ರಾಮನಗರ ಮಾವು ಮೇಳದಲ್ಲಿ ಬಗೆಬಗೆಯ ಮಾವುಗಳು!
ರಾಮನಗರ, ಮೇ.14: ಹವಾಮಾನ ವೈಪರೀತ್ಯದಿಂದಾಗಿ ಭಾರೀ ನಷ್ಟದಲ್ಲಿರುವ ಮಾವು ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವುದು ಹಾಗೂ ಗ್ರಾಹಕರಿಗೆ ನೇರವಾಗಿ ರೈತರಿಂದಲೇ ನೈಸರ್ಗಿಕ ತಾಜಾ ಹಾಗೂ ಸ್ವಾದಿಷ್ಟ ಭರಿತ ಮಾವಿನ ಹಣ್ಣುಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ತೋಟಗಾರಿಕೆ ಇಲಾಖೆಯಿಂದ ರಾಮನಗರ ಹಾಗೂ ಚನ್ನಪಟ್ಟಣ ಮೈಸೂರು ಹೆದ್ದಾರಿ ನಡುವೆ ಬರುವ ಕೆಂಗಲ್ ಹನುಮಂತರಾಯಸ್ವಾಮಿ ದೇವಸ್ಥಾನದ ಬಳಿ ಮಾವು ಮೇಳ ಆಯೋಜನೆ ಶುರುವಾಗಿದೆ.
ಮೇ.13 ರಿಂದ ಪ್ರಾರಂಭವಾಗಿರುವ ಮಾವು ಮೇಳ ಇವತ್ತು ನಾಳೆ ಭಾನುವಾರದವರೆಗೂ ನಡೆಯಲಿದೆ. ಸತತ ಮೂರು ದಿನಗಳ ಕಾಲ ಆಯೋಜನೆ ಮಾಡಿರುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ನಿನ್ನೆ ಉದ್ಘಾಟನೆ ಮಾಡಿದ್ದಾರೆ.
ಮಾವು ಮೇಳಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಮಾವಿನ ಹಣ್ಣುಗಳ ಬಗ್ಗೆ ಮಾರಾಟಗಾರರಿಂದ ಮಾಹಿತಿಯನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಇಕ್ರಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಹಾಗೂ ತೋಟಗಾರಿಕೆ ಉಪ ನಿರ್ದೇಶಕ ಮುನೇಗೌಡ ಹಾಜರಿದ್ದರು.
50 ಕ್ಕೂ ಹೆಚ್ಚು ಬಗೆ ಬಗೆಯ ಮಾವು ತಳಿಗಳು ಮೇಳದಲ್ಲಿ ಪ್ರದರ್ಶನ..!
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಡೆಯುತ್ತಿರುವ ಈ ಮೇಳದಲ್ಲಿ 27 ಮಳಿಗೆಗಳನ್ನು ತೆರೆಯಲಾಗಿದೆ. ಮೇಳದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿವಿಧ ಮಾವು ತಳಿಗಳನ್ನು ಪ್ರದರ್ಶಿಸಲಾಗುತ್ತಿದೆ. ಅಲ್ಲದೇ ನಿಗದಿತ ದರದಲ್ಲಿ ರೈತರಿಂದ ನೇರವಾಗಿ ಕಾರ್ಬೈಡ್ ಮುಕ್ತ ಹಾಗೂ ನೈಸರ್ಗಿಕ ಮಾವಿನ ಹಣ್ಣುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಾರಿಯ ಮಾವು ಮೇಳದಲ್ಲಿ ಬಾದಾಮಿ, ರಸಪುರಿ, ಸೆಂಧೂರ, ಮಲಗೋವ, ಮಲ್ಲಿಕಾ, ನೀಲಂ, ಮಲಗೋವ, ತೋತಪುರಿ ಭ್ಯೆಗನಪಲ್ಲಿ, ಬೆನಿಷಾ, ಕೇಸರ್, ಐಶ್ವರ್ಯ, ಸಕ್ಕರ ಬುತ್ತಿ, ಹಾಗೂ ಸಕ್ಕರೆ ಗೂಟ್ಲಾ, ಸೀಬಾ ಸೇರಿದಂತೆ 50 ಕ್ಕೂ ಹೆಚ್ಚು ತಳಿಗಳು ಮೇಳದಲ್ಲಿ ಪ್ರದರ್ಶನದಲ್ಲಿದ್ದವು.
