2023ರ ಚುನಾವಣೆ; ನಿಖಿಲ್ ಕುಮಾರಸ್ವಾಮಿಗೆ ಮಹತ್ವದ ಹೊಣೆ?
ರಾಮನಗರ, ಮಾರ್ಚ್ 28; 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ನಮ್ಮದೇ ಎನ್ನುತ್ತಿರುವ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸುವುದು ಮತ್ತು ಜಿಲ್ಲೆಯ ಚುನಾವಣಾ ಉಸ್ತುವಾರಿಯನ್ನು ಅವರ ಹೆಗಲಿಗೆ ಹಾಕುವುದು ಬಹುತೇಕ ಖಚಿತವಾಗಿದೆ.
ರಾಜ್ಯದಲ್ಲಿ ಆಗಿರುವ ಮತ್ತು ಆಗುತ್ತಿರುವ ವಿದ್ಯಮಾನಗಳಿಗೆ ಜೆಡಿಎಸ್ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ತೊಳಲಾಡುತ್ತಿದೆ. ಜೊತೆಗೆ ಯಾವುದೇ ಒಂದು ನಿಲುವಿಗೆ ಬರಲಾಗದೆ ಮೌನಕ್ಕೆ ಶರಣಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಎಚ್. ಡಿ. ಕುಮಾರಸ್ವಾಮಿ ಜಾಣ ನಡೆ ತೋರಿದ್ದಾರೆ. ಆದರೆ ಈಗ ರಾಜ್ಯದಲ್ಲಿ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ.
ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಯಾವ ಪಕ್ಷಗಳು ಯಾವ ರೀತಿಯ ರಾಜಕಾರಣ ಮಾಡುತ್ತಿವೆ ಎಂಬುದು ಜನರಿಗೂ ಅರ್ಥವಾಗುತ್ತಿವೆ. ಈಗ ರಾಜ್ಯದಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಬಗೆ ಹರಿಸುವುದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಪಕ್ಷಗಳು ಅದರ ಲಾಭ ಪಡೆಯಲು ಹವಣಿಸುತ್ತಿವೆ ಎನ್ನುವುದಂತು ನಿಜ. ಕೆಲವರು ಪ್ರತಿಷ್ಟೆಗೆ ಬಿದ್ದಿರುವುದರಿಂದ ಅವರು ಸೋಲು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸದ್ಯಕ್ಕೆ ಈಗಿರುವ ಕೆಲವೊಂದು ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ.
ಹಿಂದುತ್ವವನ್ನೇ ಮೂಲಮಂತ್ರವಾಗಿ ಹುಟ್ಟಿಕೊಂಡಿರುವ ಬಿಜೆಪಿ ಅದನ್ನು ಬಿಟ್ಟು ಹೊರಬಾರದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಾಚೆಗೆ ಕಾಂಗ್ರೆಸ್ ಜಾತ್ಯಾತೀತ ನಿಲುವಿನ ಪಕ್ಷ ಎಂದು ಹೇಳಿಕೊಳ್ಳುತ್ತಾ ಬಂದಿದ್ದರೂ ಎಲ್ಲೋ ಒಂದು ಕಡೆ ಎಲ್ಲವನ್ನು ಸಮಾನಾಗಿ ನೋಡುವ ಮತ್ತು ಖಡಕ್ ನಿರ್ಧಾರ ಕೈಗೊಳ್ಳುವಲ್ಲಿ ಅದು ಸೋತಿದೆ ಎನ್ನುವುದು ಇತ್ತೀಚೆಗಿನ ಬೆಳವಣಿಗೆಗಳಿಂದ ಗೊತ್ತಾಗಿದೆ. ಕಾಂಗ್ರೆಸ್ನ ಪ್ರತಿಯೊಂದು ಧೋರಣೆಯನ್ನು ಹಿಂದೂ ವಿರೋಧಿ ಧೋರಣೆಯನ್ನಾಗಿ ಬಿಂಬಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಕಾಂಗ್ರೆಸ್ ಮೌನ ಯಾರಿಗೆ ಲಾಭ?
