ರಾಮನಗರದಲ್ಲಿ ಕರ್ತವ್ಯಕ್ಕೆ ಗೈರಾದ 15 ಸರ್ಕಾರಿ ವೈದ್ಯರು
ರಾಮನಗರ, ಮಾರ್ಚ್ 29: ರಾಜ್ಯದಲ್ಲಿ ಕೊರೊನಾ ವೈರಸ್ ಮಹಾಮಾರಿಯು ತಾಂಡವವಾಡುತ್ತಿರುವ ಸಮಯದಲ್ಲೇ ಕರ್ತವ್ಯಕ್ಕೆ ಬಾರದೇ ರಾಮನಗರ ಜಿಲ್ಲಾಸ್ಪತ್ರೆಯ ವೈದ್ಯರು ಅಸಡ್ಡೆ ತೋರಿದ್ದಾರೆ.
ಜಿಲ್ಲಾಸ್ಪತ್ರೆಯ ಒಟ್ಟು 26 ಜನ ವೈದ್ಯರಲ್ಲಿ 8 ಜನ ವೈದ್ಯರು ಮಾತ್ರ ಹಾಜರಾಗಿದ್ದಾರೆ. ಅದರಲ್ಲೂ ಕೆಲ ವೈದ್ಯರು ಸಹಿ ಹಾಕಿ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ.
ರಾತ್ರಿ ಡ್ಯೂಟಿಗೆ ಮೂವರು ವೈದ್ಯರ ನಿಯೋಜನೆ ಮಾಡಲಾಗಿದೆ. ಆಸ್ಪತ್ರೆಗೆ ವೈದ್ಯರು ಬಾರದೇ ಇದ್ದರೂ ಜಿಲ್ಲಾಸ್ಪತ್ರೆ ಸರ್ಜನ್ ಗೆ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.
ಮಾಧ್ಯಮದವರು ಹೋಗಿ ಪರಿಶೀಲನೆ ನಡೆಸಿದ ನಂತರ ರಾಮನಗರ ಜಿಲ್ಲಾಸ್ಪತ್ರೆ ಪ್ರಭಾರ ಸರ್ಜನ್ ಡಾ.ಪದ್ಮಾ ಮಾಹಿತಿ ಪಡೆದುಕೊಂಡಿದ್ದಾರೆ. ಕರ್ತವ್ಯಕ್ಕೆ ಹಾಜರಾಗದ ವೈದ್ಯರಿಗೆ ಕಾರಣ ಕೇಳಿ ನೋಟೀಸ್ ನೀಡುವುದಾಗಿ ಡಾ.ಪದ್ಮಾ ಹೇಳಿದ್ದಾರೆ.
ಬಹುತೇಕ ವೈದ್ಯರು ಬೆಂಗಳೂರಿನಿಂದ ರಾಮನಗರಕ್ಕೆ ಬಂದು ಹೋಗುತ್ತಾರೆ. ಕೊರೊನಾ ಭೀತಿಯ ಪರಿಸ್ಥಿತಿಯಲ್ಲೂ ಕರ್ತವ್ಯಕ್ಕೆ ಹಾಜರಾಗದೇ ವೈದ್ಯರು ಅಸಡ್ಡೆ ತೋರಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.