನಿರತರಾಗಿದ್ದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆಯ ವೇಳೆ ಮೊಬೈಲ್ ಬಳಕೆ ನಿಷೇಧ. ಆದರೂ ಇದಕ್ಕೆ ತಲೆಕೆಡಿಸಿಕೊಳ್ಳದೇ ದಾಕ್ಷಾಯಿಣಿ ಅವರು ಮೊಬೈಲ್ ನಲ್ಲೇ ನಿರತರಾಗಿದ್ದರು.