ಸದ್ಯ ಕಾಂಗ್ರೆಸ್ ಏನೇ ಮಾಡಿದರೂ ಅದರ ಪರಿಣಾಮ ಬೇರೆಯದ್ದೇ ರೀತಿಯಲ್ಲಿ ಆಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯ ಎಲ್ಲಿ ಜೆಡಿಎಸ್ ಕಡೆಗೆ ಒಲವು ತೋರಿ ಬಿಡುತ್ತದೆಯೋ ಎಂಬ ಭಯ ಕಾಂಗ್ರೆಸ್ ಅನ್ನು ಕಾಡುತ್ತಿದೆ. ಹಾಗಾಗಿ ಜೆಡಿಎಸ್ ಅಲ್ಪಸಂಖ್ಯಾತರ ವಿಚಾರದ ಬಗ್ಗೆ ಮಾತನಾಡಿದಾಗಲೆಲ್ಲ. ಅದನ್ನು ಕಾಂಗ್ರೆಸ್ ಅದರಲ್ಲೂ ಸಿದ್ದರಾಮಯ್ಯ ಅವರು ವಿರೋಧಿಸುತ್ತಾ ಬಂದಿದ್ದಾರೆ. ಜೊತೆಗೆ ವಸ್ತುನಿಷ್ಠತೆಯನ್ನು ಪ್ರತಿಪಾದಿಸುವಲ್ಲಿ ಸೋತಿದ್ದಾರೆ. ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾ ಒಂದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಇದರ ಲಾಭ ಬಿಜೆಪಿಗೆ ಮಾತ್ರವಲ್ಲ ಜೆಡಿಎಸ್ಗೆ ಆಗುವ ಲಕ್ಷಣಗಳು ಕಂಡು ಬಂದಿದೆ. ರಾಮನಗರದಲ್ಲಿ ಕೆಲ ತಿಂಗಳ ಹಿಂದೆ ಪಾದಯಾತ್ರೆ ವೇಳೆ ಕಾಂಗ್ರೆಸ್ ಅಬ್ಬರ ನೋಡಿದ ಜನ ಜೆಡಿಎಸ್ಗೆ ಸಂಕಷ್ಟ ಶುರುವಾಯಿತು ಎಂಬ ಮಾತುಗಳನ್ನಾಡಿದ್ದರು. ಆದರೆ ಎಚ್. ಡಿ. ಕುಮಾರಸ್ವಾಮಿ ಮೇಲಿಂದ ಮೇಲೆ ಟೀಕೆ ಮಾಡುತ್ತಾ ,ಮೇಕೆದಾಟು ಯೋಜನೆ ಕುರಿತ ಪಾದಯಾತ್ರೆ ರಾಜಕೀಯ ಪ್ರೇರಿತ ಎಂಬುದನ್ನು ನಿರೂಪಿಸುವಲ್ಲಿ ಯಶಸ್ವಿಯಾದರು.
ರಾಮನಗರದಲ್ಲಿ ಜೆಡಿಎಸ್ ಪ್ರಾಬಲ್ಯ
ಮುಂದಿನ ಚುನಾವಣೆ ವೇಳೆಗೆ ಮೇಕೆದಾಟು ಯೋಜನೆ ಕುರಿತ ಪಾದಯಾತ್ರೆ ಕಾಂಗ್ರೆಸ್ಗೆ ರಾಜಕೀಯವಾಗಿ ಲಾಭ ತಂದುಕೊಡುವುದು ಕಷ್ಟವೇ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಮನಗರ ರಾಜಕೀಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದೇ ಈಗಿರುವ ಪ್ರಶ್ನೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇರುವ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳು ಜೆಡಿಎಸ್ನ ಹಿಡಿತದಲ್ಲಿದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜೆಡಿಎಸ್ನ ಭದ್ರಕೋಟೆಯೂ ಹೌದು. ಕನಕಪುರದಲ್ಲಿ ಡಿ. ಕೆ. ಶಿವಕುಮಾರ್ ಪ್ರಾಬಲ್ಯವಿರುವುದರಿಂದ ಅಲ್ಲಿ ಜೆಡಿಎಸ್ ಗೆಲುವು ಸಾಧಿಸುವುದು ಕಷ್ಟವಾಗಬಹುದು ಆದರೆ ಬದಲಾದ ಬೆಳವಣಿಗೆಗಳು ಜೆಡಿಎಸ್ಗೆ ಲಾಭತಂದರೂ ಅಚ್ಚರಿಯಿಲ್ಲ.
