ಪ್ರತಾಪ್ ಗೌಡ ಬಿಜೆಪಿಗೆ ಹೋದ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ!
ರಾಯಚೂರು, ನವೆಂಬರ್ 23: ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಉಪ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆ ಸಿದ್ಧತೆ ಆರಂಭಿಸಿದ್ದು, ಬೃಹತ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿದೆ.
ಸೋಮವಾರ ಮಸ್ಕಿಯಲ್ಲಿ ಬಸನಗೌಡ ತುರುವಿಹಾಳ ಕಾಂಗ್ರೆಸ್ ಪಕ್ಷ ಸೇರಿದ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಮಸ್ಕಿ, ಬಸವಕಲ್ಯಾಣ ಉಪಚುನಾವಣೆ: ಕುಮಾರಸ್ವಾಮಿ ಶಸ್ತ್ರತ್ಯಾಗ
ಮಸ್ಕಿಯಲ್ಲಿ 2018ರ ಚುನಾವಣೆಯಲ್ಲಿ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ನಿಂದ ಕಣಕ್ಕಿಳಿದು ಗೆದ್ದಿದ್ದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಈಗ ಬಿಜೆಪಿ ಸೇರಿದ್ದಾರೆ.
ಮಸ್ಕಿಗೆ ಬಂದ ಕಾಂಗ್ರೆಸ್ ನಾಯಕರು; ಬೃಹತ್ ಶಕ್ತಿ ಪ್ರದರ್ಶನ
ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು. "ಹಣದಾಸೆಗೆ ತನ್ನನ್ನು ತಾನು ಮಾರಾಟ ಮಾಡಿಕೊಂಡಿದ್ದಾರೆ. ಕುರಿ, ಮೇಕೆ, ದನಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತೇವೆ. ಆದರೆ, ಈ ಗಿರಾಕಿ ಶಾಸಕನಾಗಿ ಮಾರಾಟವಾಗಿದ್ದಾರೆ" ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.
ಮಸ್ಕಿ ಕ್ಷೇತ್ರದ ಉಪ ಚುನಾವಣೆ ಸದ್ಯಕ್ಕಿಲ್ಲ
ಜನರಿಗೆ ಮೋಸ ಮಾಡಿದ್ದಾರೆ
"ಪ್ರತಾಪ್ ಗೌಡ ಪಾಟೀಲ್ ಮಸ್ಕಿ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ಅವರು ಗೆಲ್ಲುವ ಕುದುರೆ ಎಂದು ಜಿಲ್ಲಾ ಮುಖಂಡರು ಹೇಳಿದ್ದರು. ಆದರೆ, ಅವರೊಬ್ಬ ಚೆಂಗುಲಿ ಕುದುರೆ ಎಂದು ನಮಗೆ ಗೊತ್ತಿರಲಿಲ್ಲ" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ತಕ್ಕಪಾಠವನ್ನು ಕಲಿಸಿ
"ನೀವೆಲ್ಲಾ ಬಿಜೆಪಿಯ ಆಮಿಷಗಳಿಗೆ ಒಳಗಾಗದೆ ಪ್ರತಾಪ್ ಗೌಡ ಪಾಟೀಲ್ಗೆ ತಕ್ಕಪಾಠವನ್ನು ಕಲಿಸಿ. ಬಿಜೆಪಿಯಲ್ಲಿದ್ದ ಪ್ರತಾಪ್ ಗೌಡನನ್ನು ಜಿಲ್ಲಾ ಮುಖಂಡರು ಕಾಂಗ್ರೆಸ್ಗೆ ಕರೆತಂದರು. ನಾವು ನಂಬಿ ಸೇರಿಸಿಕೊಂಡೆವು. ಕಾಂಗ್ರೆಸ್ಗೆ ಚೂರಿ ಹಾಕಿ ಬಿಜೆಪಿ ಸೇರಿದರು" ಎಂದು ಸಿದ್ದರಾಮಯ್ಯ ಟೀಕಿಸಿದರು.
ಬಿಜೆಪಿಗೆ ಓಡಿ ಹೋಗಿದ್ದಾರೆ
"ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ ನಾನು 7 ಸಾವಿರ ಕೋಟಿ ರೂ. ಮೀಸಲಾಗಿಟ್ಟಿದ್ದೆ. ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ಬಿಜೆಪಿಗೆ ಓಡಿ ಹೋಗಿದ್ದಾರೆ. ಹಣದ ಆಸೆಗೆ ಮಾರಾಟ ಮಾಡಿಕೊಂಡಿದ್ದಾರೆ" ಎಂದು ಸಿದ್ದರಾಮಯ್ಯ ಆರೋಪಿಸಿದರು.
Recommended Video
ಬಿಜೆಪಿ ಸೇರಿದ ಪಾಟೀಲ್
ಮಸ್ಕಿಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ತುರುವಿಹಾಳ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ನಿಂದ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ಬಿಜೆಪಿ ಸೇರಿದ್ದಾರೆ. ಮಸ್ಕಿ ಉಪ ಚುನಾವಣಾ ದಿನಾಂಕ ಇನ್ನೂ ಘೋಷಣೆಯಾಗಬೇಕಿದೆ.