ರಾಮನಗರ; ಕೋವಿಡ್ ಸೋಂಕಿತರ ಚಿಕಿತ್ಸೆಗೆ 600 ಹಾಸಿಗೆ ಮೀಸಲು
ರಾಮನಗರ, ಏಪ್ರಿಲ್ 11; " ರಾಮನಗರ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆದವರು ತಮ್ಮ ಸುತ್ತಮುತ್ತಲಿನ ಜನರಿಗೂ ಸಹ ಲಸಿಕೆ ಪಡೆದುಕೊಳ್ಳುವಂತೆ ಪ್ರೇರಣೆ ನೀಡಬೇಕು" ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್ ಕುಮಾರ್ ಮನವಿ ಮಾಡಿದರು.
ಭಾನುವಾರ ಜಿಲ್ಲಾಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕೋವಿಡ್ ಲಸಿಕಾ ಉತ್ಸವಕ್ಕೆ ಅವರು ಚಾಲನೆ ನೀಡಿದರು. "ಕೋವಿಡ್ ಲಸಿಕೆ ಪಡೆದರೆ 2-3 ದಿನ ವಿಶ್ರಾಂತಿ ಪಡೆಯಬೇಕು, ಮೈ-ಕೈ ನೋವು, ಜ್ವರ ಬರುತ್ತದೆ, ಕೆಲಸ ಹಾಗೂ ಹಬ್ಬ ಇದೆ ಎಂದು ಲಸಿಕೆ ಪಡೆಯುವ ಕೆಲಸವನ್ನು ಮುಂದೂಡಬೇಡಿ" ಎಂದರು.
ಕೋವಿಡ್ 2ನೇ ಅಲೆ; ರಾಮನಗರ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ
"ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಜಿಲ್ಲೆಯಲ್ಲಿ ಲಸಿಕೆ ಪಡೆದು ಅಡ್ಡ ಪರಿಣಾಮಗಳು ಉಂಟಾಗಿರುವ ಪ್ರಕರಣ ವರದಿಯಾಗಿಲ್ಲ. ಜನರಲ್ಲಿ ಭಯವಿದ್ದಲ್ಲಿ, ಅದರಿಂದ ಹೊರಬಂದು ಧೈರ್ಯದಿಂದ ಲಸಿಕೆ ಪಡೆದುಕೊಳ್ಳಿ" ಎಂದು ಹೇಳಿದರು.
ದೇಶದಲ್ಲಿ ಇಂದಿನಿಂದ ಲಸಿಕಾ ಉತ್ಸವ; ಅರ್ಹರಿಗೆ ಕೋವಿಡ್ ಲಸಿಕೆ
"ಜಿಲ್ಲೆಯಲ್ಲಿ ಮೊದಲು 76 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು . ಈಗ ಸಬ್ ಸೆಂಟರ್ ಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಕೆಲವು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆಯಾಗಿದೆ. ಅಂತಹ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ" ಎಂದು ವಿವರಣೆ ನೀಡಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿ ಮೋದಿ ಕರೆ
"ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಜನರು ಬಹಳ ಮುನ್ನೆಚ್ಚರಿಕೆ ವಹಿಸುತ್ತಿದ್ದರು. ಮಾಸ್ಕ್ ಧರಿಸುತ್ತಿದ್ದರು, ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದರು. ಈಗ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾಸ್ಕ್ ಧರಿಸಬೇಕು" ಎಂದು ಮನವಿ ಮಾಡಿದರು.
"ಜಿಲ್ಲೆಯಲ್ಲಿ ಮಾಸ್ಕ್ ಧರಿಸದ ಜನರಿಂದ ಪ್ರತಿದಿನ ಅಂದಾಜು 46,000 ರೂ. ದಂಡ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ಮಾಸ್ಕ್ ಧರಿಸದಿದ್ದಲ್ಲಿ, ಸರ್ಕಾರದ ನಿಯಮದಂತೆ ದಂಡ ವಿಧಿಸಲಾಗುವುದು" ಎಂದು ಎಚ್ಚರಿಸಿದರು.
Recommended Video
600 ಹಾಸಿಗೆ ಮೀಸಲು; "ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ. ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಪ್ರಾರಂಭಿಸಲು ಕ್ರಮ ವಹಿಸಲಾಗಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಈ ಹಿಂದಿನ ಒಪ್ಪಂದಂತೆ 600 ಹಾಸಿಗೆಯನ್ನು ಜಿಲ್ಲೆಯ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಕಾಯ್ದಿರಿಸಲಾಗಿದೆ" ಎಂದರು.