ರಾಮನಗರ ಜಿಲ್ಲೆಯಲ್ಲಿ ಮೇ 13ರಿಂದ ಮೂರು ದಿನ ಮಾವು ಮೇಳ..!
ರಾಮನಗರ, ಮೇ 12: ನೈಸರ್ಗಿಕ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸಲು ಹಾಗೂ ಮಾವು ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಜಿಲ್ಲೆಯಲ್ಲಿ ಮೂರು ದಿನದ 'ಮಾವು ಪ್ರದರ್ಶನ ಮತ್ತು ಮಾರಾಟ ಮೇಳʼ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಇಕ್ರಮ್ ಅವರು ತಿಳಿಸಿದರು.
ಜಿಲ್ಲಾ ಪಂಚಾಯತಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ʼ'ರಾಮನಗರ ಮಾವು ಮೇಳ 2022'ʼದ ಬಗ್ಗೆ ಇಂದು ಇಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,
ಮೇಳದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿವಿಧ ಮಾವು ತಳಿಗಳ ಪ್ರದರ್ಶನ ಮತ್ತು ನಿಗದಿತ ದರದಲ್ಲಿ ರೈತರಿಂದ ನೇರವಾಗಿ ಖರೀದಿದಾರರಿಗೆ ಕಾರ್ಬನ್ ಮುಕ್ತ ಹಾಗೂ ನೈಸರ್ಗಿಕ ಮಾವಿನಹಣ್ಣುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಇಕ್ರಾಂ ಮಾಹಿತಿ ನೀಡಿದರು.
ಈ ಬಾರಿಯ ಮೇಳದಲ್ಲಿ 25 ರಿಂದ 30 ಮಳಿಗೆಗಳನ್ನು ತೆರೆಯಲಾಗಿದೆ. ಬೆಳೆಗಾರರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಹಣ್ಣುಗಳನ್ನು ಒದಗಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಇಕ್ರಂ ಅವರು ನುಡಿದರು.
ಜಿಲ್ಲೆಯಲ್ಲಿ ಮಾವು, ತೆಂಗು, ಹೈನುಗಾರಿಕೆ, ರೇಷ್ಮೆ ಪ್ರಮುಖವಾಗಿವೆ. ಅದರಲ್ಲಿಯೂ ಮಾವು ಬೆಳೆಯನ್ನು ಸುಮಾರು 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅಂದಾಜು 28 ಸಾವಿರ ರೈತ ಕುಟುಂಬವು ಮಾವು ಬೆಳೆ ಮೇಲೆ ಅವಲಂಬಿತರಾಗಿದ್ದಾರೆ ಎಂದು ಸಿಇಓ ಅವರು ತಿಳಿಸಿದರು.
ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯ ಬಳಿ ಈ ಬಾರಿ ಮಾವು ಮೇಳ..!
ಪ್ರತಿ ಬಾರಿ ಮಾವು ಮೇಳವನ್ನು ಜಾನಪದ ಕಾಶಿ ಜಾನಪದ ಲೋಕ ಒಂದೆ ಕಡೆ ಆಯೋಜನೆ ಮಾಡುತ್ತಿದ್ದ ಜಿಲ್ಲಾಡಳಿತ ಈ ಬಾರಿ ಜಿಲ್ಲೆಯ ಎರಡು ಭಾಗಗಳಲ್ಲಿ ಮಾವು ಮೇಳ ಮಾಡಲು ಮುಂದಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದ ಬಳಿ ಆಯೋಜನೆ ಮಾಡಿದೆ. ಇದೇ ಪ್ರಥಮ ಬಾರಿಗೆ ಕನಕಪುರ ಮಾರ್ಗದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಬೆಂಗಳೂರಿಗೆ ಅಂಟಿಕೊಂಡಿರುವ ರವಿಶಂಕರ್ ಗುರೂಜಿ ಆಶ್ರಮ ಬಳಿ ಕೂಡ ಮಾವು ಮೇಳ ಆಯೋಜನೆ ಮಾಡಿದೆ.