ಇನ್ನು ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಕಷ್ಟವಾಗಲಾರದು. ಆದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಡುವ ಎಲ್ಲ ಸಾಧ್ಯತೆಯಿದೆ. ಅಲ್ಲಿ ಕುಮಾರಸ್ವಾಮಿ ಅವರಿಗೆ ಟಕ್ಕರ್ ಕೊಡಲು ಸಿ. ಪಿ. ಯೋಗೇಶ್ವರ್ ಈಗಾಗಲೇ ತಂತ್ರ ಆರಂಭಿಸಿದ್ದಾರೆ. ಆದರೂ ಜೆಡಿಎಸ್ಗೆ ತಮ್ಮದೇ ಪ್ರಾಬಲ್ಯವಿರುವುದರಿಂದ ಗೆಲುವಿನ ವಿಶ್ವಾಸವಿದೆ.
ಕಾರ್ಯಕರ್ತರ ಸಭೆ ನಡೆಸಿದ ನಿಖಿಲ್
ರಾಮನಗರದಲ್ಲಿ ಜೆಡಿಎಸ್ನ ಪರವಾದ ಅಲೆಯಿರುವುದರಿಂದ ಮತ್ತು ಪಕ್ಷ ಸಂಘಟನೆ ಅನುಭವ ಬರಲಿ ಎಂಬ ಉದ್ದೇಶದಿಂದ ಕುಮಾರಸ್ವಾಮಿ ಚುನಾವಣಾ ಉಸ್ತುವಾರಿಯ ಹೊಣೆಯನ್ನು ಪುತ್ರನ ಹೆಗಲಿಗೆ ಹಾಕುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಅಡ್ಡಾಡುತ್ತಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅಲ್ಲಿ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಆ ಮೂಲಕ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಜವಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವುದರೊಂದಿಗೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲಿರುವ ಅವರು ಪಕ್ಷದ ಗೆಲುವಿಗೆ ಬಹು ಮುಖ್ಯವಾಗಿ ಬೇಕಾದ ಸಂಘಟನೆಗೆ ಒತ್ತು ನೀಡುತ್ತಿರುವುದು ಕಾಣಿಸುತ್ತಿದೆ.
Recommended Video
ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಕಾರ್ಯಕರ್ತರ ಸಭೆಯೊಂದರಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಿದೆ. ಹೀಗಾಗಿ ನಾನು ಈ ಭಾಗದಲ್ಲಿ ಪಕ್ಷದ ನೇತೃತ್ವ ವಹಿಸಿಕೊಳ್ಳಲು ಆಗಮಿಸಿದ್ದಾಗಿ ಹೇಳಿದರಲ್ಲದೆ, ನಮ್ಮ ತಂದೆ-ತಾಯಿಯರಾದ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿಗೆ ನೀವೆಲ್ಲರೂ ರಾಜಕೀಯ ಶಕ್ತಿ ನೀಡಿ ಬೆಳೆಸಿದ್ದೀರಿ ಅವರಂತೆಯೇ ನನ್ನನ್ನೂ ಆಶೀರ್ವದಿಸಿ" ಎಂದು ಮನವಿ ಮಾಡಿದರು.
ಇದೆಲ್ಲವನ್ನು ಗಮನಿಸಿದರೆ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಮಹತ್ವದ ಜವಬ್ದಾರಿಯನ್ನು ವಹಿಸಿಕೊಂಡು ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಪಣತೊಟ್ಟಿರುವುದು ಎದ್ದು ಕಾಣುತ್ತದೆ.