ರಾಯಚೂರು: ಅನಾಥ ಬಾಲಕಿ ಮೇಲೆ ಕಾವಲುಗಾರನಿಂದಲೇ ಅತ್ಯಾಚಾರ
ರಾಯಚೂರು, ಫೆಬ್ರವರಿ 01: ಅನಾಥಾಶ್ರಮದ (ಬಾಲಮಂದಿರ) ಬಾಲಕಿ ಮೇಲೆ ಅನಾಥಾಶ್ರಮದ ಕಾವಲುಗಾರನೇ ಅತ್ಯಾಚಾರ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಬಾಲಮಂದಿರದಲ್ಲಿ ಆಶ್ರಯ ಪಡೆದು ಎಸ್ಎಸ್ಎಲ್ಸಿ ಕಲಿಯುತ್ತಿದ್ದ ಬಾಲಕಿಯ ಮೇಲೆ ಅದೇ ಬಾಲಮಂದಿರದಲ್ಲಿ ಹೊರಗುತ್ತಿಗೆ ಮೇಲೆ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಸಿದ್ದಯ್ಯ ಎಂಬಾತ ಅತ್ಯಾಚಾರ ಎಸಗಿದ್ದಾನೆ.
ಶಾಲೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಕಾವಲುಗಾರ ಸಿದ್ದಯ್ಯ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆಕೆಯ ಸಹೋದರ ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣೆ ವಿಭಾಗಕ್ಕೆ ದೂರು ನೀಡಿದ್ದಾನೆ. ಆದರೆ ಅವರು ಶೀಘ್ರವಾಗಿ ತನಿಖೆ ನಡೆಸದೆ, ಜನವರಿ 30 ರಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ, ಜಿಲ್ಲಾಧಿಕಾರಿ ವೆಂಕಟೇಶ್ ಶುಕ್ರವಾರ ಬಾಲಮಂದಿರಕ್ಕೆ ಭೇಟಿ ನೀಡಿದ್ದಾರೆ.
ಅತ್ಯಾಚಾರ ಘಟನೆ ನವೆಂಬರ್ ನಲ್ಲಿಯೇ ನಡೆದಿದ್ದು, ದೂರು ತೆಗೆದುಕೊಳ್ಳಲು ವಿಳಂಬವಾಗಿದೆ. ಮಾಹಿತಿ ತಿಳಿದ ಕೂಡಲೇ ಜಿಲ್ಲಾಧಿಕಾರಿಗಳು ಬಾಲಮಂದಿರದ ಮೇಲ್ವಿಚಾರ ಸೈಯದ್ ಪಾಷಾ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಗುರುಪ್ರಸಾದ್ ಅನ್ನು ಜಿಲ್ಲಾಧಿಕಾರಿಗಳು ಅಮಾನತು ಮಾಡಿದ್ದಾರೆ.
ಘಟನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕಾವಲುಗಾರ ಸಿದ್ದಯ್ಯ ಪರಾರಿಯಾಗಿದ್ದಾನೆ. ಪೊಲೀಸರು ಆತನ ಹುಡುಕಾಟ ನಡೆಸಿದ್ದಾರೆ.