ಮಹಾ ಮಳೆಗೆ ಉತ್ತರ ಕರ್ನಾಟಕದಲ್ಲಿ ಮತ್ತೆ ಶುರುವಾಗಿದೆ ಪ್ರವಾಹದ ಆತಂಕ
ರಾಯಚೂರು, ಸೆಪ್ಟೆಂಬರ್ 4: ಪ್ರವಾಹದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನರಿಗೆ ನೆಮ್ಮದಿ ಮರೀಚಿಕೆಯಾಗಿದೆ. ಅಕ್ಷರಶಃ ಜನರ ಬದುಕು ಬೀದಿಗೆ ಬಂದಿದೆ. ಆಸ್ತಿ ಕಳೆದು ಕೊಂಡರೇನಾಯಿತು ಜೀವ ಉಳಿಯಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲೆ ಈಗ ಮತ್ತೆ ಪ್ರವಾಹದ ಆತಂಕ ಜನರನ್ನು ಆವರಿಸಿದೆ.
ಹೌದು. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಸೇರಿ ಹಲವು ಜಿಲ್ಲೆಗಳಲ್ಲಿ ಕೃಷ್ಣಾ ನದಿ ಪಾತ್ರದ ಜನರಿಗೆ ಮತ್ತೆ ಪ್ರವಾಹದ ಭಯ ಆರಂಭವಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹವಾಗುವ ಭಯದ ನೆರಳಲ್ಲಿ ದಿನ ಕಳೆಯುವಂತಾಗಿದೆ.
ಮುಂಬೈನಲ್ಲಿ ಭಾರಿ ಮಳೆ, ರೈಲುಗಳು ಸ್ಥಗಿತ, ಶಾಲೆಗಳು ಬಂದ್
ಮಹಾರಾಷ್ಟ್ರದ ಕೊಯ್ನಾ ಪರಿಸರದಲ್ಲಿ 71 ಮಿ.ಮೀ, ಮಹಾಬಲೇಶ್ವರ 104 ಮಿ.ಮೀ, ನವಜಾ 90 ಮಿಮೀ ಪ್ರಮಾಣದ ಮಳೆಯಾಗಿದೆ. ಹೆಚ್ಚು ಮಳೆಯ ಕಾರಣದಿಂದ ಕೊಯ್ನಾ ಜಲಾಶಯದಿಂದ 73063 ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. 6 ಅಡಿಯಷ್ಟು ಎತ್ತರಕ್ಕೆ 6 ಗೇಟುಗಳನ್ನು ವಿಸ್ತರಿಸುವ ಮೂಲಕ ನೀರು ಬಿಡಲಾಗಿದೆ. ಈ ಕಾರಣದಿಂದ ನದಿ ತೀರದ ಗ್ರಾಮಗಳ ಜನರಿಗೆ ಆತಂಕ ಆರಂಭವಾಗಿದೆ. ನಾರಾಯಣಪುರ ಜಲಾಶಯದಿಂದಲೂ ಕೃಷ್ಣಾ ನದಿಗೆ 66080 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. 70000 ಕ್ಯೂಸೆಕ್ಸ್ ನೀರಿನ ಒಳ ಹರಿವು ಇದೆ.
ಈ ಕಾರಣದಿಂದ ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕೃಷ್ಣಾ ನದಿ ಪಾತ್ರಗಳ ಗ್ರಾಮಸ್ಥರಿಗೆ ಭಯ ಆರಂಭವಾಗಿದೆ. ಕೆಲವು ದಿನಗಳ ಹಿಂದಷ್ಟೆ ಭಾರಿ ಮಳೆಯಿಂದ 15ಕ್ಕೂ ಹೆಚ್ಚು ದಿನಗಳ ಕಾಲ ಹಲವಾರು ಗ್ರಾಮಗಳು ಜಲಾವೃತಗೊಂಡಿದ್ದವು. ಜಲಾವೃತಗೊಂಡ ಗ್ರಾಮಸ್ಥರನ್ನು ಸ್ಥಳಾಂತರಿಸಿ ರಕ್ಷಿಸಲಾಗಿತ್ತು. ರಾಯಚೂರು ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿತ್ತು. ನೆರೆ ಇಳಿದು ಮತ್ತೆ ತಮ್ಮ ಗೂಡಿಗೆ ಮರಳಿದ ಜನರ ನೆಮ್ಮದಿಗೆ ಕೃಷ್ಣಾ ನದಿ ತುಂಬಿ ಹರಿಯುತ್ತಿರುವುದು ದೇವದುರ್ಗ ಮತ್ತು ಲಿಂಗಸೂರು ತಾಲೂಕಿನ ಬಹುತೇಕ ಹಳ್ಳಿ ಜನರಿಗೆ ಮತ್ತೆ ಪ್ರವಾಹ ಭೀತಿ ಶುರುವಾಗಿದೆ.
ಮೂಡಿಗೆರೆ ಸುತ್ತಮುತ್ತ ಭಾರೀ ಮಳೆ; ಮತ್ತೆ ಗುಡ್ಡ ಕುಸಿವ ಭೀತಿಯಲ್ಲಿ ಚಾರ್ಮಾಡಿ ಘಾಟ್
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ ಮೂಲಕ ತೆಲಂಗಾಣದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಕೃಷ್ಣ ನದಿ ಬಹು ದೊಡ್ಡ ನದಿಯಾಗಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಈಗಾಗಲೇ ನಿರಂತರ ಮಳೆಯಾಗುತ್ತಿದ್ದು, ಹೀಗೇ ಮುಂದುವರೆದರೆ ಮತ್ತೆ ಕೃಷ್ಣ ನದಿ ಪಾತ್ರದ ಜನರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳೇ ಹೆಚ್ಚಿವೆ.