ಡಿ. ಕೆ. ಶಿವಕುಮಾರ್ ಪ್ರಭಾವ; 7 ಅಭ್ಯರ್ಥಿಗಳು ಅವಿರೋಧ ಆಯ್ಕೆ
ರಾಮನಗರ, ನವೆಂಬರ್ 07 : ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಅವರ ಬಿಡುಗಡೆ ಪ್ರಭಾವ ಬೀರಿದ್ದು, ಕನಕಪುರದಲ್ಲಿ 7 ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಡಿ. ಕೆ. ಶಿವಕುಮಾರ್ ತವರು ಕ್ಷೇತ್ರ ಕನಕಪುರದ ನಗರಸಭೆಗೆ ನವೆಂಬರ್ 12ರಂದು ಮತದಾನ ನಡೆಸಲು ದಿನಾಂಕ ನಿಗದಿಯಾಗಿದೆ. 31 ವಾರ್ಡ್ ಪೈಕಿ 7 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 24 ವಾರ್ಡ್ಗಳಿಗೆ ಚುನಾವಣೆ ನಡೆಯಬೇಕಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ: ಗೆದ್ದು ಬೀಗಿದ ಕಾಂಗ್ರೆಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ದಿನಾಂಕ ಪ್ರಕಟವಾಗುವಾಗ ಡಿ. ಕೆ. ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಆದ್ದರಿಂದ, ಕ್ಷೇತ್ರದ ರಾಜಕೀಯ ಮಂಕಾಗಿತ್ತು. ಈಗ ಅವರು ಬಿಡುಗಡೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಬಿರುಸುಪಡೆದುಕೊಂಡಿದೆ.
ಸ್ಥಳೀಯ ಸಂಸ್ಥೆ ಚುನಾವಣೆ : ಅತ್ತೆಗೆ ಸೋಲಿನ ರುಚಿ ತೋರಿಸಿದ ಸೊಸೆ!
ಡಿಸೆಂಬರ್ 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿದೆ. 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂತಿಮ ಕಣದಲ್ಲಿ 1587 ಅಭ್ಯರ್ಥಿಗಳಿದ್ದಾರೆ.
ಉಪ ಚುನಾವಣೆ ಟಿಕೆಟ್ ಹಂಚಿಕೆ; ಸಿದ್ದರಾಮಯ್ಯ ಮೇಲುಗೈ!
ಎಲ್ಲೆಲ್ಲಿ ಚುನಾವಣೆ?
ಮಂಗಳೂರು, ದಾವಣಗೆರೆ ಮಹಾನಗರ ಪಾಲಿಕೆ ಸೇರಿ 105 ವಾರ್ಡ್, 6 ನಗರಸಭೆ 194 ವಾರ್ಡ್, 3 ಪುರಸಭೆ 69 ವಾರ್ಡ್, 3 ಪಟ್ಟಣ ಪಂಚಾಯಿತಿ 50 ವಾರ್ಡ್ ಸೇರಿ 418 ವಾರ್ಡ್ಗಳಿಗೆ ಚುನಾವಣೆ ನಡೆಯಬೇಕು. ಇವುಗಳಲ್ಲಿ 9 ವಾರ್ಡ್ಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ. ಉಳಿದ ವಾರ್ಡ್ಗಳಲ್ಲಿ ನವೆಂಬರ್ 12ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳು
ಕನಕಪುರದಲ್ಲಿ 7, ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪುರಸಭೆ, ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಪಟ್ಟಣ ಪಂಚಾಯತ್ನ ತಲಾ ಒಂದು ವಾರ್ಡ್ನಲ್ಲಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತಗಟ್ಟೆ ಮಾಹಿತಿ
ಅವಿರೋಧ ಆಯ್ಕೆ ಹೊರತುಪಡಿಸಿ 409 ವಾರ್ಡ್ಗಳಿಗೆ ಚುನಾವಣೆ ನಡೆಯಬೇಕಿದೆ. 1,587 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,388 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 13,04,614 ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ.
ಯಾವ ಪಕ್ಷದಿಂದ ಎಷ್ಟು?
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ನ 368, ಬಿಜೆಪಿ 363, ಜೆಡಿಎಸ್ 233, ಸಿಪಿಐ 7, ಸಿಪಿಎಂ 12, ಬಿಎಸ್ಪಿ 24, ಎನ್ಸಿಸಿ 9, ಜೆಡಿಯು 5, ಎಸ್ಡಿಪಿಐ 16, ಕೆಪಿಜೆಪಿ 2, ಪಕ್ಷೇತರರು 475 ಸೇರಿ 1587 ಅಭ್ಯರ್ಥಿಗಳು ಕಣದಲ್ಲಿದ್ದಾರೆ.