ರಾಮನಗರ ಹಾಲು ಉತ್ಪಾದಕರ ಸಂಘದಿಂದ 30 ಲಕ್ಷದ ಸಾಮಗ್ರಿ ರವಾನೆ
ರಾಮನಗರ, ಆಗಸ್ಟ್ 12: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿನ ಪ್ರವಾಹ ಪೀಡಿತರಿಗೆ ನೆರವು ನೀಡುವ ಉದ್ದೇಶದಿಂದ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಅವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರದ ಮುಖಂಡರು ಸುಮಾರು 30 ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ರವಾನಿಸಿದ್ದಾರೆ.
ಹೊದಿಕೆಗಳು, ಕುಡಿಯುವ ನೀರಿನ ಬಾಟಲಿಗಳು, ಸೀರೆಗಳು, ಆಹಾರ ಪದಾರ್ಥಗಳು ಮುಂತಾದ ಪರಿಹಾರ ಸಾಮಗ್ರಿಗಳನ್ನು ಹೊತ್ತ ನಾಲ್ಕು ಲಾರಿಗಳು ಬೆಳಗಾವಿ ಜಿಲ್ಲೆಯತ್ತ ಪ್ರಯಾಣ ಬೆಳೆಸಿದವು. ಮಾಯಗಾನಹಳ್ಳಿಯಲ್ಲಿ ವಾಹನಗಳ ಪ್ರಯಾಣಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರವಾಹದಿಂದ 6 ಸಾವಿರ ಕೋಟಿ ನಷ್ಟ, 24 ಸಾವು: ಯಡಿಯೂರಪ್ಪ
ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿನ ಜನರ ಸ್ಥಿತಿ-ಗತಿ ಘೋರವಾಗಿದೆ. ಪ್ರವಾಹಪೀಡಿತ ನಿರಾಶ್ರಿತರಿಗೆ ನೆರವಾಗುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯದರ್ಶಿಗಳು, ಸಹಕಾರ ಕ್ಷೇತ್ರದ ಸ್ನೇಹಿತರು 30 ಲಕ್ಷ ಮೊತ್ತದ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ ಎಂದರು.
ಉತ್ತರ ಕರ್ನಾಟಕದ ಸಹೋದರರು ಇಂದು ಪ್ರವಾಹ ಪೀಡಿತರಾಗಿದ್ದಾರೆ. ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ನೆರವಿನ ಹಸ್ತ ಚಾಚಿದ್ದೇವೆ ಎಂದು ಹೇಳಿದರು.
ಬಿಸ್ಕೆಟ್ ಪ್ಯಾಕೆಟ್ಗಳು, ಶುದ್ಧ ಕುಡಿಯುವ ನೀರು ಬಾಟಲುಗಳು ಹಾಗೂ ಹೊದಿಕೆಗಳು, ಸೀರೆಗಳನ್ನು 4 ವಾಹನಗಳಲ್ಲಿ ಕಳುಹಿಸಲಾಗುತ್ತಿದೆ. ಈ ಅಗತ್ಯ ವಸ್ತುಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ತೆರೆಯಲಾಗಿರುವ ನಿರಾಶ್ರಿತರ ಕೇಂದ್ರಗಳಿಗೆ ತಲುಪಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗ ಪ್ರವಾಹ ಪೀಡಿತವಾಗಿದೆ. ಲಕ್ಷಾಂತರ ಜನ ಮನೆ, ಮಠ ಕಳೆದುಕೊಂಡಿದ್ದಾರೆ. ಜನ, ಜಾನುವಾರುಗಳಿಗೆ ಸಹಕಾರ ಬೇಕಾಗಿದೆ. ಇಂತಹ ಸನ್ನಿವೇಶದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಸೇರಿದಂತೆ ಜಿಲ್ಲೆಯ ಜನತೆ ನೆರವಿನ ಹಸ್ತ ಚಾಚಬೇಕು ಎಂದು ಮನವಿ ಮಾಡಿದ್ದಾರೆ.
ವಿಶೇಷವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮನವಿ ಮಾಡಿರುವ ಅವರು, ರಾಜ್ಯದಲ್ಲಿರುವ ಸುಮಾರು 13 ಸಾವಿರ ಸಹಕಾರ ಸಂಘಗಳ ಪೈಕಿ ಪ್ರತಿ ಸಂಘದಿಂದ ತಲಾ 5 ಸಾವಿರ ನೆರವು ನೀಡಿದರೂ ಸುಮಾರು 6.50 ಕೋಟಿ ಹಣ ಸಂಗ್ರಹವಾಗುತ್ತದೆ. ಇದು ಪ್ರವಾಹ ಪೀಡಿತರ ನೆರವಿಗೆ ಸಹಕಾರಿಯಾಲಿಗದೆ ಎಂದರು.
ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದಿಂದ ಸಂಗ್ರಹವಾಗುವ ಹಣದಿಂದ ಆಹಾರ ಪದಾರ್ಥಗಳು, ಸೋಪು, ಪೇಸ್ಟ್, ಬ್ರಶ್, ಬಟ್ಟೆಗಳು, ಚಾಪೆ, ಬ್ಲಾಂಕೆಟ್, ನೀರಿನ ಬಾಟಲಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನಿಸಲಾಗುವುದು. ಸಂಕಷ್ಟದಲ್ಲಿ ಸಿಲುಕಿರುವ ಜೀವಗಳಿಗೆ ಉದಾರವಾಗಿ ನೆರವು ನೀಡಲು ಎಲ್ಲರೂ ಸ್ವಯಂ ಪ್ರೇರಿತರಾಗಿ ಸ್ಪಂದಿಸಬೇಕು ಎಂದು ಪಿ.ನಾಗರಾಜು ಮನವಿ ಮಾಡಿದರು.