ಸಾಲ ಮಾಡಿ ಮಕ್ಕಳಿಗೆ ಬಿಸಿಯೂಟ ಬಡಿಸುತ್ತಿರುವ ರಾಯಚೂರು ಶಿಕ್ಷಕರು
ರಾಯಚೂರು, ಸೆಪ್ಟೆಂಬರ್, 23: ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಶಾಲಾ ಮಕ್ಕಳ ಬಿಸಿಯೂಟಕ್ಕೆ ಖರ್ಚು ವೆಚ್ಚ ನೀಡಲು ಸರ್ಕಾರದ ಹಿಂದೇಟು ಹಾಕುತ್ತಿದ್ದು, ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.
ಜಿಲ್ಲೆಯ 7 ತಾಲೂಕು ಶಾಲೆಗಳಿಗೆ ಕಳೆದ 4 ತಿಂಗಳಿನಿಂದ ಬಿಸಿಯೂಟ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಶಿಕ್ಷಕರು ಸಾಲ ಮಾಡಿ, ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಲ್ಪಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಮೊಟ್ಟೆ, ತರಕಾರಿ ಹಾಗೂ ಇನ್ನಿತರ ದಿನಸಿಗಳಿಗಾಗಿ ಪ್ರತಿನಿತ್ಯ 500ರಿಂದ ಸಾವಿರ ರೂಪಾಯಿ ವೆಚ್ಚ ತಗುಲುತ್ತದೆ.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನಿಲ್ಲದ ಔಷಧಿ ದಂಧೆ; ಇಬ್ಬರು ಅಮಾನತು
ರಾಜ್ಯ ಸರ್ಕಾರ ಸಕಾಲಕ್ಕೆ ಅನುದಾನ ನೀಡದಿರುವುದರಿಂದ, ಶಾಲಾ ಶಿಕ್ಷಕರೇ ತಮ್ಮ ಸ್ವಂತ ಹಣದಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಲ್ಲಿನ ಸ್ಥಳೀಯರು, ನೆಪ ಮಾತ್ರಕ್ಕೆ ಬಿಸಿಯೂಟ ಯೋಜನೆಯನ್ನು ಸರ್ಕಾರ ಕೈಗೊಂಡಿದೆ. ಆದರೆ ಶಾಲಾ ಮಕ್ಕಳ ಬಿಸಿಯೂಟದ ವ್ಯವಸ್ಥೆಗೆ ಸಕಾಲಕ್ಕೆ ಸರ್ಕಾರ ಅನುದಾನವನ್ನು ನೀಡುತ್ತಿಲ್ಲ. ಶಿಕ್ಷಕರೇ ತಮ್ಮ ಸ್ವಂತ ಹಣದಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಬಿಸಿಯೂಟಕ್ಕೆ ಹಣ ಬಿಡುಗಡೆ ಮಾಡದ ಸರ್ಕಾರ
ಇದನ್ನು ನಿರ್ವಹಿಸಲಾಗದೆ, ಬಿಸಿಯೂಟ ಸ್ಥಗಿತಗೊಳಿಸದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆಯವರನ್ನು ಕಾಡಿ, ಬೇಡಿ ಮಕ್ಕಳ ಬಿಸಿಯೂಟ ಸಿದ್ಧತೆಗೆ ಹಣ ಹೊಂದಿಸುವ ಸ್ಥಿತಿ ಜಿಲ್ಲೆಯ ಶಿಕ್ಷಕರದ್ದಾಗಿದೆ. ಬಿಸಿಯೂಟ ಅನುದಾನ ಬಿಡುಗಡೆಗೆ ಸಂಬಂಧಿಸಿ ಶಿಕ್ಷಕರು ಪದೇ ಪದೇ ಜಿಲ್ಲಾ ಪಂಚಾಯತ್ ಆಡಳಿತಕ್ಕೆ ಮನವಿ ಮಾಡುತ್ತಿದ್ದಾರೆ. ಆದರೂ ಇದುವರೆಗೂ ಯಾವುದೇ ಪ್ರಯೋಜನಗ ಆಗಿಲ್ಲ. ಜಿಲ್ಲಾ ಪಂಚಾಯತ್ ಅಧಿಕಾರಿಗಳು ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದ್ದರೆ ಶಿಕ್ಷಕರು ಇನ್ನು ಹೆಚ್ಚಾಗಿ ತೊಂದರೆ ಅನುಭವಿಸಬೇಕಾಗುತ್ತದೆ. ತಮ್ಮ ವೇತನದ ಹಣವನ್ನು ಬಳಸಿ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯದಲ್ಲಿ ತೊಡಗಿದ ಶಿಕ್ಷಕರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ನೀರು ಸ್ಥಗಿತ; ರಾಯಚೂರಿನ ರೈತರು ಕಂಗಾಲು
ಜಿಲ್ಲೆಯ ಶಾಲಾ ಶಿಕ್ಷಕರ ಜೀವನ ಮೂರಾಬಟ್ಟೆ
ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಆಯಾ ಕ್ಷೇತ್ರಗಳ ಶಾಸಕರು ಮಾತ್ರ ಶಾಲಾ ಮಕ್ಕಳ ಬಿಸಿಯೂಟದ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಯಾವ ಒತ್ತಡವನ್ನು ಹಾಕುತ್ತಿಲ್ಲ. ಹೀಗೆ ಜಿಲ್ಲೆಯ ಜನಪ್ರತಿನಿಧಿಗಳು ಕನಿಷ್ಟ ಕಾಳಜಿ ಪ್ರದರ್ಶಿಸದಿರುವುದು ಸಾರ್ವಜನಿಕಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಇತ್ತೀಚೆಗಷ್ಟೆ ಬಿಸಿಯೂಟ ಸಿಬ್ಬಂದಿ ವರ್ಗ ಮುಷ್ಕರದಲ್ಲಿ ತೊಡಗಿತ್ತು. ಈ ಸಂದರ್ಭದಲ್ಲಿ ಶಾಲಾ, ಶಿಕ್ಷಕರು ಪಾಠ, ಪ್ರವಚನ ಬಿಟ್ಟು ನಳಪಾಕದಂತೆ ಸೌಟ್, ತಟ್ಟೆ ಹಿಡಿದು ಮಕ್ಕಳ ಊಟ ಸಿದ್ಧತೆಯಲ್ಲಿ ತೊಡಗಿದ್ದರು. ಇದೀಗ ಬೋಧನಾ ಪ್ರಕ್ರಿಯೆಗಳನ್ನು ಬಿಟ್ಟು ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ಒದಗಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಶಿಕ್ಷಕರು ಕಾಲ ಕಳೆಯುವಂತಾಗಿದೆ. ಪ್ರತಿ ತಿಂಗಳು ಒಂದು ಶಾಲೆಗೆ ಕನಿಷ್ಟ 30 ಸಾವಿರದಿಂದ ಗರಿಷ್ಟ 50 ಸಾವಿರವರೆಗೂ ಅನುದಾನ ಅಗತ್ಯವಾಗಿದೆ.
ಶಿಕ್ಷಕರು ಕಣ್ಣೀರು, ಕ್ಯಾರೆ ಅನ್ನದ ಜನಪ್ರತಿನಿಧಿಗಳು
ಕಳೆದ 4 ತಿಂಗಳಿನಿಂದ ಸರ್ಕಾರ ಅನುದಾನ ನೀಡದಿರುವುದರಿಂದ ಒಂದೊಂದು ಶಾಲೆಯಲ್ಲಿ 1.30 ಲಕ್ಷದಿಂದ 2 ಲಕ್ಷದವರೆಗಿನ ಬಿಸಿಯೂಟ ಖರ್ಚು ವೆಚ್ಚವನ್ನು ಶಿಕ್ಷಕರೇ ಭರಿಸುವಂತಾಗಿದೆ. ವಿವಿಧ ಕಾಮಗಾರಿಗಳಲ್ಲಿ ಶೇಕಡಾ 40ರಷ್ಟು ಕಮಿಷನ್ ಪಡೆಯುವ ಕೆಲ ಶಾಸಕರು ತಮ್ಮದೇ ಕ್ಷೇತ್ರದ ಸರ್ಕಾರಿ ಶಾಲೆಗಳ ಮಕ್ಕಳ ಬಗ್ಗೆ ಕಿಂಚಿತ್ತು ಕಾಳಜಿಯನ್ನು ತೋರಿಸುತ್ತಿಲ್ಲ. ಇಲ್ಲಿವರೆಗೂ ಶಾಲೆಗಳಿಗೆ ಕನಿಷ್ಟ ಒಂದು ದಿನದ ಊಟಕ್ಕಾಗಿ ಖರ್ಚು ವೆಚ್ಚ ನೀಡದಿರುವುದು ಜನಪ್ರತಿನಿಧಿಗಳ ಜನಪರ ಕಾಳಜಿ ಎಷ್ಟಿದೆ ಎಂದು ಗೊತ್ತಾಗುತ್ತಿದೆ ಎಂದು ಸ್ಥಳಿಯರು ಆಕ್ರೋಶವನ್ನು ಹೊರಹಾಕಿದ್ದಾರೆ.
ಶಿಕ್ಷಕರ ಕಷ್ಟಕ್ಕೆ ಸ್ಪಂಧಿಸದ ಜನಪ್ರತಿನಿಧಿಗಳು
ಶಿಕ್ಷಕರು ತಮ್ಮ ಕುಟುಂಬಗಳನ್ನು ಉಪವಾಸ ಬಿಟ್ಟು ಶಾಲಾ ಮಕ್ಕಳ ಬಿಸಿಯೂಟಕ್ಕಾಗಿ ತಲೆಕೆಡಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಬಿಸಿಯೂಟಕ್ಕೆ ಅನುದಾನ ಬಿಡುಗಡೆಗೊಳ್ಳದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಂಸದರು, ಶಾಸಕರ ಗಮನಕ್ಕೂ ತಂದಿದ್ದೇವೆ. ಆದರೆ ಇದುವರೆಗೂ ಯಾರು ನಮ್ಮ ಕಷ್ಟಗಳನ್ನು ಆಲಿಸಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳು ಮಾಹಿತಿ ಇದ್ದರೂ ಯಾವುದೇ ಪರ್ಯಾಯ ವ್ಯವಸ್ಥೆಗೆ ಮುಂದಾಗುತ್ತಿಲ್ಲ ಎಂದು ಶಿಕ್ಷಕರು ಗೋಳಾಡಿದ್ದಾರೆ. ಇದರಿಂದ ಶಾಲೆಯಲ್ಲಿ ಬಿಸಿಯೂಟ ಮುಂದುವರೆಸಲು ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.