ರಾಯಚೂರು ವಿದ್ಯಾರ್ಥಿನಿ ಸಾವು, ಅನುಮಾನಕ್ಕೆ ಕಾರಣವಾದ ಅಂಶಗಳು
ರಾಯಚೂರು, ಏಪ್ರಿಲ್ 19: ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆಕೆಗೆ ನ್ಯಾಯ ದೊರಕಿಸಿಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಈ ಅಭಿಯಾನವು ರಾಷ್ಟ್ರಮಟ್ಟವನ್ನು ತಲುಪಿದೆ.
ರಾಯಚೂರಿನ ನವೋದಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಏಪ್ರಿಲ್ 13ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ನಂತರ ಏಪ್ರಿಲ್ 16ರಂದು ಕಾಲೇಜಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ನೇಣುಹಾಕಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಳು.
ರಾಯಚೂರಿನಲ್ಲಿ ವಿದ್ಯಾರ್ಥಿನಿಯ ನಿಗೂಢ ಸಾವು, ಕಟ್ಟೆಯೊಡೆದ ಆಕ್ರೋಶ
ಆದರೆ ಅವರ ದೇಹದ ಮೇಲೆ ಸುಟ್ಟ ಗುರುತುಗಳು ಪತ್ತೆ ಆಗಿದ್ದವು, ಮಧು ನೇಣುಹಾಕಿದ ಸ್ಥಿತಿಯಲ್ಲಿ ದೊರೆತ ಜಾಗದಲ್ಲಿ ಮಧು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಹ ದೊರೆತಿತ್ತು. ಯಾರೋ ಕಿಡಿಗೇಡಿಗಳು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ ಎಂಬ ಅನುಮಾನ ಬಲವಾಗುತ್ತಿದೆ.
ಅವರ ಮೃತದೇಹವು ಮಾಣಿಕ್ ಪ್ರಭು ಗುಡ್ಡದ ಮೇಲೆ ಮಧು ಮೃತದೇಹ ಪತ್ತೆಯಾಗಿದೆ. ಆಕೆಯ ದೇಹದ ಮೇಲೆ ರಕ್ತದ ಕಲೆಗಳು ಮತ್ತು ಸುಟ್ಟಕಲೆಗಳು ಇದ್ದವು. ಅಲ್ಲದೆ, ನೇಣುಹಾಕಿದ್ದರು ಆಕೆಯ ದೇಹ ಬಹುತೇಕ ನೆಲದ ಮೇಲೆಯೇ ಇತ್ತು. ಇದು ಮೊದಲ ನೋಟಕ್ಕೆ ಸಾವಿನ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು.
ಡೆತ್ನೋಟ್ನಿಂದ ಅನುಮಾನ ಬಲ
ಮೃತದೇಹ ಪತ್ತೆಯಾದ ಜಾಗದಲ್ಲಿ ಡೆತ್ನೋಟ್ ಸಹ ಪತ್ತೆ ಆಗಿತ್ತು, ಡೆತ್ನೋಟ್ನಲ್ಲಿ ನಾನು ಎಷ್ಟೆ ಓದಿದರೂ ಅಂಕಗಳು ಕಡಿಮೆ ಬರುತ್ತವೆ, ಪರೀಕ್ಷೆಯಲ್ಲಿ ಫೇಲ್ ಆಗಿದ್ದೇನೆ ಎಂಬುದಾಗಿ ಬರೆಯಲಾಗಿತ್ತು, ಆದರೆಮೃತ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಪಾಸಾಗಿದ್ದರು. ಇದು ಸಹ ಅನುಮಾನಕ್ಕೆ ಕಾರಣವಾಗಿದೆ. ಈ ಡೆತ್ನೋಟ್ ಅನ್ನು ಒತ್ತಡ ಹಾಕಿ ಬರೆಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗುತ್ತಿದೆ.
'ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ'
ಮೃತರ ತಾಯಿ ಅವರು ಹೇಳುವಂತೆ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹಾ ಸ್ವಭಾವದವರಾಗಿರಲಿಲ್ಲ, ಅದೂ ಸಹ ಪರೀಕ್ಷೆಯಲ್ಲಿ ಫೇಲ್ ಆದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹಾ ವ್ಯಕ್ತಿತ್ವದವರಾಗಿರಲಿಲ್ಲ. ಆಕೆ ಧೈರ್ಯವಂತೆಯಾಗಿದ್ದಳು ಎಂದು ತಾಯಿ ರೇಣುಕಾದೇವಿ ಹೇಳುತ್ತಾರೆ.
ಪ್ರೀತಿಗಾಗಿ ಪೀಡಿಸುತ್ತಿದ್ದ ಸ್ನೇಹಿತ
ಸುದರ್ಶನ್ ಎಂಬಾತ ಬಹಳ ವರ್ಷದಿಂದ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ, ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಈತನೇ ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ಕೊಲೆ ಮಾಡಿರುವ ಶಂಕೆ ದಟ್ಟವಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆದಿದೆ
ವಿದ್ಯಾರ್ಥಿನಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿಯ ಅಂಶಗಳು ಬಹಿರಂಗವಾಗಬೇಕಿದೆ. ಸಾವಿನ ಬಗ್ಗೆ ತನಿಖೆ ಆಗಬೇಕೆಂದು ವಿದ್ಯಾರ್ಥಿಗಳು ಬೀದಿಗಿಳಿದಿದ್ದು, ಸಾಮಾಜಿಕ ಜಾಲತಾಣದಲ್ಲಿನ್ಯಾಯಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ.