ರಾಯಚೂರು: ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಂದ ರಾಷ್ಟ್ರಧ್ವಜ ತಯಾರು
ರಾಯಚೂರು ಆಗಸ್ಟ್, 01: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರ 'ಹರ ಘರ್ ತಿರಂಗಾ' ಅಭಿಯಾನ ಹಮ್ಮಿಕೊಂಡಿದೆ. ಅಗಸ್ಟ್ 11ರಿಂದ 15ರವರೆಗೆ ಪ್ರತಿಯೊಬ್ಬರ ಮನೆಯಲ್ಲೂ ರಾಷ್ಟ್ರ ಧ್ವಜಾರೋಹಣ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ರಾಷ್ಟ್ರಧ್ವಜಗಳನ್ನು ತಯಾರಿ ಮಾಡುವಲ್ಲಿ ಸ್ವಸಹಾಯ ಸಂಘಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.
ರಾಯಚೂರು ಜಿಲೆಯ ಪ್ರತಿಯೊಬ್ಬರ ಮನೆಯಲ್ಲೂ ರಾಷ್ಟ್ರಧ್ವಜಗಳನ್ನು ತಯಾರಿ ಮಾಡುವಲ್ಲಿ ಸ್ವಸಹಾಯ ಸಂಘಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 178 ಗ್ರಾಮ ಪಂಚಾಯಿತಿಗಳಲ್ಲಿ ರಾಷ್ಟ್ರಧ್ವಜ ತಯಾರಿಸುವ ಕಾರ್ಯ ನಡೆಯುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಯಿಂದ 450 ರಾಷ್ಟ್ರಧ್ವಜಗಳನ್ನು ತಯಾರು ಮಾಡಲಾಗುತ್ತಿದೆ. 55 ಮಹಿಳಾ ಒಕ್ಕೂಟಗಳಿಗೆ ತರಬೇತಿ ನೀಡಿ 550 ಮಹಿಳಾ ಸದಸ್ಯರಿಂದ ರಾಷ್ಟ್ರಧ್ವಜ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ.
ಧ್ವಜಕ್ಕೆ ಬೆಲೆ ನಿಗದಿ:
'ಹರ ಘರ್ ತಿರಂಗಾ' ಅಭಿಯಾನದ ಅಂಗವಾಗಿ ಪ್ರತಿಯೊಬ್ಬರ ಮನೆಯಲ್ಲಿ ರಾಷ್ಟ್ರಧ್ವಜ ಹಾರಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯತಿಗಳ ಮೂಲಕ ಮಹಿಳಾ ಸ್ವಸಹಾಯ ಸಂಘಗಳನ್ನು ಬಳಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಿ ರಾಷ್ಟ್ರ ಧ್ವಜಗಳನ್ನು ತಯಾರಿಸಲಾಗುತ್ತಿದೆ. ಒಂದು ಧ್ವಜ ತಯಾರಿಕೆಗೆ 4 ರೂಪಾಯಿ ನೀಡಲಾಗುತ್ತದೆ ಎಂದು ಗ್ರಾಮ ವ್ಯವಸ್ಥಾಪಕ ನವೀನ್ ಕುಮಾರ್ ಹೇಳಿದರು.
ನೇಕಾರರ ಅಭಿಪ್ರಾಯ:
ಕೇಂದ್ರ ಸರ್ಕಾರದ ಆದೇಶದಂತೆ ನಮಗೆ ರಾಷ್ಟ್ರ ಧ್ವಜ ತಯಾರಿಸಲು ಬಿಚ್ಚಾಲಿ ಗ್ರಾಮ ಪಂಚಾಯತಿ ವತಿಯಿಂದ ತರಬೇತಿ ನೀಡಿರುವುದು ತುಂಬಾ ಖುಷಿಯಾಗಿದೆ. ಅಲ್ಲದೇ ಮನೆಯಲ್ಲಿ ಕೆಲಸವಿಲ್ಲದೆ ಕುಳಿತಿದ್ದು, ನಮಗೆ ಈ ಕೆಲಸ ದೊರಕಿದ್ದರಿಂದ ಒಂದು ರಾಷ್ಟ್ರ ಧ್ವಜಕ್ಕೆ 4 ರೂಪಾಯಿ ನೀಡುತ್ತಿದ್ದಾರೆ ಎಂದು ರಾಘವೇಂದ್ರ ಸಂಜೀವಿನಿ ಒಕ್ಕೂಟದ ಸದಸ್ಯೆ ನರ್ಮದಾ ಸಂತೋಷ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಬೇಡಿಕೆಯಂತೆ ರಾಷ್ಟ್ರಧ್ವಜಗಳನ್ನು ದೊರಕಿಸಲು ಯೋಜಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ಸ್ವಸಹಾಯ ಸಂಘಗಳನ್ನು ಬಳಸಿಕೊಂಡು ನಿಯಮಾನುಸಾರ ರಾಷ್ಟ್ರಧ್ವಜ ತಯಾರಿಸಲು ತರಬೇತಿ ನೀಡಲಾಗಿದೆ. ಹೀಗೆ ಸ್ವಸಹಾಯ ಸಂಘಗಳಿಂದ ತಯಾರಿಸುವ ರಾಷ್ಟ್ರಧ್ವಜಕ್ಕೆ 30 ರೂಪಾಯಿ ಬೆಲೆ ನಿಗದಿ ಮಾಡಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದರು.