ರಾಯಚೂರು: ಎರಡನೇ ದಿನವೂ ಅದ್ದೂರಿಯಾಗಿ ನಡೆದ ಮುಂಗಾರು ಹಬ್ಬ
ರಾಯಚೂರು, ಜೂನ್.28: ಜಿಲ್ಲೆಯಲ್ಲಿ ನಡೆಯುತ್ತಿರುವ 'ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ'ಕ್ಕೆ ಇಂದು ಎರಡನೇ ದಿನ. ಕಳೆದ 18 ವರ್ಷಗಳಿಂದ ಮುನ್ನೂರು ಕಾಪು ಸಮಾಜದಿಂದ ಕಾರ ಹುಣ್ಣಿಮೆ ವೇಳೆ ಈ ರೈತರ ಹಬ್ಬ ಆಚರಿಸಲಾಗುತ್ತದೆ.
ಇಂದು ಕೂಡ ಎತ್ತುಗಳಿಗಾಗಿ ಭಾರದ ಕಲ್ಲು ಎಳೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಸೇರಿದಂತೆ, ಆಂಧ್ರ, ತೆಲಂಗಾಣದಿಂದ ಎತ್ತುಗಳು ಭಾರ ಎಳೆಯಲು ಆಗಮಿಸಿದ್ದವು. ಸುಮಾರು 2 ಟನ್ ಭಾರದ ಕಲ್ಲುಗಳನ್ನು ಎತ್ತುಗಳಿಂದ ಎಳೆಸಲಾಯಿತು.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬಕ್ಕೆ ಚಾಲನೆ
15 ನಿಮಿಷಗಳ ಅವಧಿಯಲ್ಲಿ ಅತೀ ಹೆಚ್ಚು ಸಾರಿ ಕಲ್ಲು ಎಳೆಯುವ ಎತ್ತುಗಳಿಗೆ ಬಹುಮಾನ ನೀಡಲಾಗುತ್ತದೆ. ಒಟ್ಟು ಮೂರು ದಿನಗಳ ಕಾಲ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿದ್ದು, ಇದರ ಜೊತೆಗೆ ಇಂದು ಸಂಜೆ ಲಕ್ಷ್ಮಿದೇವಿ ಮೆರವಣಿಗೆ, ಕುಸ್ತಿ, ಭಾರ ಎತ್ತುವ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಎರಡನೇ ದಿನದ ಕಾರ್ಯಕ್ರಮಕ್ಕೆ ಮಂತ್ರಾಲಯ ಮಠದ ಶ್ರೀ ಸುಭುದೇಂದ್ರತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಸ್ವಾಮೀಜಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶೀಘ್ರವೇ ರೈತರ ಸಾಲಮನ್ನಾ ಮಾಡಬೇಕು. ದೇಶದ ಬೆನ್ನೆಲುಬಾದ ರೈತರ ನೆರವಿಗೆ ಬರಬೇಕು ಎಂದರು.