ಕರ್ನಾಟಕದಲ್ಲಿ ಕೋಲಾರದ ಬಳಿಕ ರಾಮನಗರ ಮಾವು ಬೆಳೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಲ್ಲದೇ ಇಲ್ಲಿನ ಬಾದಾಮಿ ಮಾವು ಹೆಸರುವಾಸಿ. ಇಷ್ಟೆಲ್ಲಾ ವೈಶಿಷ್ಟ್ಯತೆಯಿಂದ ಕೂಡಿದ ವಿವಿಧ ತಳಿಯ ಮಾವು ಒಂದೇ ಸೂರಿನಡಿ, ಅದು ನೈಸರ್ಗಿಕ ರೀತಿಯಲ್ಲಿ ಮಾಗಿಸಿದ ಹಣ್ಣುಗಳು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿರುವುದರಿಂದ ಮಾವು ಬೆಳೆಗಾರರು ಮತ್ತು ಪ್ರವಾಸಿಗರು ಕೂಡಾ ಆಕರ್ಷಿತರಾಗಿದ್ದರಲ್ಲದೇ ಮೇಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಳದಲ್ಲಿರುವ ಪ್ರತೀ ಮಾವಿನ ಹಣ್ಣಿನ (ಪ್ರತೀ ಕೆಜಿಗಳಲ್ಲಿ) ದರಗಳ ವಿವರ
ಬಾದಾಮಿ 120 ರೂಪಾಯಿ, ರಸಪುರಿ 90, ಸೆಂದೂರ - 63 , ಮಲ್ಲಿಕಾ 110, ಭೈಗನಪಲ್ಲಿ 80, ಮಲಗೋವಾ 160, ತೋತಾಪುರಿ 30, ಈ ರೀತಿಯ ಬಗೆ ಬಗೆಯಲ್ಲಿ ಮೇಳದಲ್ಲಿ ಪ್ರದರ್ಶಿಸಲಾಗಿರುವ ಒಟ್ಟು 27 ಮಾವಿನ ಹಣ್ಣಿನ ದರವನ್ನ ತೋಟಗಾರಿಕೆ ಇಲಾಖೆ ದರ ನಿಗದಿಪಡಿಸಿದೆ.
ಕನಪುರ ರವಿಶಂಕರ ಗುರೂಜಿ ಆಶ್ರಮದ ಬಳಿ ಮತ್ತೊಂದು ಮೇಲೆ..!
ಈ ಭಾರಿ ಮಾವು ಬೆಳೆಗಾರರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಎರಡು ಕಡೆ ಮಾವು ಮೇಳ ಆಯೋಜನೆ ಮಾಡಿದ್ದು. ಮತ್ತೊಂದು ಮೇಳ ಕನಕಪುರ ರಸ್ತೆಯಲ್ಲಿರುವ ರವಿಶಂಕರ್ ಗುರೂಜಿ ಆಶ್ರಮದ ಮುಂಭಾಗವೂ ಮಾವು ಮೇಳ ಪ್ರಾರಂಭವಾಗಿದೆ ಎಂದು ತೋಟಗಾರಿಕ ಅಧಿಕಾರಿಗಳು ತಿಳಿಸದರು. ಮಾವು ಮೇಳದಲ್ಲಿ ಮಾವು ಮಾರಾಟ ಮೇ 15 ರವರೆಗೆ ನಡೆಯಲಿದೆ.
ಇವತ್ತು ಮತ್ತೆ ನಾಳೆ ಗ್ರಾಹಕರಿಂದ ಪ್ರತಿಕ್ರಿಯೆ ನೋಡಿಕೊಂಡು ಮೇಳದ ಅವಧಿ ವಿಸ್ತರಿಸಲಾಗುವುದು. ಅಲ್ಲದೇ ಮೇಳದಲ್ಲಿ ಮಾವಿನ ದರವನ್ನು ಹಾಪ್ ಕಾಮ್ಸ್ ಮಾದರಿಯಲ್ಲಿ ನಿಗದಿ ಮಾಡಿದ್ದು , ಹಾಫ್ ಕಾಮ್ಸ್ ಬೆಲೆಗಿಂತಲೂ 10% ಮಾವಿನ ಹಣ್ಣಿನ ದರ ಕಡಿಮೆಯಿದೆ ಇದರಿಂದ ಗ್ರಾಹಕರಿಗೆ ಅನುಕೂಲವಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮುನೇಗೌಡ ತಿಳಿಸಿದರು.