ಜಲಧಾರೆ ಮೂಲಕ ಸಮಗ್ರ ರಾಯಚೂರಿಗೆ ಕುಡಿಯುವ ನೀರು ಪೂರೈಕೆ:ಸಿಎಂ
ರಾಯಚೂರು, ಜೂನ್ 26: ಜಲಧಾರೆ ಯೋಜನೆಯ ಮೂಲಕ ಸಮಗ್ರ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಅದಕ್ಕೆ ಶೀಘ್ರ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಜನತಾದರ್ಶನ, ಗ್ರಾಮವಾಸ್ತವ್ಯ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ರೈಲಿನ ಮೂಲಕ ಬೆಂಗಳೂರಿನಿಂದ ಆಗಮಿಸಿ ರಾಯಚೂರು ಅತಿಥಿಗೃಹದಲ್ಲಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಬುಧವಾರ ಬೆಳಗ್ಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ರಾಯಚೂರಲ್ಲಿ ಗ್ರಾಮ ವಾಸ್ತವ್ಯ, ಕುಮಾರಸ್ವಾಮಿ ಕಾರ್ಯಕ್ರಮಗಳು
ಜಲಧಾರೆ ಯೋಜನೆಗೆ ಶೀಘ್ರ ಅನುಮೋದನೆ ನೀಡುವುದರ ಮೂಲಕ ಇಡೀ ಜಿಲ್ಲೆಗೆ ನೀರು ಒದಗಿಸಲಾಗುವುದು, ರಾಯಚೂರು ಜಿಲ್ಲೆ ಅಭಿವೃದ್ಧಿ ಹಾಗೂ ಮೂಲಭೂತಸೌಕರ್ಯ ಒದಗಿಸುವ ಕುರಿತು ಈಗಾಗಲೇ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.
ಬರಗಾಲಕ್ಕೆ ಸಂಬಂಧಿಸಿದಂತೆ ಹಾಗೂ ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಿ, ಎಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಿ ಎಂದು ಡಿಸಿ ಶರತ್ ಹಾಗೂ ಜಿಪಂ ಸಿಇಒ ನಳಿನಿ ಅತುಲ್ ಅವರಿಗೆ ಖಡಕ್ ಆಗಿ ಸೂಚನೆ ನೀಡಿದರು.
ಸರ್ಕಾರ ಎರಡೋ ಮೂರೋ ಜಿಲ್ಲೆಗೆ ಮೂಲಸೌಕರ್ಯಗಳನ್ನು ಒದಗಿಸಿದರೆ ಸಾಕಾಗುವುದಿಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿ ಮಾಡಬೇಕು. ನನಗೆ ಐದಾರು ತಿಂಗಳ ಸಮಯ ಬೇಕು ಅಷ್ಟರೊಳಗೆ ಎಲ್ಲಾ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತೇವೆ ಎಂದರು.
ಗ್ರಾಮ ವಾಸ್ತವ್ಯ: ರಾಯಚೂರಿಗೆ ರೈಲಿನಲ್ಲಿ ತೆರಳಿದ ಕುಮಾರಸ್ವಾಮಿ
ಸುಮ್ಮನೆ ನಾಲಿಗೆ ಹರಿಬಿಡಬಾರದು, ಬಿಜೆಪಿ ಶಾಸಕ ಶಿವನಗೌಡ ಪಾಟೀಲ್ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಏನು ಮಾಡಿದ್ರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ನಾನು ಇಲ್ಲಿಗೆ ಕೇವಲ ಗ್ರಾಮ ವಾಸ್ತವ್ಯ ಮಾಡಲು ಬಂದಿಲ್ಲ.
ಬರಗಾಲದ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಹಣಕಾಸಿನ ಕೊರತೆ ಇಲ್ಲ ಎಂದು ಡಿಸಿ ಶರತ್ ಅವರು ಸಿಎಂ ಅವರಿಗೆ ತಿಳಿಸಿದರು.ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಎಚ್ ಕೆಆರ್ಡಿಬಿ, ಬಿಸಿಎಂ ಇಲಾಖೆಗಳಿಗೆ ಸಂಬಂಧಿಸಿದ 8144.99 ಲಕ್ಷ ರೂ.ಗಳ 38ಕಾಮಗಾರಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗಲಿವೆ ಎಂದು ಅವರು ತಿಳಿಸಿದರು.
'ಗ್ರಾಮ ವಾಸ್ತವ್ಯದಲ್ಲಿ 1.24 ಕೋಟಿ ರುಪಾಯಿ ಖರ್ಚು ಮಾಡಿದ್ದೇ ಸಾಧನೆ'
ಸಚಿವರಾದವ ಸಾ.ರಾ.ಮಹೇಶ, ಶಿವಶಂಕರ ರೆಡ್ಡಿ, ವೆಂಕಟರಾವ ನಾಡಗೌಡ, ಶಾಸಕ ರಾಜಾವೆಂಕಟಪ್ಪ ನಾಯಕ್ , ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಎಚ್.ಬಿ.ದಿನೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.