ಮಸ್ಕಿ: ವರುಣನ ಆರ್ಭಟಕ್ಕೆ ಭತ್ತದ ಬೆಳೆ ನಾಶ, ಕಣ್ಣೀರಿಟ್ಟ ರೈತ
ರಾಯಚೂರು, ಏಪ್ರಿಲ್ 8: ಕೊರೊನಾವೈರಸ್ ಭೀತಿಯ ನಡುವೆಯೂ ಭೂಮಿ ತಾಯಿಯ ಚೊಚ್ಚಲ ಮಗ ತನ್ನ ಕಾಯಕ ನಿಲ್ಲಿಸಿಲ್ಲ. ಆದರೆ, ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯ ಮಸ್ಕಿ ತಾಲೂಕಿನ ಉಸ್ಕಿಹಾಳ ಗ್ರಾಮದಲ್ಲಿ ರೈತರು ಬೆಳೆದಿದ್ದ ಭತ್ತ ನೆಲಕ್ಕುರುಳಿದೆ. ಕಟಾವಿಗೆ ಬಂದ ಭತ್ತ ನೆಲಸಮವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.
ಉಸ್ಕಿಹಾಳದ ರೈತ ರಂಗನಗೌಡ ತಂದೆ ಹನುಮನಗೌಡ ಎಂಬುವವರು 6 ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಿದ್ದರು, ಭತ್ತದ ನಾಟಿಗೆ ಅವರು 2 ಲಕ್ಷ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಿದ್ದರು. ಎಕರೆಗೆ 40 ಚೀಲ ಇಳುವರಿಯ ನಿರೀಕ್ಷೆಯಲ್ಲಿ ರಂಗನಗೌಡ ಇದ್ದರು, ಆದ್ರೆ ವರುಣನ ಆರ್ಭಟಕ್ಕೆ ಸಿಲುಕಿದ ಭತ್ತ ಸಂಪೂರ್ಣವಾಗಿ ನಾಶವಾಗಿದ್ದು ರೈತ ಕಣ್ಣಿರಿಟ್ಟಿದ್ದಾರೆ.
ಕೊರೊನಾದಿಂದ ಚಿತ್ರದುರ್ಗದಲ್ಲಿ ಕುರಿಗಳ ಪಾಲಾಯಿತಲ್ಲ ಇಷ್ಟೊಂದು ಟೊಮೆಟೊ
ಇದೇ ಗ್ರಾಮದ ರೈತರಾದ ತಿಮ್ಮನಗೌಡ ತಂದೆ ಹನುಮನಗೌಡ 2.5 ಎಕರೆ, ಮಲ್ಲನಗೌಡ ತಂದೆ ಭೀಮನಗೌಡ 4 ಎಕರೆ, ಈರಪ್ಪ ಅಡವಿಬಾವಿ ಎಂಬ ರೈತರ ಭತ್ತ ನಾಶವಾಗಿದ್ದು, ಅನ್ನದಾತರು ಕಣ್ಣೀರಿಟ್ಟಿದ್ದಾರೆ. ಎಲ್ಲೆಡೆ ಮಹಾಮಾರಿ ಕೊರೋನಾ ಸೋಂಕಿನ ಹರಡುತ್ತಿರುವುದರಿಂದ ಈ ಸೊಂಕು ತಗಲದಂತೆ ಮುಂಜಾಗ್ರತೆ ವಹಿಸಬೇಕು ಮತ್ತು ತಪ್ಪದೆ ಸಾಮಾಜಿಕ ಅಂತರದೊಂದಿಗೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು ಎಂದು ಸರ್ಕಾರ ಜಾಗೃತಿ ಸಂದೇಶ ನೀಡಿದೆ. ಆದರೆ ಬೆಳೆ ಹಾನಿ ನಷ್ಟ ಪರಿಹಾರದ ಬಗ್ಗೆ ಮಾತನಾಡಿಲ್ಲ ಎಂದು ರೈತ ಸಮೂಹ ಗೋಲು ತೋಡಿಕೊಂಡಿದೆ.
