ರಿಮ್ಸ್ ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆ; ರೋಗಿಗಳ ಪರದಾಟ
ರಾಯಚೂರು, ಆಗಸ್ಟ್, 01: ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆಯಿಂದ ನಾವು ನಿತ್ಯವೂ ತೊಂದರೆ ಅನುಭವಿಸುತ್ತಿದ್ದು, ಯಾವ ಅಧಿಕಾರಿಗಳು ಕೂಡ ಇಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿಲ್ಲ. ಚಿಕಿತ್ಸೆ ಪಡೆಯಲು ಯಾವುದೇ ಸೌಲಭ್ಯಗಳಿಲ್ಲದೇ ನಿತ್ಯ ಇಲ್ಲಿ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ರೋಗಿಗಳು ದೂರಿದ್ದಾರೆ.
ಅತ್ಯಾಧುನಿಕ ಮಂಚ, ಟೇಬಲ್ ಹಾಗೂ ಇನ್ನಿತರ ರೋಗಿಗಳು ಔಷಧಿ ಸಂಗ್ರಹಿಸುವ ಕಬ್ಬಿಣದ ಡೆಸ್ಕ್ಗಳು ರಿಮ್ಸ್ ಆಸ್ಪತ್ರೆಯ ಕೆಲ ಕೋಣೆಗಳಲ್ಲಿ ದುಳು ಹಿಡಿಯುತ್ತಿವೆ. ಸುಮಾರು ಒಂದು ವರ್ಷದಿಂದ ಯಾವುದೇ ಸೌಲಭ್ಯಗಳನ್ನು ರೋಗಿಗಳಿಗೆ ನೀಡದೆ ಧೂಳು ಹಿಡಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಉತ್ತರ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಸ್ಪಂದನೆ
ಮತ್ತೊಂದೆಡೆ ಸಿಟಿ ಸ್ಕ್ಯಾನ್ ಕೆಟ್ಟು ಹೋಗಿವೆ. ಆದ್ದರಿಂದ ನಾವು ದುಬಾರಿ ವೆಚ್ಚದಲ್ಲಿ ಖಾಸಗಿ ಸಿಟಿ ಸ್ಕ್ಯಾನ್ ಕೇಂದ್ರದ ಕದ ತಟ್ಟುವಂತೆ ಮಾಡಿದೆ ಎಂದು ರೋಗಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ.
ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮಂಚ, ಚಿಕ್ಕ ಪ್ರಮಾಣದ ಟೇಬಲ್ಗಳನ್ನು ಕೋಣೆಗಳಲ್ಲಿ ಎಸೆಯಲಾಗಿದೆ. ರೋಗಿಗಳಿಗೆ ಉಪಯೋಗಿಯಾದ ಮಂಚ ಮತ್ತು ಮೆಡಿಸನ್ ಟೇಬಲ್ಗಳು ಲಭ್ಯವಿದ್ದರೂ, ರಿಮ್ಸ್ ಆಸ್ಪತ್ರೆಯ ರೋಗಿಗಳು ತುಕ್ಕು ಹಿಡಿದ ಮಂಚ, ಹಾಳಾಗಿರುವ ಬೆಡ್ ಮೇಲೆ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಎದುರಾಗಿದೆ. ಹೀಗೆ ಆಸ್ಪತ್ರೆಯಲ್ಲಿ ಸೌಲಭ್ಯಗಳು ದುರುಪಯೋಗ ಆಗುತ್ತಿದ್ದರೂ ಕೂಡ ಯಾವುದೇ ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರೋಗಿಗಳಿಗೆ ನರಕಯಾತನೆ: ಬಾಣಂತಿಯರು ಹಾಗೂ ವಯೋವೃದ್ಧರು ತುಕ್ಕು ಹಿಡಿದ ಮಂಚಗಳಲ್ಲಿ ಚಿಕಿತ್ಸೆ ಪಡೆಯುತ್ತಾ, ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ. ಹೊಸದಾಗಿ ಬಂದಿರುವ ಮಂಚಗಳನ್ನು ರೋಗಿಗಳಿಗೆ ನೀಡದಿರುವುದು ಅಮಾನಿಯವಾಗಿದೆ. ಸರ್ಕಾರದ ಅನುದಾನ ಯಾವ ರೀತಿ ದುರ್ಬಳಕೆ ಆಗುತ್ತಿದೆ ಎನ್ನುವುದಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ. ಸೌಲಭ್ಯಗಳನ್ನು ಬಳಸದೆ ಹಾಗೆ ಬಿಟ್ಟಿರುವುದು ಜನರಲ್ಲಿ ಯಕ್ಷಪ್ರಶ್ನೆಯಾಗಿ ಕಾಡತೊಡಗಿದೆ.
