ಮಾಗಡಿಯಲ್ಲಿ ವೃದ್ಧೆ ಮೇಲೆ ಚಿರತೆ ದಾಳಿ; ವಾರದಲ್ಲಿ ಇದು ಎರಡನೇ ಬಲಿ
ರಾಮನಗರ, ಮೇ 16: ಮನೆಗೆ ನುಗ್ಗಿ ಮೂರು ವರ್ಷದ ಮಗುವನ್ನು ಚಿರತೆ ಕೊಂದು ತಿಂದ ಘಟನೆ ಬೆನ್ನಲ್ಲೇ ಬಹಿರ್ದೆಸೆಗೆ ಹೋಗಿದ್ದ ವೃದ್ಧೆ ಮೇಲೆ ಚಿರತೆ ದಾಳಿ ಮಾಡಿ ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ತಾಲೂಕಿನ ಕೊಟ್ಟುಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗಂಗಮ್ಮ (68) ಚಿರತೆ ದಾಳಿಗೆ ಬಲಿಯಾದ ವೃದ್ಧೆ. ಬೆಳಗಿನ ಜಾವ ಗಂಗಮ್ಮ ಬಹಿರ್ದೆಸೆಗೆಂದು ಗ್ರಾಮದ ಹೊರವಲಯದ ಜಮೀನಿಗೆ ತೆರಳಿದ್ದ ಸಂದರ್ಭ ದಾಳಿ ಮಾಡಿದ ಚಿರತೆ ಗಂಗಮ್ಮಳನ್ನು ಕೊಂದು ಸಮೀಪದ ಪೊದೆಗೆ ಎಳೆದೊಯ್ದು ಅರೆಬರೆ ತಿಂದಿದೆ. ಚಿರತೆ ದಾಳಿಗೆ ವೃದ್ಧೆಯ ರುಂಡ ಮುಂಡ ಬೇರೆ ಬೇರೆಯಾಗಿದೆ.
ರಾಮನಗರದಲ್ಲಿ ಮಗು ತಿಂದಿದ್ದ ನರಭಕ್ಷಕ ಚಿರತೆ ಸೆರೆ
ಕಳೆದ ಶನಿವಾರ ಮಾಗಡಿ ಸಮೀಪದ ಕದರಯ್ಯನಪಾಳ್ಯದಲ್ಲಿ ಪೋಷಕರೊಂದಿಗೆ ಮಲಗಿದ್ದ ಮೂರು ವರ್ಷದ ಮಗುವನ್ನು ಚಿರತೆ ಮನೆಗೆ ನುಗ್ಗಿ ಹೊತ್ತೊಯ್ದು ತಿಂದಿದ್ದ ಪ್ರಕರಣ ಮಾಸುವ ಮುನ್ನವೇ ವೃದ್ಧೆಯನ್ನು ಚಿರತೆ ಕೊಂದು ತಿಂದಿರುವ ಘಟನೆ ಜನರಲ್ಲಿ ಆತಂಕ ಮೂಡಿಸಿದೆ.
ಎರಡು ದಿನಗಳ ಹಿಂದೆ ಕದಿರಯ್ಯನಪಾಳ್ಯ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿತ್ತು. ಚಿರತೆ ಸೆರೆಯಿಂದ ಗ್ರಾಮಸ್ಥರಲ್ಲಿ ಕೊಂಚ ಆತಂಕ ದೂರವಾಗಿತ್ತು. ಆದರೆ ಇಂದು ಚಿರತೆ ವೃದ್ಧೆಯನ್ನು ಕೊಂದು ತಿಂದಿರುವ ಘಟನೆಯಿಂದ ಮತ್ತೆ ಆತಂಕ ಹೆಚ್ಚಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಹಿಳೆಯ ಮೃತದೇಹವನ್ನು ನೆಲಮಂಗಲ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇನ್ನು ಸ್ಥಳದಲ್ಲಿ ತಾವರೆಕೆರೆ ಪೊಲೀಸ್ ಠಾಣೆ ಪೊಲೀಸರು ಬೀಡುಬಿಟ್ಟಿದ್ದಾರೆ.