ನ.20ರಿಂದ ತುಂಗಭದ್ರಾ ಪುಷ್ಕರ; ಮಂತ್ರಾಲಯದಲ್ಲಿ ಭರದ ಸಿದ್ಧತೆ
ರಾಯಚೂರು, ನವೆಂಬರ್ 19: ನ.20ರಿಂದ ತುಂಗಭದ್ರಾ ಪುಷ್ಕರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ತುಂಗಭದ್ರಾ ನದಿಯಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನ.20ರಿಂದ ಡಿ.1ರವರೆಗೆ ಪುಷ್ಕರದ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ.
ತುಂಗಭದ್ರಾ ಪುಷ್ಕರಕ್ಕೆ ಮಂತ್ರಾಲಯದಲ್ಲಿ ಆರಂಭಗೊಂಡ ಸಿದ್ಧತೆ
ನ.20ರಂದು ಬೆಳಿಗ್ಗೆ 7 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಳ್ಳಲಿವೆ. ಮಠದಿಂದ ನದಿ ತೀರದವರೆಗೆ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿ ನಂತರ ಪೂಜೆ ಪುನಸ್ಕಾರಗಳನ್ನು ನೆರವೇರಿಸುವುದಾಗಿ ಮಠದ ಆಡಳಿತ ಮಂಡಳಿ ಮಾಹಿತಿ ನೀಡಿದೆ. 12 ವರ್ಷಕ್ಕೆ ಒಂದು ಬಾರಿ ತುಂಗಭದ್ರಾ ಪುಷ್ಕರ ಪುಣ್ಯ ಸ್ನಾನ ನಡೆಯಲಿದ್ದು, ಈ ಸಂದರ್ಭ ಗಂಗೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಆದರೆ ಈ ಬಾರಿ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಭಕ್ತರಿಗೆ ನದಿಯಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ನದಿಯ ಸ್ನಾನದ ಬದಲಾಗಿ ಪ್ರೋಕ್ಷಣೆ ಹಾಗೂ ನದಿ ದಡದಲ್ಲಿ ಪಿಂಡ ಪ್ರದಾನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹೆಚ್ಚು ಜನ ಸೇರದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಮಂತ್ರಾಲಯದ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೊರೊನಾ ನಿಯಮಾನುಸಾರ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.
Recommended Video
ರಾಯಚೂರು ಜಿಲ್ಲೆಯಲ್ಲಿ ನವೆಂಬರ್ 18ರ ವರದಿಯಂತೆ ಒಟ್ಟು 13584 ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿದ್ದು, 13255 ಮಂದಿ ಗುಣಮುಖರಾಗಿದ್ದಾರೆ, 175 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 154 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.