ರಾಯಚೂರು; ಭಾರೀ ಕಲ್ಲು ಎಳೆದ ಎತ್ತುಗಳು, ಜನರ ಸಂಭ್ರಮ
ರಾಯಚೂರು.ಜೂ.13: ಮುನ್ನೂರುಕಾಪು ಸಮಾಜದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಅದ್ಧೂರಿಯಾಗಿ ಆರಂಭಗೊಂಡಿತು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮ ರದ್ದುಗೊಂಡ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮಕ್ಕಾಗಿ ಜನರು ನಿರೀಕ್ಷಿಸುತ್ತಿದ್ದರು.
ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮೊದಲ ದಿನ ಕರ್ನಾಟಕ ರಾಜ್ಯದ ಎತ್ತುಗಳ ಭಾರದ ಕಲ್ಲು ಎಳೆಯುವ ಸ್ಪರ್ಧೆ ಆಯೋಜಿಸಲಾಗಿತ್ತು. ಸಾಮಾನ್ಯವಾಗಿ ಆಂಧ್ರದ ಎತ್ತುಗಳೇ ಅಧಿಕ ಸಂಖ್ಯೆಯಲ್ಲಿ ಬರುವ ಈ ಕಾರ್ಯಕ್ರಮದಲ್ಲಿ ಈ ಸಲ ಕರ್ನಾಟಕ ಎತ್ತುಗಳು ಭಾರದ ಕಲ್ಲು ಎಳೆಯುವ ಶಕ್ತಿ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಸಾಂಸ್ಕೃತಿಕ ರಾಯಚೂರು ಹಬ್ಬದ ವರ್ಚಸ್ಸಿಗೆ ಕೈಗನ್ನಡಿಯಾಗಿತ್ತು.
Breaking: ರಾಯಚೂರು ಕಲುಷಿತ ನೀರು ಪ್ರಕರಣ: ಅಗತ್ಯ ಬಿದ್ದರೆ ಕ್ರಮಿನಲ್ ಮೊಕದ್ದಮೆ
ಒಟ್ಟು 13 ಜೋಡಿ ಎತ್ತುಗಳು ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶಿಸಿದವು. ಬಿಜಾಪೂರು, ಬೆಳಗಾವ ತಳಿ ಸೇರಿದಂತೆ ಆಂಧ್ರದ ತಳಿ ಭಾರೀ ಗಾತ್ರದ ಎತ್ತುಗಳು ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಪೈಪೋಟಿಗೆ ನುಗ್ಗಿದವು.
ಹಬ್ಬದ ಮೊದಲನೇ ದಿನ ಕಲ್ಲು ಎಳೆಯುವ ವೀಕ್ಷಕರು ಮೈದಾನದ ಸುತ್ತಮುತ್ತ ಕಿಕ್ಕಿರಿದು ನಿಂತಿದ್ದರು. ಅಲ್ಲದೇ, ಅಲ್ಲಿಯೇ ಇರುವ ಅಂಗಡಿ ಮುಂಗಟ್ಟುಗಳ ಮೇಲೆ ಕುಳಿತು ಪಂದ್ಯ ವೀಕ್ಷಿಸಿದರು. ಭಾರದ ಕಲ್ಲು ಎಳೆಯುವ ಎತ್ತುಗಳು ಬಿರಿಸುನಿಂದ ಕಲ್ಲು ಎಳೆದುಕೊಂಡು ಓಡುವ ಸಂದರ್ಭದಲ್ಲಿ ಪಂದ್ಯ ವೀಕ್ಷಣೆಗೆ ಬಂದ ಪ್ರೇಕ್ಷಕರು ಸಿಳ್ಳೆ, ಕೆಕೆ ಹಾಕುವ ಮೂಲಕ ಹುರಿದುಂಬಿಸಿ ಪಂದ್ಯಕ್ಕೆ ಕಳೆತಂದರು.
ರಾಯಚೂರು; ಮಳೆ ಆರಂಭ, ಕೃಷಿ ಚಟುವಟಿಕೆಯಲ್ಲಿ ತೊಡಗಿದ ರೈತರು
20 ನಿಮಿಷದಲ್ಲಿ 13 ಜೋಡಿ ಎತ್ತುಗಳ ಶಕ್ತಿ ಪ್ರದರ್ಶನ; 13 ಜೋಡಿ ಎತ್ತುಗಳು 20 ನಿಮಿಷದಲ್ಲಿ ಅತಿ ಹೆಚ್ಚು ದೂರ ಕಲ್ಲು ಎಳೆಯುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿ, ಅತಿ ಹೆಚ್ಚು ದೂರ ಎಳೆದ ಎತ್ತುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಇತರೆ ಬಹುಮಾನ ಘೋಷಿಸಲಾಯಿತು.
