ಕಾರ್ಮಿಕರಿಗೆ ನೆರವಾದ ನರೇಗಾ; ರೈತನ ಮೊಗದಲ್ಲೂ ನಗು
ರಾಯಚೂರು, ಜುಲೈ 20; ಕೋವಿಡ್ ಕಾಲದಲ್ಲಿ ನೂರಾರು ಜನರು ಮಹಾನಗರದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಗ್ರಾಮಗಳಿಗೆ ವಾಪಸ್ ಆದ ಅಕುಶಲ ಕಾರ್ಮಿಕರ ನೆರವಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ. ನರೇಗಾ ಅಡಿ ರೈತರು ಸಹ ಹಲವಾರು ಕಾಮಗಾರಿಗಳನ್ನು ಮಾಡಿಸಿಕೊಂಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಕೈಗೊಂಡು ದುಡಿಯುವ ಕೈಗಳಿಗೆ ಕೆಲಸ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯೋಜನೆಯಡಿ ದನದಕೊಟ್ಟಿಗೆ, ಕೃಷಿಹೊಂಡ, ಮನೆ ನಿರ್ಮಾಣ, ಕೆರೆ-ಕಾಲುವೆ ಹೂಳೆತ್ತುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಲಾಗಿದೆ.
ನರೇಗಾ ನೆರವಿನಲ್ಲಿ ಗುಲಾಬಿ ಬೆಳೆದು ಲಾಭಗಳಿಸಿದ ರೈತ
ರಾಯಚೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ 179 ಗ್ರಾಮ ಪಂಚಾಯತಿಗಳಲ್ಲಿ ಹಲವರು ಜಲ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲಾಗಿದೆ. ಈ ಮೂಲಕ ಮುಂಗಾರು ಮಳೆ ಆರಂಭವಾಗುವ ಸಮಯದಲ್ಲಿಯೇ ಕೃಷಿ ಚಟುವಟಿಕೆಗಳಿಗೆ ಇನ್ನಷ್ಟು ಬಲ ತುಂಬಲಾಗಿದೆ. ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ನಡೆಸುವಾಗ ಕೋವಿಡ್ -19 ಮಾರ್ಗಸೂಚಿಗಳನ್ನು ಸಹ ಪಾಲನೆ ಮಾಡಲಾಗುತ್ತಿದೆ.
ವಿಜಯನಗರ: ನರೇಗಾ ಯೋಜನೆಯಲ್ಲಿ ಕೂಲಿ ಮಾಡುತ್ತಿರುವ ಅಂತಾರಾಷ್ಟ್ರೀಯ ಕರಾಟೆ ಪಟು
2021-22ನೇ ಸಾಲಿನ ಕಾಮಗಾರಿಗಳು
ಕೋವಿಡ್ ಸಮಯದಲ್ಲಿ ರಾಯಚೂರು ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿಗಳನ್ನು ಮಾಡಲಾಗಿದೆ. 55,84,111 ಮಾನವ ದಿನಗಳ ಕೆಲಸಗಳನ್ನು ನೀಡಲಾಗಿದೆ.
ಕೃಷಿಕರಿಗೆ ಸಹಕಾರ
ನರೇಗಾ ಯೋಜನೆಯಡಿ ರೈತರ ಅನುಕೂಲಕ್ಕಾಗಿ 3,547 ಕೃಷಿ ಹೊಂಡ, 14,454 ಬದು ನಿರ್ಮಾಣ, 64 ಗೋಕಟ್ಟೆ ಹಾಗೂ 12 ಕಲ್ಯಾಣಿಗಳ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಅಂತರ್ಜಲ ಅಭಿವೃದ್ಧಿಗಾಗಿ ಹಾಗೂ ಪ್ರವಾಹ ನಿಯಂತ್ರಣ, ಮಣ್ಣಿನ ಸವಕಳಿ ತಡೆಗೆ ಸಹಾಯಕವಾಗಿದೆ. ಬದು ನಿರ್ಮಾಣದಿಂದ ಪ್ರತಿ ಎಕರೆಯಲ್ಲಿ 2 ಲೀಟರ್ ಹಾಗೂ ಪ್ರತಿ ಕೃಷಿ ಹೊಂಡದಿಂದ 1.23 ಲಕ್ಷ ಲೀಟರ್ ನೀರಿನ ಸಂಗ್ರಹವಾಗಲಿದೆ.
ಬದು ನಿರ್ಮಾಣದ ಉಪಯೋಗ
ರೈತರು ಕೃಷಿಹೊಂಡ, ಬದುವಿನ ಮೇಲೆ ಹುರಳಿ, ತೊಗರಿ, ಕುಂಬಳ, ಮೆಣಸಿನಕಾಯಿ, ಟೊಮೆಟೋ, ಅಳಸಂದೆ, ತಿಂಗಳ ಹುರಳಿ, ಅವರೆ ಕಾಯಿ, ಈರುಳ್ಳಿ ಬೆಳೆಯಬಹುದು. ಇದರಿಂದಾಗಿ ಮನೆಗೆ ಅಗತ್ಯ ತರಕಾರಿ ಕೊಳ್ಳುವುದು ಸಹ ತಪ್ಪಲಿದೆ. ಅಧಿಕ ಉತ್ಪಾದನೆಯ ತರಕಾರಿ ಮಾರಾಟದಿಂದ ರೈತರಿಗೆ ಆದಾಯವೂ ದೊರೆಯಲಿದೆ. ಹುಲ್ಲಿನ ಬೀಜ ಬಿತ್ತನೆಯಿಂದ ಜಾನುವಾರುಗಳಿಗೆ ಪೌಷ್ಠಿಕ ಹಸಿ ಮೇವು ಪೂರೈಕೆ ಮಾಡಲು ಸಹ ಸಾಧ್ಯವಾಗುತ್ತದೆ.
ಫಲಾನುಭವಿ ರೈತರ ಅನುಭವ
ಗೋವಿಂದ ಎನ್ನುವ ರೈತ ನರೇಗಾ ಯೋಜನೆಯಿಂದ ಆದ ಲಾಭದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಯೋಜನೆಯಡಿ ಮಾನವಿ ತಾಲೂಕಿನ ಆರೋಲಿ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ 7 ಎಕರೆ ಕೃಷಿ ಜಮೀನಿಗೆ ಬದು ನಿರ್ಮಾಣ ಮಾಡಿಕೊಂಡಿದ್ದು, ಇತೀಚಿಗೆ ಉತ್ತಮ ಮಳೆಯಾಗಿ ನೀರು ಸಂಗ್ರಣೆಯಾಗಿದೆ. ಈಗಾಗಲೇ ಕೃಷಿ ಚಟುವಟಿಕೆ ಆರಂಭ ಮಾಡಿದ್ದು, ಬದುಗಳಲ್ಲಿ ತರಕಾರಿ ಬೆಳೆ ತಾಜಾ ಹುರಳಿ, ತೊಗರಿ, ಕುಂಬಳ, ಮೆಣಸಿನಕಾಯಿ, ಟೊಮೆಟೋ, ಹಿರೇಕಾಯಿ ಮುಂತಾದವುಗಳನ್ನು ಬಿತ್ತನೆ ಮಾಡಲಾಗಿದೆ" ಎಂದು ಹೇಳಿದ್ದಾರೆ.