ಹೊತ್ತಿ ಉರಿದ ಆಯಿಲ್ ಅಂಗಡಿ; 50 ಲಕ್ಷ ರೂ ಮೌಲ್ಯದ ವಸ್ತುಗಳು ಭಸ್ಮ
ರಾಮನಗರ, ಡಿಸೆಂಬರ್ 13: ನಿನ್ನೆ ತಡ ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ಅಂಗಡಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಂಗಡಿಯಲ್ಲಿ ಸುಮಾರು 50 ಲಕ್ಷ ರೂಪಾಯಿ ಮೌಲ್ಯ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ ನಗರದ ಹನುಮಂತ ನಗರ ಬಡಾವಣೆಯಲ್ಲಿ ನಡೆದಿದೆ.
ರಾಮನಗರ ಜಾಲಮಂಗಲ ರಸ್ತೆಯಲ್ಲಿರುವ ಹನುಮಂತ ನಗರದಲ್ಲಿ ಶಿವಣ್ಣ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಇದ್ದ ಆಯಿಲ್ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ. ಇದರಿಂದ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ದೆಹಲಿ ಅಗ್ನಿ ಅವಘಡ; ಕಾರ್ಯಾಚರಣೆ ಸ್ಥಗಿತ, 43 ಬಡಪಾಯಿ ಕಾರ್ಮಿಕರು ಸಾವು
ಅಂಗಡಿಗ ಬೆಂಕಿ ತಗುಲಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಕಾರ್ಯಚರಣೆ ನಡೆಸಿ ಬೆಂಕಿಯನ್ನು ತಹಬಂದಿಗೆ ತಂದು ನಂದಿಸುವಲ್ಲಿ ಯಶ್ವಸಿಯಾದರು. ಬೆಂಕಿಗೆ ಆಹುತಿಯಾದ ಅಂಗಡಿ ಜನವಸತಿ ಪ್ರದೇಶದಲ್ಲಿದ್ದ ಕಾರಣ ಆತಂಕಕ್ಕೆ ಕಾರಣವಾಗಿತ್ತು. ಅಂಗಡಿಯಲ್ಲಿ ಪೆಟ್ರೋಲಿಯಂಗೆ ಸಂಬಂಧಿಸಿದ ವಸ್ತುಗಳು ಇದ್ದ ಕಾರಣ ಬೆಂಕಿ ಬೇಗ ಹೊತ್ತಿಕೊಂಡಿತ್ತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಬೆಂಕಿ ದುರಂತ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.