ಕಳೆದ ಎರಡು ವರ್ಷ ಕಾರ್ಯಕ್ರಮ ನಡೆಯದಿದ್ದರೂ, ಜನ ಮಾತ್ರ ರಾಯಚೂರು ಹಬ್ಬಕ್ಕಾಗಿ ತೀವ್ರ ಕುತೂಹಲದ ನಿರೀಕ್ಷೆಯಲ್ಲಿದ್ದರು. ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ಉತ್ತರ ಕರ್ನಾಟಕದ ಅತಿದೊಡ್ಡ ಹಬ್ಬವಾಗಿ ಖ್ಯಾತಿ ಹೊಂದಿದೆ. ಮೈಸೂರು ಹಬ್ಬದ ಮಾದರಿಯಲ್ಲಿ ಜಿಲ್ಲೆಯಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬವನ್ನು ನಿರ್ವಹಿಸಲಾಗುತ್ತದೆ.
ರಾಯಚೂರು ಮುಂಗಾರು ಸಾಂಸ್ಕೃತಿಕ ನಿಮಿತ್ತ ಗಂಜ್ ಆವರಣದಲ್ಲಿ ಮುನ್ನೂರುಕಾಪು ಯುವಕರಿಂದ ಉಚಿತ ಭೋಜನಾ ವ್ಯವಸ್ಥೆ ಮಾಡಲಾಗಿತ್ತು.
ಕುಸ್ತಿ ಪಂದ್ಯಾವಳಿ; ಮುಂಗಾರು ಸಾಂಸ್ಕೃತಿಕ ಹಬ್ಬಕ್ಕೆ ತೆಲಂಗಾಣ, ಆಂಧ್ರ, ಮಹಾರಾಷ್ಟ ಹಾಗೂ ಕರ್ನಾಟಕ ರಾಜ್ಯಗಳಿಂದ ಎತ್ತಿನ ಜೋಡಿಗಳು ಆಗಮಿಸಿವೆ. 20 ನಿಮಿಷಯದಲ್ಲಿ ಅತಿ ಹೆಚ್ಚು ದೂರ ಕಲ್ಲು ಎಳೆಯುವ ಎತ್ತುಗಳಿಗೆ ಮೂರು ದಿನಗಳಲ್ಲಿ ಒಟ್ಟು 4 ಲಕ್ಷ ಬಹುಮಾನ ನೀಡಲಾಗುತ್ತದೆ.
ಕಲಾ ತಂಡಗಳಿಗೆ 10 ಲಕ್ಷ ಬಹುಮಾನ ನೀಡಲಾಗುತ್ತದೆ. ಮುನ್ನೂರುಕಾಪು ಸಮಾಜ ಈ ಹಬ್ಬವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಆಯೋಜಿಸುವ ಮೂಲಕ ಜನರು ಕಾರ ಹುಣ್ಣಿಮೆಯ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತದೆ. ಜೂ.14 ಹಾಗೂ 15 ರಂದು ಆಂಧ್ರ ಸೇರಿದಂತೆ ಅಖಿಲ ಭಾರತ ಮುಕ್ತ ಕಲ್ಲು ಎಳೆಯುವ ಸ್ಪರ್ಧೆ ನಡೆಯಲಿದೆ.
ಎತ್ತುಗಳ ಭಾರದ ಕಲ್ಲು ಎಳೆಯುವ ಸ್ಪರ್ಧೆಯೊಂದಿಗೆ ವಿವಿಧ ಸಾಂಸ್ಕೃತಿಕ ತಂಡಗಳ ಪ್ರದರ್ಶನ ಮತ್ತು ಕುಸ್ತಿ ಹಾಗೂ ಇನ್ನಿತರ ಕಾರ್ಯಕ್ರಮಗಳು ಮುಂಗಾರು ಸಾಂಸ್ಕೃತಿಕ ಹಬ್ಬದ ವೈಭವ ಹೆಚ್ಚುವಂತೆ ಮಾಡಲಿವೆ.