ಅನೇಕ ಗ್ರಾಮಗಳಲ್ಲಿ ಸಜ್ಜೆ ನಾಶ
ಅಲ್ಲದೇ ತಾಲೂಕಿನ ಪಾಮನಕಲ್ಲೂರು ಹೋಬಳಿಯ ಪಾಮನಕಲ್ಲೂರು, ಕೋಟೆಕಲ್, ಆನಂದಗಲ್, ಹರ್ವಾಪುರ, ತುಪ್ಪದೂರು ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ಬೋರ್ ವೆಲ್ ನೀರಿನಿಂದ ಬೆಳೆದಿದ್ದ ಸಜ್ಜೆ ನೆಲಕ್ಕುರುಳಿದ್ದು ಈ ಭಾಗದ ರೈತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೃಷಿಕರಿಗೆ ಬೆಳೆ ಇಲ್ಲ, ಕೈಯಲ್ಲಿ ಹಣವಿಲ್ಲ
ಪ್ರಸ್ತುತ ಕೊರೊನಾ ಎಂಬ ಮಹಾಮಾರಿ ಜಗತ್ತನೇ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಭಾಗದ ರೈತರು ತಮ್ಮ ಕುಟುಂಬದ ಕೆಲ ಸದಸ್ಯರನ್ನು ಬೆಂಗಳೂರು, ಮುಂಬೈ, ಪುಣೆ, ಪಣಜಿ ಸೇರಿದಂತೆ ಮಹಾನಗರಗಳಿಗೆ ದುಡಿಯಲು ಕಳುಹಿಸಿ, ಕುಟುಂಬದಲ್ಲಿ ಕೆಲವರು ಕೃಷಿಯಲ್ಲಿ ತೊಡಗಿಕೊಂಡಿರುತ್ತಿದ್ದರು. ಕೃಷಿಯಲ್ಲಿ ಸಂಕಷ್ಟ ಎದುರಾದಾಗ ಮಹಾನಗರದಲ್ಲಿ ಕುಟುಂಬಸ್ಥರು ದುಡಿದು ತರುತ್ತಿದ್ದ ಹಣವನ್ನೇ ಅನ್ನದಾತರು ತಮ್ಮ ಕೃಷಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದರು. ಆದರೆ ಈಗ ಮಹಾನಗರಗಳಲ್ಲಿರೋ ಅನ್ನದಾತರ ಕುಟುಂಬಸ್ಥರು ಕೊರೊನಾ ಮಹಾಮಾರಿಗೆ ಎದುರಿ, ಕೆಲಸ ಸಿಗದೇ ಊರು ಸೇರಿಕೊಂಡಿದ್ದು ಕೃಷಿಯನ್ನೇ ನಂಬಿಕೊಂಡು ಕುಳಿತಿರುವ ಅನ್ನದಾತರಿಗೆ ಬೇರೆ ದಾರಿ ಕಾಣದಾಗಿದೆ.
ಆತ್ಮಹತ್ಯೆ ಪರಿಹಾರವಲ್ಲ, ಅನ್ನದಾತರೆ ಆತ್ಮಸ್ಥೈರ್ಯದಿಂದಿರಿ: ಬಿ.ಸಿ.ಪಾಟೀಲ
ಮುಂದಿನ ಬದುಕು ಹೇಗೆ ಎಂಬ ಚಿಂತೆ
ಬೆಳೆಯೇ ಬದುಕು ಎಂದು ನಂಬಿಕೊಂಡು ಕುಳಿತಿದ್ದ ಅನ್ನದಾತರು ಬೆಳೆ ಕಳೆದುಕೊಂಡಿದ್ದಾರೆ. ಮುಂದಿನ ಬದುಕು ಹೇಗೆ ಎಂದು ತಿಳಿಯದ ಪರಿಸ್ಥಿತಿಯಲ್ಲಿದ್ದಾರೆ. ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ ರೈತರ ಬೆನ್ನಿಗೆ ಸರ್ಕಾರ ನಿಲ್ಲಬೇಕು ಎಂದು ಅನೇಕ ರೈತರು ಆಗ್ರಹಿಸಿದ್ದಾರೆ. ಈ ಭಾಗದ ರೈತರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡಲಿ ಎಂಬುದೇ ಈ ವರದಿಯ ಆಶಯವಾಗಿದೆ.
ಕೃಷಿ ಸಚಿವರ ಭರವಸೆ
ಇದರಿಂದ ನಿಮ್ಮನ್ನೆ ನಂಬಿದ ಕುಟುಂಬಸ್ಥರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ರೈತಾಪಿ ವರ್ಗ ಆತ್ಮಹತ್ಯೆದಂಥ ಕಠೋರ ನಿರ್ಣಯ ಕೈಗೊಳ್ಳಬಾರದು. ಸರ್ಕಾರ ನಿಮ್ಮೊಂದಿಗಿದೆ ಎಂದು ಸಚಿವ ಬಿ.ಸಿ.ಪಾಟೀಲ ಅವರು ರೈತರಿಗೆ ಧೈರ್ಯ ತುಂಬಿದ್ದಾರೆ.
ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ಲಾಕ್ ಡೌನ್ ಇದೆ. ಇಂತಹ ಸಂದರ್ಭದಲ್ಲಿಯೂ ರೈತನಿಗೆ ಮತ್ತು ಕೃಷಿ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃಷಿ ಸಂಬಂಧಿತ ಚಟುವಟಿಕೆಗಳ ಕಾರ್ಯಾರಂಭಕ್ಕೆ ಆದೇಶಿಸಿದ್ದಾರೆ. ಕೃಷಿ ಉತ್ಪನ್ನಗಳ ಮಾರಾಟ, ಸಾಗಾಣಿಕೆ ವ್ಯವಸ್ಥೆ, ಪೂರಕ ಚಟುವಟಿಕೆಗಳು ನಿರಂತರ ಇರಲಿವೆ ಎಂದಿದ್ದಾರೆ.