224 ಕ್ಷೇತ್ರಗಳಲ್ಲೂ ಶಿವಸೇನೆ ಸ್ಪರ್ಧೆ, ಬಿಜೆಪಿಯದು ಡೋಂಗಿ ಹಿಂದುತ್ವ
ರಾಯಚೂರು, ಮಾರ್ಚ್ 8 : ವಿಧಾನಸಭೆ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲೂ ಶಿವಸೇನೆ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದು ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಇಲ್ಲಿ ಹೇಳಿಕೆ ನೀಡಿದರು.
ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ ರಾಜ್ಯಾಧ್ಯಕ್ಷ - ಶ್ರೀರಾಮಸೇನೆ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಹಿಂದೂಗಳ ಹೆಸರು ಹೇಳಿಕೊಂಡು ಮತ ಪಡೆಯುತ್ತಿದ್ದ ಬಿಜೆಪಿಗೆ ಪಾಠ ಕಲಿಸುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನ್ನು ಯಾರೂ ನಂಬಲ್ಲ ಎಂದರು.
ವರ್ಷದೊಳಗೆ ಬಿಜೆಪಿ-ಶಿವಸೇನೆ ಸಂಬಂಧ ಸಂಪೂರ್ಣ ಅಂತ್ಯ: ಠಾಕ್ರೆ ಸುಳಿವು
ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯುವ ವಿಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿ ಸರಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ಅತಿ ಹೆಚ್ಚು ಸಮಸ್ಯೆ ಮಾಡಲಾಗಿದೆ. ಗೂಂಡಾ ಕಾಯ್ದೆ, ರೌಡಿ ಶೀಟ್, ಗಡೀಪಾರು ಮಾಡಿದ್ದು ಅವರ ಸರಕಾರದ ಅವಧಿಯಲ್ಲಿ ಎಂದು ಹೇಳಿದರು.
ಬಿಜೆಪಿ ಸರಕಾರ ಇದ್ದ 2008ರಿಂದ 2013ರ ವರೆಗೆ ಅವಧಿಯಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಧಿಕಾರ ಇದ್ದಾಗ ಬಿಜೆಪಿಯವರು ಹಿಂದೂಗಳನ್ನು ನಿರ್ಲಕ್ಷ್ಯ ಮಾಡಿದರು. ಅಧಿಕಾರ ಕಳೆದುಕೊಂಡ ಮೇಲೆ ಹಿಂದುತ್ವದ ಬಗ್ಗೆ ಮಾತಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಹಾಗೂ ಕೇಂದ್ರ ಸರಕಾರದವರು ಡೋಂಗಿ ಹಿಂದುತ್ವವಾದಿಗಳು. ಯೋಗಿ ಬರಲಿ, ಮೋದಿ ಬರಲಿ ರಾಜ್ಯದಲ್ಲಿ ಶಿವಸೇನೆಯನ್ನು ಬೆಂಬಲಿಸುತ್ತಾರೆ. ಹಿಂದುತ್ವಕ್ಕಾಗಿ ದುಡಿದವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ. ಕೇಂದ್ರ ಸರಕಾರಕ್ಕೆ ಹಿಂದೂಗಳ ಬಗ್ಗೆ ಗೌರವ ಇದ್ದಿದ್ದರೆ ರಾಮ ಮಂದಿರ ನಿರ್ಮಿಸುತ್ತಿದ್ದರು. ಮಂದಿರ್ ಬನಾಯೆಂಗೇ, ಮಂದಿರ್ ಬನಾಯೆಂಗೇ ಅಂತ ಮಾತ್ರ ಎನ್ನುತ್ತಿದ್ದಾರೆ ಎಂದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಂಗ್ ಕೂಗಿದ ತಕ್ಷಣ ಭಾಷಣ ನಿಲ್ಲಿಸಿದ್ದರು. ಆಗ ಬಿಜೆಪಿಯ ಬಾಲ ಬಾಲಬಡಕರು ಸಿದ್ದರಾಮಯ್ಯರನ್ನು ಟೀಕೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಬಾಂಗ್ ಕೇಳಿ ಭಾಷಣ ನಿಲ್ಲಿಸಿದರು. ಆಗ ಭಕ್ತರು ಪ್ರಧಾನಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂಬ ಸಮಜಾಯಿಷಿ ನೀಡಿದರು. ಬಿಜೆಪಿಯವರು ಡೋಂಗಿ ಎನ್ನಲು ಇದೇ ಸಾಕ್ಷಿ. ಭ್ರಷ್ಟಾಚಾರದ ಕರಾಳ ಮುಖಕ್ಕೆ ಕೇಸರಿ ಬಣ್ಣ ಹಚ್ಚಿಕೊಂಡಿದ್ದಾರೆ ಎಂದು ಸಿದ್ದಲಿಂಗ ಸ್ವಾಮೀಜಿ ವಾಗ್ದಾಳಿ ನಡೆಸಿದರು.