ಕಮಿಷನ್ ದಂಧೆ ಆರೋಪ: 40 ರಿಂದ 75 ಸಾವಿರ ದುಬಾರಿ ಬೆಲೆಯ ಅತ್ಯಾಧುನಿಕ ಮಂಚಗಳು ಸುಮಾರು ವರ್ಷದಂದ ಧೂಳು ಹಿಡಿದು ಮೂಲೆ ಗುಂಪಾಗಿವೆ. ಹೀಗೆ ಹಿಂದುಳಿದ ಮತ್ತು ಮಹತ್ವಕಾಂಕ್ಷಿ ಜಿಲ್ಲೆಯಲ್ಲಿ ಆರೋಗ್ಯ ಮೂಲಭೂತ ಸೌಕರ್ಯ ಅತ್ಯಂತ ದಯಾನೀಯ ಪರಿಸ್ಥಿತಿಯಲ್ಲಿದೆ. ಪ್ರತಿ ವರ್ಷ ಆಸ್ಪತ್ರೆಗೆ ಬರುವ ಹಣವನ್ನು ಅಲ್ಲಿನ ವೈದ್ಯರು, ಗುತ್ತಿಗೆದಾರರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕಮಿಷನ್ ಆಧಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬರುತ್ತಿವೆ. ರಿಮ್ಸ್ ಆಸ್ಪತ್ರೆಗೆ ಆಡಳಿತ ಮಂಡಳಿ ಇದ್ದು ಇಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ಹತ್ತು, ಹಲವು ಸಮಸ್ಯೆಗಳಿಂದ ರೋಗಿಗಳು ನಿತ್ಯ ತೊಂದರೆಗಳಿಗೆ ಗುರಿಯಾಗುತ್ತಿದ್ದಾರೆ. ಸರ್ಕಾರದಿಂದ ಪೂರೈಸಲಾದ ಔಷಧಿ ಮತ್ತಿತರ ಸಾಮಾಗ್ರಿಗಳಿದ್ದರೂ, ಎಲ್ಲದಕ್ಕೂ ರೋಗಿಗಳು ಖಾಸಗಿ ಅವರಿಂದ ಖರೀದಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಬಳಿ ತಪಾಸಣೆಗೆ ಸಾವಿರಾರು ರೂಪಾಯಿ ಕಬಳಿಸುತ್ತಾರೆ ಎಂದು ಸ್ಥಳೀಯರ ಆರೋಪವಾಗಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಜಿಲ್ಲೆಯ ಆಸ್ಪತ್ರೆಯಲ್ಲಿ ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಉಸ್ತುವಾರಿ ಸಚಿವರು, ಶಾಸಕರು ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಧ್ವನಿಯೆತ್ತದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತಿದೆ. ಜನಪ್ರತಿನಿಧಿಗಳಿಗೆ ಮತ್ತು ಅವರ ಕುಟುಂಬದವರಿಗೆ ಮಾತ್ರ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ ಮತದಾರರ ಆರೋಗ್ಯದ ಬಗ್ಗೆ ಕನಿಷ್ಠ ಕಾಳಜಿ ಇಲ್ಲದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎನ್ನುವ ಆಕ್ರೋಶಗಳು ವ್ಯಕ್ತವಾಗುತ್ತಿವೆ.
Recommended Video