ಕೊರೊನಾ ಭೀತಿ; ರಾಯಚೂರಲ್ಲಿ ಬಸ್ ಓಡದೇ 28 ಲಕ್ಷ ನಷ್ಟ
ರಾಯಚೂರು, ಮಾರ್ಚ್ 17 : ಕೊರೊನಾ ಭೀತಿ ಬೆಂಗಳೂರು ಮಾತ್ರವಲ್ಲ ವಿವಿಧ ಜಿಲ್ಲೆಗಳಲ್ಲಿಯೂ ಪರಿಣಾಮ ಬೀರಿದೆ. ರಾಯಚೂರಿನಲ್ಲಿ ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ 40 ಬಸ್ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
Recommended Video
ರಾಯಚೂರು ಜಿಲ್ಲೆಯಲ್ಲಿ ಕಳೆದ ಆರು ದಿನಗಳಲ್ಲಿ ಸರ್ಕಾರಿ ಬಸ್ಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಇದರಿಂದಾಗಿ ದಿನವವೊಂದಕ್ಕೆ 100 ಟ್ರಿಪ್ ಕಡಿತ ಮಾಡಿದ್ದು, 40 ಬಸ್ ಸಂಚಾರ ರದ್ದುಗೊಂಡಿದೆ. 28 ಲಕ್ಷ ರೂಪಾಯಿ ನಷ್ಟವಾಗಿದೆ.
ಜಿಲ್ಲೆಯಿಂದ ಶ್ರೀಶೈಲಕ್ಕೆ ತೆರಳುತ್ತಿದ್ದ 55 ಬಸ್ಗಳನ್ನು ರದ್ದುಗೊಳಿಸಲಾಗಿದೆ. ರಾಯಚೂರು-ಶ್ರೀಶೈಲ ಮಾರ್ಗದಲ್ಲಿ 15 ಬಸ್ಗಳು ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿವೆ. ಕಲಬುರಗಿಯಲ್ಲಿ ಕೊರೊನಾದಿಂದ ವೃದ್ಧನೊಬ್ಬ ಮೃತಪಟ್ಟ ಬಳಿಕ ರಾಯಚೂರು-ಕಲಬುರಗಿ ಮಾರ್ಗದ ಬಸ್ ಸಂಚಾರ ರದ್ದಾಗಿದೆ.
ರಾಯಚೂರು ಜಿಲ್ಲೆಯ ಒಟ್ಟು 8 ಡಿಪೋಗಳಲ್ಲಿ ಹಲವು ಮಾರ್ಗಗಳ ಬಸ್ಗಳನ್ನು ರದ್ದುಪಡಿಸಲಾಗಿದೆ. ರಾಜ್ಯಾದ್ಯಂತ ಸರ್ಕಾರಿ ಬಸ್ಗಳ ಸಂಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಐಷಾರಾಮಿ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ 15 ದಿನಗಳಲ್ಲಿ ಕೆಎಸ್ಆರ್ಟಿಸಿ ಸುಮಾರು 3.2 ಲಕ್ಷ ಕಿ. ಮೀ. ಸಂಚಾರವನ್ನು ರದ್ದುಗೊಳಿಸಿದ್ದು, ಸೋಮವಾರ 585 ಬಸ್ ಸಂಚಾರ ಸ್ಥಗಿತಗೊಳಿಸಿದೆ. ಇದರಿಂದಾಗಿ 3.91 ಕೋಟಿ ರೂ. ನಷ್ಟ ಉಂಟಾಗಿದೆ. ಹಲವು ಜಿಲ್ಲೆಗಳಿಗೆ ತೆರಳಬೇಕಿದ್ದ ಬಸ್ಗಳು ಡಿಪೋದಲ್ಲಿಯೇ ಉಳಿದಿವೆ.