ರಾಯಚೂರು ಚುನಾವಣಾ ಫಲಿತಾಂಶ, ಕಾಂಗ್ರೆಸ್ಗೆ ಸೋಲು
ರಾಯಚೂರು, ಮೇ 24 : ಕಾಂಗ್ರೆಸ್ ಭದ್ರಕೋಟೆ ಎಂದು ಹೇಳುತ್ತಿದ್ದ ರಾಯಚೂರು ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್ನ ಬಿ.ವಿ.ನಾಯಕ್ ಸೋಲು ಕಂಡಿದ್ದಾರೆ. ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಅವರು ಗೆಲುವು ಸಾಧಿಸಿದ್ದಾರೆ.
2009ರ ಬಳಿಕ 2019ರಲ್ಲಿ ರಾಯಚೂರು ಕ್ಷೇತ್ರದಲ್ಲಿ ಕಮಲ ಅರಳಿದೆ. ರಾಜಾ ಅಮರೇಶ್ವರ ನಾಯಕ 5,98,337 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್ನ ಬಿ.ವಿ.ನಾಯಕ್ ಅವರು 4,80,621 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
1,17,716 ಮತಗಳ ಅಂತರದಿಂದ ಬಿ.ವಿ.ನಾಯಕ್ ಅವರು ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ರಾಯಚೂರಿನಲ್ಲಿ ಸಂಸದರಾಗಿದ್ದ ದಿ.ವೆಂಕಟೇಶ ನಾಯಕ್ ರೀತಿಯಲ್ಲಿ ಅವರ ಪುತ್ರ ಬಿ.ವಿ.ನಾಯಕ್ ಕೂಡಾ ಗೆಲುವು ಮುಂದುವರೆಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.
1989ರಲ್ಲಿ ಲಿಂಗಸುಗೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ರಾಜಾ ಅಮರೇಶ್ವರ ನಾಯಕ ಅವರು 10 ವರ್ಷ ಗೆಲುವು ಕಂಡಿರಲಿಲ್ಲ. 1999ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ 2109ರ ಚುನಾವಣೆಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಪರಿಶಿಷ್ಟರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸಾಂಪ್ರದಾಯಿಕ ಮತಗಳ ಬೆಂಬಲ ಸಿಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ 1998ರಲ್ಲಿ ದಿ.ವೆಂಕಟೇಶ ನಾಯಕ್ ಅವರು ಸಂಸದರಾಗಿ ಆಯ್ಕೆಯಾದ ಬಳಿಕ 20 ವರ್ಷಗಳಿಂದಲೂ ಅವರ ಕುಟುಂಬದಲ್ಲಿ ಒಬ್ಬರಾದರೂ ಜನಪ್ರತಿನಿಧಿಗಳಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಕುಟುಂಬದಲ್ಲಿ ಯಾರಿಗೂ ಅಧಿಕಾರವಿಲ್ಲ.