ಬಿಡದಿಯಲ್ಲಿ "ನನ್ನ ಮನೆ" ಯೋಜನೆಯಡಿ 264 ಮನೆಗಳ ವಿತರಣೆ; ವಿ.ಸೋಮಣ್ಣ
ರಾಮನಗರ, ನವೆಂಬರ್ 21: ನಗರ ಪ್ರದೇಶದಲ್ಲಿ ನಿವೇಶನ ಹಾಗೂ ವಸತಿರಹಿತ ಅಸಂಘಟಿತ ಕಾರ್ಮಿಕ ವಲಯದಲ್ಲಿರುವವರಿಗೆ ಶಾಶ್ವತ ನೆಲೆ ಒದಗಿಸುವ ಉದ್ದೇಶದಿಂದ ಕೈಗೆಟುಕುವ ದರದಲ್ಲಿ ವಸತಿ ಕಲ್ಪಿಸಲು "ನನ್ನ ಮನೆ" ಎಂಬ ಯೋಜನೆ ಜಾರಿಗೆ ತರಲಾಗುತ್ತಿದೆ. ಬಿಡದಿ ಗ್ರಾಮ ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ 264 ಮನೆಗಳ ಕಾಮಗಾರಿ ಪೂರ್ಣಗೊಳಿಸಿ ಜುಲೈ 2021ರಲ್ಲಿ ವಿತರಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.
ರಾಮನಗರದ ಬಿಡದಿಯಲ್ಲಿ ಶನಿವಾರ ಮನೆಗಳ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, "ತಾಳಕುಪ್ಪೆ ಗ್ರಾಮ ವ್ಯಾಪ್ತಿಯಲ್ಲಿ ನನ್ನ ಮನೆ ಯೋಜನೆಯಡಿ ನಿರ್ಮಿಸಲಾಗುತ್ತಿರುವ 264 ಮನೆಗಳ ಕಾಮಗಾರಿ 2020-21ನೇ ಸಾಲಿನಲ್ಲಿ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿತ್ತು. ಪ್ರಸ್ತುತ ಈ ಯೋಜನೆಯನ್ನು ಮತ್ತೆ ಕೈಗೊಳ್ಳಲಾಗಿದೆ. ಇದರೊಂದಿಗೆ ಹೊಸದಾಗಿ 492 ಮನೆ ಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗಿದೆ" ಎಂದರು.
ಮನೆ ಕಳೆದುಕೊಂಡ ಸಂತ್ರಸ್ತರಿಗೆ ಹಣ ಬಿಡುಗಡೆ; ಸಚಿವ ಸೋಮಣ್ಣ
ಮನೆಗಳಿಗೆ 11 ಲಕ್ಷ ರೂ ನಿಗದಿಪಡಿಸಲಾಗಿದ್ದು, ಮೂಲ ಸೌಕರ್ಯಗಳಾದ ವಿದ್ಯುತ್, ರಸ್ತೆ, ಡಾಂಬರು, ಚರಂಡಿ ವ್ಯವಸ್ಥೆ, ಬೋರ್ ವೆಲ್ ನೀರಿನ ಸರಬರಾಜು, ಒಳಚರಂಡಿ ಸೇವೆ ಒದಗಿಸಲಾಗುವುದು. ಇಲ್ಲಿ ವಾಸಿಸುವವರಿಗೆ ಅನುಕೂಲವಾಗುವಂತೆ ಅಂಗನವಾಡಿ, ಹಾಪ್ ಕಾಮ್ಸ್, ಆರೋಗ್ಯ ಕೇಂದ್ರ ಹಾಗೂ ನ್ಯಾಯಬೆಲೆ ಅಂಗಡಿಯನ್ನು ಸಹ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದ ನಗರ ಪ್ರದೇಶದಲ್ಲಿ 1785 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿ ವಾಸಿಸುತ್ತಿರುವ ಅರ್ಹರನ್ನು ಗುರುತಿಸಿ ಅದೇ ಸ್ಥಳದಲ್ಲಿ ನಿವೇಶನ ನೀಡಲು ಯೋಜಿಸಲಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 4600 ಮನೆಗಳ ನಿರ್ಮಾಣ ನಡೆಯುತ್ತಿದ್ದು, ಇದಕ್ಕೆ ಬೇಕಿರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಹಾಗೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ಕೋವಿಡ್-19 ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗೃತಾ ಸುರಕ್ಷತಾ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಶ್ರವ್ಯ ಮತ್ತು ದೃಶ್ಯ ಮಾಧ್ಯಮದ ಮೂಲಕ ಬೃಹತ್ ಎಲ್.ಇ.ಡಿ. ಪರದೆ ಹೊಂದಿರುವ ಮೊಬೈಲ್ ವಾಹನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್, ಶಾಸಕ ಎ. ಮಂಜುನಾಥ್, ರಾಜೀವ್ ಗಾಂದಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.