ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ; ಕನಕಪುರದಲ್ಲಿ ಕಿಡಿಗೇಡಿಗಳ ಕೃತ್ಯ
ಕನಕಪುರ, ಡಿಸೆಂಬರ್ 13: ಕಿಡಿಗೇಡಿಗಳ ದುಷ್ಕೃತ್ಯಕ್ಕೆ 15 ಲಕ್ಷ ರೂಪಾಯಿ ಮೌಲ್ಯದ ಬಾಳೆ ಮತ್ತು ಮಾವಿನ ಗಿಡಗಳು ನಾಶವಾಗಿರುವ ಘಟನೆ ಇಂದು ತಾಲ್ಲೂಕಿನ ಸಾತನೂರು ಹೋಬಳಿಯ ಗೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗೇರಹಳ್ಳಿ ಗ್ರಾಮದ ರೈತ ಚಿಕ್ಕಪುಟ್ಟೇಗೌಡ ಎಂಬುವರಿಗೆ ಸೇರಿದ 6 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಮತ್ತು ಮಾವಿನ ಗಿಡಗಳನ್ನು ಕಿಡಿಗೇಡಿಗಳು ಕಡಿದು ನಾಶಮಾಡಿದ್ದಾರೆ. ಕೈಗೆ ಬಂದ ಫಸಲು ಬಾಯಿಗೆ ಬರುವಷ್ಟರಲ್ಲಿ ಎಲ್ಲವೂ ಮಣ್ಣು ಪಾಲಾಗಿದೆ.
ಈರುಳ್ಳಿ ಬೆಳೆದವರಿಗೆ ನಿಜಕ್ಕೂ ಲಾಭ ಸಿಗುತ್ತಿದೆಯೇ? ರೈತರ ಅಳಲು ಕೇಳಿ
ಜಮೀನಿನಲ್ಲಿ 1100 ಬಾಳೆ ಗಿಡ ಮತ್ತು 300 ಮಾವಿನ ಗಿಡಗಳು ನೆಲಸಮವಾಗಿವೆ. ಬಾಳೆ ಗೊನೆ ಕಟಾವಿಗೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಟಾವು ಮಾಡಬೇಕಿತ್ತು. ಬಾಳೆ ಫಸಲಿನಿಂದ ಸುಮಾರು 15 ಲಕ್ಷ ರೂಪಾಯಿ ಲಾಭದ ನಿರೀಕ್ಷೆ ಇತ್ತು. 300 ಮಾವಿನ ಗಿಡಗಳನ್ನು ಮೂರು ವರ್ಷಗಳಿಂದ ಜತನದಿಂದ ಬೆಳೆಸಿದ್ದು, 5 ಲಕ್ಷ ರೂಪಾಯಿ ನಷ್ಟವಾಗಿದೆ.
ಜಮೀನು ಗ್ರಾಮದಿಂದ 3 ಕಿ.ಮೀ ದೂರವಿದ್ದ ಕಾರಣ ಕಿಡಿಗೇಡಿಗಳ ಕೃತ್ಯ ಯಾರಿಗೂ ಗಮನಕ್ಕೂ ಬಂದಿಲ್ಲ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡು ಸ್ಥಳಕ್ಕೆ ಶ್ವಾನದಳ ಕರೆಸಿ ತಪಾಸಣೆ ನಡೆಸಿದ್ದಾರೆ.
ಬೆಳೆ ಕಳೆದುಕೊಂಡ ರೈತ ಚಿಕ್ಕಪುಟ್ಟೇಗೌಡ ದೂರಿನಲ್ಲಿ ಗ್ರಾಮದ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆದಿದೆ.